ಮಿಜೋರಾಂ ಗಡಿಯಲ್ಲಿ ಘರ್ಷಣೆ : ಅಸ್ಸಾಂನ ಐವರು ಪೊಲೀಸರು ದುರಂತ ಸಾವು..!

ಅಸ್ಸಾಂ ಮತ್ತು ಮಿಜೋರಾಂ ನಡುವಿನ ಗಡಿ ವಿವಾದದ ತೀವ್ರ ಉಲ್ಬಣಗೊಂಡಿದ್ದು, ಹಿಂಸಾತ್ಮಕ ಘರ್ಷಣೆಯಲ್ಲಿ ಕನಿಷ್ಠ ಐದು ಅಸ್ಸಾಂ ಪೊಲೀಸ್ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. 50ಕ್ಕೂ ಹೆಚ್ಚು ಸಾರ್ವಜನಿಕರು ಗಾಯಗೊಂಡಿದ್ದಾರೆ. ಕಚಾರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೂಡ ಗುಂಡೇಟಿನಿಂದ ಗಾಯಗೊಂಡಿದ್ದಾರೆ ಎಂದು ಅಸ್ಸಾಂ ಸರಕಾರ ತಿಳಿಸಿದೆ.

ಅಸ್ಸಾಂನ ವೈರೆಂಟ್ಗೆ ಪಟ್ಟಣದಲ್ಲಿ ಹಿಂಸಾಚಾರ ತಲೆದೋರಿದೆ. ಲೈಲಾಪುರದಲ್ಲಿ ಮೀಸಲು ಅರಣ್ಯ ಪ್ರದೇಶವನ್ನು ನಾಶಪಡಿಸಿ ರಸ್ತೆ ನಿರ್ಮಿಸಲಾಗುತ್ತಿದೆ ಮತ್ತು ಸೇನಾ ಶಿಬಿರವೊಂದನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದು ಮಿಜೋರಾಂ ವಿರುದ್ಧ ಅಸ್ಸಾಂ ಆರೋಪಿಸಿದೆ. ದುಷ್ಕರ್ಮಿಗಳು ತನ್ನ ಪೊಲೀಸರ ಮೇಲೆ ದಾಳಿ ನಡೆಸಿದ್ದು, ಬಳಿಕ ಪರಿಸ್ಥಿತಿ ನಿಯಂತ್ರಿಸಲು ಹೋದ ಮಿಜೋರಾಂ ಪೊಲೀಸರ ಮೇಲೆಯೂ ದಾಳಿ ನಡೆದಿದೆ ಎಂದು ಅದು ಹೇಳಿದೆ.

ಅಸ್ಸಾಂ ಪೊಲೀಸರು ಗಡಿ ದಾಟಿ ಒಳಬಂದ ಬಳಿಕ ಹಿಂಸಾಚಾರ ಆರಂಭವಾಗಿದೆ. ಅಸ್ಸಾಂ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿನ ವಾಹನಗಳಿಗೆ ಹಾನಿ ಮಾಡಿದ್ದಲ್ಲದೆ, ತನ್ನ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಮಿಜೋರಾಂ ಆರೋಪಿಸಿದೆ.

ಬೆಳಿಗ್ಗೆ 11.30ರ ವೇಳೆಗೆ ಸುಮಾರು 200 ಅಸ್ಸಾಂ ಪೊಲೀಸರು ವೈರೆಂಟ್ಗೆ ಪಟ್ಟಣದ ಆಟೋ ರಿಕ್ಷಾ ನಿಲ್ದಾಣಕ್ಕೆ ಬಂದಿದ್ದರು. ಸಮೀಪದಲ್ಲಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ ನೆಲೆಯನ್ನು ಬಲವಂತವಾಗಿ ಮುಚ್ಚಿಸಿದರು. ಬಳಿಕ ಹೆದ್ದಾರಿಯಲ್ಲಿ ವಾಹನಗಳಿಗೆ ಹಾನಿ ಮಾಡಿದರು. ಅದನ್ನು ತಡೆಯಲು ಪ್ರಯತ್ನಿಸಿದ ನಮ್ಮ ಅಧಿಕಾರಿಗಳ ಮಾತನ್ನು ಅವರು ಕೇಳಲಿಲ್ಲ. ಅಶ್ರುವಾಯು, ಗ್ರೆನೇಡ್‌ಗಳನ್ನು ಎಸೆದರು. ಸಂಜೆ 4.30ರ ವೇಳೆಗೆ ಗುಂಡುಗಳನ್ನು ಕೂಡ ಹಾರಿಸಿದರು ಎಂದು ಮಿಜೋರಾಂ ಮುಖ್ಯಮಂತ್ರಿ ಜೊರಂತಗಾ ಆರೋಪಿಸಿದ್ದಾರೆ. ಈ ಎರಡೂ ರಾಜ್ಯಗಳ ಸಿಎಂಗಳು ಟ್ವಿಟ್ಟರ್‌ನಲ್ಲಿ ಕಿತ್ತಾಡಿಕೊಂಡಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಟ್ವಿಟ್ಟರ್ ಪೋಸ್ಟ್ನಲ್ಲಿ ಅಗಲಿದ ಅಸ್ಸಾಂ ಪೋಲಿಸರಿಗೆ ಸಂತಾಪ ಸೂಚಿಸಿದ್ದಾರೆ.

ಮಿಜೋರಾಂ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಅಸ್ಸಾಂ ಐವರು ಪೊಲೀಸ್ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಶರ್ಮಾ ಸೋಮವಾರ ಹೇಳಿದ್ದಾರೆ. ಹೀಗಾಗಿ ಗೃಹ ಸಚಿವ ಅಮಿತ್ ಶಾ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights