ಬಿಎಸ್ವೈ ವಿರುದ್ದ ಬಂಡಾಯ ಎದ್ದಿರುವ ಈಶ್ವರಪ್ಪ – ಯತ್ನಾಳ್ಗೆ RSS ಬೆಂಬಲವಿದೆ: ಸಿದ್ದರಾಮಯ್ಯ
ರಾಜ್ಯದ ಮುಖ್ಯಂಮತ್ರಿ ಯಡಿಯೂರಪ್ಪ ವಿರುದ್ಧ ಆರ್ಎಸ್ಎಸ್ ಹಿನ್ನಲೆಯಿರುವ ಶಾಸಕ/ಸಚಿವರು ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಕಳದ ಮೂರು ತಿಂಗಳಿಂದ ಸಿಎಂ ವಿರುದ್ಧ ಯತ್ನಾಳ್ ಬಂಡಾಯ ಎದ್ದಿದ್ದರೆ, ಇದೀಗ ಈಶ್ವರಪ್ಪ ಅವರ ಜೊತೆ ಸೇರಿದ್ದಾರೆ. ಅವರ ಆರೋಪಗಳು ಸುಳ್ಳಾಗಿದ್ದರೆ ಬಿಜೆಪಿ ಹೈಕಮಾಂಡ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಅಂತಹ ಯಾವ ಕ್ರಮವನ್ನೂ ಜರುಗಿಸಿಲ್ಲ. ಏಕೆಂದರೆ ಆರ್ಎಸ್ಎಸ್ ಅವರ ಪರವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮಸ್ಕಿ ಕ್ಷೇತ್ರದಲ್ಲಿ ಚುನಾವಷಾ ಪ್ರಚಾರ ಮಾಡುತ್ತಿರುವ ಅವರು, ಅನ್ನಭಾಗ್ಯ ಯೋಜನೆ ಬಿಜೆಪಿ ಸರ್ಕಾರದ್ದು, ಆದರೆ 2013ರಲ್ಲಿ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಫೈಲ್ಗೆ ಸಹಿ ಹಾಕಿಲ್ಲ ಎಂದು ಹೇಳುವ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯಗೆ ನಾಚಿಕೆಯಾಗಬೇಕು. ಅನ್ನಭಾಗ್ಯ ಬಗ್ಗೆ ಕಾಳಜಿ ಇದ್ದರೆ ಅಕ್ಕಿ ಕಡಿತಗೊಳಿಸುವ ಬದಲು ಜಾಸ್ತಿ ಯಾಕೆ ಮಾಡಿಲ್ಲ. ಇಂತಹ ಸುಳ್ಳುಗಳನ್ನು ನಂಬುವಷ್ಟು ಜನ ದಡ್ಡರಲ್ಲ ಎಂದು ಹೇಳಿದರು.
ಮಸ್ಕಿಯಲ್ಲಿ ತುರ್ವಿಹಾಳ ಪರವಾಗಿ ಅನಿರೀಕ್ಷಿತ ಬೆಂಬಲವಿದೆ. ಬಸವಕಲ್ಯಾಣದಲ್ಲಿ ನಾರಾಯಣರಾವ್ ನಿಧನದ ಹಿನ್ನೆಲೆಯಲ್ಲಿ ಅವರ ಪತ್ನಿ ಮಲ್ಲಮ್ಮ ಬಗ್ಗೆ ಅನುಕಂಪ ಇದೆ. ಬೆಳಗಾವಿ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದಾರೆ. ಆದ್ದರಿಂದ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ಗೆ ಗೆಲುವು ನಿಶ್ಚಿತವಾಗಿದೆ ಎಂದು ಹೇಳಿದರು.