ಯತ್ನಾಳ್ ಅವರನ್ನು ಪಕ್ಷದಿಂದ ಹೊರಹಾಕಬೇಕಾದ್ದು ಅನಿವಾರ್ಯ: ಅರುಣ್ ಸಿಂಗ್
ಸಿಎಂ ಯಡಿಯೂರಪ್ಪ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ಯತ್ನಾಳ್ಗೆ ಈಗಾಗಲೇ ನೋಟಿಸ್ ನೀಡಿದ್ದೇವೆ. ಆದರೂ ಅವರು ಬಿಎಸ್ವೈ ವಿರುದ್ದ ಮಾನತಾಡುತ್ತಲೇ ಇದ್ದಾರೆ. ಅವರು ಪಕ್ಷದಿಂದ ಉಚ್ಛಾಟಿಸಬೇಕಾದ ವ್ಯಕ್ತಿ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಯತ್ನಾಳ್ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಅವರ ಹಸರನ್ನೂ ತೆಗೆದುಕೊಳ್ಳುವುದಿಲ್ಲ. ಅವರ ಬಗ್ಗೆ ಮಾತನಾಡಿದರೆ ಅವರ ಪ್ರಸಿದ್ದಿ ಹೆಚ್ಚುತ್ತದೆ. ಅವರ ಕುರಿತು ಪ್ರಶ್ನೆಗಳನ್ನು ಕೇಳಬೇಡಿ ಎಂದು ಅರುಣ್ ಸಿಂಗ್ ಹೇಳಿದ್ದಾರೆ.
ಅವರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಪಕ್ಷದ ಶಿಸ್ತು ಸಮಿತಿಯು ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಇದು ಪಕ್ಷದ ಆಂತರಿಕ ವಿಚಾರವಾಗಿದೆ. ಹೆಚ್ಚು ಚರ್ಚೆ ಮಾಡಲು ಸಾಧ್ಯವಿಲ್ಲ. ಯತ್ನಾಳ್ ಬಗ್ಗೆ ನಮಗೆ ಕೊಂಚವೂ ವಿಶ್ವಾಸವಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯದ ಉಪಚುನಾವಣೆಗಳು ಮುಗಿದ ನಂತರ ರಾಜ್ಯದಲ್ಲಿ ನಾಯಕತ್ವ ಬದಲಾಗುತ್ತದೆ ಎಂದು ಯತ್ನಾಳ್ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ರೀತಿಯ ಬದಲಾವಣೆಗಳೂ ಇಲ್ಲ. ಆ ಬಗ್ಗೆ ಚರ್ಚೆಗಳೂ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಎಸ್ವೈ ವಿರುದ್ದ ಬಂಡಾಯ ಎದ್ದಿರುವ ಈಶ್ವರಪ್ಪ – ಯತ್ನಾಳ್ಗೆ RSS ಬೆಂಬಲವಿದೆ: ಸಿದ್ದರಾಮಯ್ಯ