ಸುಲಭ ಉದ್ಯಮಕ್ಕೆ ಅವಕಾಶ ನೀಡುತ್ತೇವೆ; ಜೀವನವನ್ನು ಸುಗಮಗೊಳಿಸಿ: ಪ್ರಧಾನಿ ಮೋದಿ

ಕೋವಿಡ್-19 ಸಾಂಕ್ರಾಮಿಕ ನಮಗೆ ಸಾಕಷ್ಟು ಕಲಿಸಿದೆ. ಜಾಗತೀಕರಣ ಅಗತ್ಯ ಆದರೆ ಅದರೊಟ್ಟಿಗೆ ಸ್ವಾವಲಂಬನೆ ಕೂಡ ಅಷ್ಟೇ ಮುಖ್ಯ ಎಂಬುದು ನಮಗೆ ಅರ್ಥವಾಗಿದೆ. ಕೇಂದ್ರ ಸರ್ಕಾರದ ಆತ್ಮನಿರ್ಭರ ಅಭಿಯಾನ ಇಂದಿನ ಯುವಜನತೆಗೆ ಹೊಸ ಅವಕಾಶಗಳನ್ನು ತೆರೆದಿಡುತ್ತಿದೆ. ಆ ಮೂಲಕ ಯುವಜನರು ತಮ್ಮ ಸೃಜನಶೀಲತೆಯನ್ನು ಮುಕ್ತವಾಗಿ ತೋರಿಸಬಹುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ 51ನೇ ವಾರ್ಷಿಕ ಸಮ್ಮೇಳನದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ, ಇಂದು ಭಾರತ ದೇಶದಲ್ಲಿ ಯುವಕರಿಗೆ ಸುಲಭವಾಗಿ ಉದ್ಯಮ ನಡೆಸಲು ಪೂರಕವಾಗುವಂತಹ ವಾತಾವರಣ ನಿರ್ಮಿಸಿಕೊಡಬೇಕಾಗಿದೆ, ಆ ಮೂಲಕ ತಮ್ಮ ಸಂಶೋಧನೆಗಳ ಮೂಲಕ ಕೋಟ್ಯಂತರ ಭಾರತೀಯರ ಜೀವನದಲ್ಲಿ ಬದಲಾವಣೆಯನ್ನು ತರಬಹುದು ಎಂದಿದ್ದಾರೆ.

ಕೋವಿಡ್ ನಂತರ ವಿಶ್ವದ ಚಿತ್ರಣವೇ ಬದಲಾಗಲಿದ್ದು, ತಂತ್ರಜ್ಞಾನ ಬಹಳ ದೊಡ್ಡ ಪಾತ್ರ ವಹಿಸಲಿದೆ. ನಿಮ್ಮನಿಮ್ಮಲ್ಲೇ ಸವಾಲುಗಳನ್ನು ಇಟ್ಟುಕೊಂಡು ಪ್ರತಿದಿನ ಹೊಸ ಹೊಸ ವಿಷಯಗಳನ್ನು ಕಲಿಯುತ್ತಾ ಹೋಗಿ, ನಿಮ್ಮ ಜೀವನದಲ್ಲಿ ನಿಮ್ಮನ್ನು ವಿದ್ಯಾರ್ಥಿಯಾಗಿ ನೀವು ನೋಡಬೇಕು, ನಿಮಗೆ ಗೊತ್ತಿರುವುದು ಸಾಕು ಎಂದು ಯಾವತ್ತೂ ಅಂದುಕೊಳ್ಳಬೇಡಿ ಎಂದರು.

ಎರಡನೇ ಗುಣ ವಿನಯತೆ ಅಥವಾ ನಮ್ರತೆ, ನಿಮ್ಮ ಯಶಸ್ಸು, ಸಾಧನೆ ಬಗ್ಗೆ ನಿಮಗೆ ಹೆಮ್ಮೆಯಿರಬೇಕು, ನೀವು ಮಾಡಿರುವ ಸಾಧನೆಯನ್ನು ಕೆಲವೇ ಕೆಲವರು ಮಾಡಿರುತ್ತಾರೆ. ಸಾಧನೆ ಮಾಡಿದ ನಂತರ ನಿಮ್ಮಲ್ಲಿ ವಿನಯತೆ ಮತ್ತಷ್ಟು ಹೆಚ್ಚಾಗಬೇಕು. ನೀವೆಲ್ಲರೂ ವಿಶೇಷ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳು, ಬಹಳ ಕಠಿಣವಾದ ಜೆಇಇ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ನೀವು ಐಐಟಿ ಪ್ರವೇಶ ಮಾಡಿದ್ದೀರಿ. ವಿನಯತೆ, ನಮ್ರತೆಯ ಜೊತೆಗೆ ಯಾವ ಪರಿಸ್ಥಿತಿಗೆ ಕೂಡ ಹೊಂದಿಕೊಳ್ಳುವ ಗುಣ ನಿಮ್ಮಲ್ಲಿ ಇರಬೇಕು ಎಂದು ಸಹ ವಿದ್ಯಾರ್ಥಿಗಳಿಗೆ ಹೇಳಿದರು.

ಇಂದು ಭಾರತ ಕಂಡ ಶ್ರೇಷ್ಠ ವಿಜ್ಞಾನಿ ಸರ್ ಸಿ ವಿ ರಾಮನ್ ಅವರ ಜನ್ಮದಿನ. ಅವರು ನೀಡಿದ ಕೊಡುಗೆಗಳು ನಮ್ಮನ್ನು ಎಂದೆಂದಿಗೂ ಉತ್ಸಾಹದಿಂದ ಇರುವಂತೆ ಮಾಡುತ್ತದೆ. ಅದರಲ್ಲೂ ಯುವ ವಿಜ್ಞಾನಿಗಳಿಗೆ ಅವರು ಆದರ್ಶ ಎಂದರು. ಎಂದು ಕೂಡ ಪ್ರಧಾನಿ ನೆನಪು ಮಾಡಿಕೊಂಡರು.


ಇದನ್ನೂ ಓದಿ: ತೆರೆಯದ ಶಾಲೆಗಳು: ಬಿಸಿಯೂಟದ ಬದಲು ಆಹಾರ ಧಾನ್ಯ ವಿತರಣೆಗೆ ಸರ್ಕಾರ ನಿರ್ಧಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights