ಬಳ್ಳಾರಿ: ಗಣಿಗಾರಿಕೆಯಿಂದ ಉಸಿರುಗಟ್ಟಿದೆ ಗ್ರಾಮ; ಸುಲ್ತಾನ್ಪುರದ ಗ್ರಾಮಸ್ಥರ ಸ್ಥಳಾಂತರ?
ಬಳ್ಳಾರಿಯಲ್ಲಿರುವ ವಿದ್ಯುತ್ ಉತ್ಪಾದನಾ ಸ್ಥಾವರ ಮತ್ತು ಇತರ ಗಣಿಗಾರಿಕೆ ಕಂಪನಿಗಳಿಂದಾಗಿ ಬಳ್ಳಾರಿ ಪಕ್ಕದಲ್ಲಿರುವ ಸುಲ್ತಾನ್ ಪುರ ಗ್ರಾಮದ ಜನರು ಉಸಿರಾಡುವುದೇ ಕಷ್ಟವಾಗಿದೆ. ಸ್ಥಾವರ ಮತ್ತು ಗಣಿಗಾರಿಕೆಯಿಂದ ಉತ್ಪತ್ತಿಯಾಗುವ ಧೂಳು ಹಳ್ಳಿಯ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಇಡೀ ಹಳ್ಳಿಯ ಜನರನ್ನು ಸ್ಥಳಾಂತರಿಸುವ ದುಸ್ಥಿತಿ ನಿರ್ಮಾಣವಾಗಿದೆ.
ಹಳ್ಳಿಯಲ್ಲಿ ವಾಸಿಸುತ್ತಿದ್ದ ಸುಮಾರು 3,000 ಜನರು ಧೂಳು ಮತ್ತು ಮಾಲಿನ್ಯದಿಂದ ತತ್ತರಿಸಿ ಹೋಗಿದ್ದಾರೆ. ಹೀಗಾಗಿ, ಸ್ಥಳೀಯ ಆಡಳಿತವು ಇಡೀ ಗ್ರಾಮವನ್ನೇ ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿದೆ. ಆದರೆ, ಗ್ರಾಮಸ್ಥರು ಷರತ್ತುಗಳನ್ನು ಆಡಳಿತದ ಮುಂದಿಟ್ಟಿದ್ದು, ಅವುಗಳಲ್ಲಿಗೆ ಅಡಳಿತ ಒಪ್ಪುವುದಾದರೆ ಮಾತ್ರ ಬೇರೆಡೆಗೆ ಹೋಗಲು ನಿರ್ಧರಿಸಿದ್ದಾರೆ.
ಸ್ಥಳಾಂತರವಾದ ನಂತರ ಸರ್ಕಾರ ತಾನು ಕೊಟ್ಟ ಭರವಸೆ ನೆರೆವೇರಿಸುವುದಿಲ್ಲ ಎಂದು ಹಲವು ಗ್ರಾಮಸ್ಥರು ಅನುಮಾನ ವ್ಯಕ್ತ ಪಡಿಸಿದ್ದಾರೆ. ಹಾಗೂ, ಹಲವರು ಇದು ತಾವು ಹುಟ್ಟಿ ಬೆಳೆದ ಸ್ಥಳ ಹೀಗಾಗಿ ನಾವು ಎಲ್ಲಿಯೂ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.
ಇದೇ ರೀತಿ ಈ ಮೊದಲು ನಡೆಸಿದ್ದ ಮತ್ತೊಂದು ಗ್ರಾಮದ ಸ್ಥಳಾಂತರ ಸರಾಗವಾಗಿ ನಡೆದಿರಲಿಲ್ಲ. ಹೀಗಾಗಿ, ಈ ಕ್ರಮ ಕೈಗೊಳ್ಳುವ ಮೊದಲು ಕರ್ನಾಟಕ ಸರ್ಕಾರದಿಂದ ಭರವಸೆ ನೀಡಬೇಕು ಎಂದು ಈ ಗ್ರಾಮದ ಸದಸ್ಯರು ಒತ್ತಾಯಿಸಿದ್ದಾರೆ.
ಬಳ್ಳಾರಿಯ 10 ಪ್ರಮುಖ ಗಣಿ ಕಂಪನಿಗಳು ಈ ಹಳ್ಳಿಯ ಸುತ್ತ ಸುತ್ತುವರಿದಿರುವ ಕಾರಣ ಇಡೀ ಗ್ರಾಮವನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಮುಂದಾಗಿದೆ. ಗಣಿಗಾರಿಯ ಮಾಲಿನ್ಯದಿಂದಾಗಿ ಈ ಪ್ರದೇಶದ ಸುತ್ತಲಿನ ಹಲವು ಹಳ್ಳಿಗಳಲ್ಲಿ ಹಲವಾರು ಕಾಯಿಲೆಗಳು ಉಂಟಾಗುತ್ತವೆ ಎಂದು ಆರೋಗ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆಡಳಿತ ಮಂಡಳಿ ಇತ್ತೀಚೆಗೆ ಗ್ರಾಮಸ್ಥರೊಂದಿಗೆ ಸಭೆ ನಡೆಸಿದೆ. “ಸ್ಥಳಾಂತರಕ್ಕೆ ಗ್ರಾಮಸ್ಥರ ಒಪ್ಪಿಗೆಯೊಂದಿಗೆ ಸೂಕ್ತ ಸ್ಥಳವನ್ನು ಆಯ್ಕೆ ಮಾಡಲಾಗುವುದು, ಪುನರ್ವಸತಿ ಪ್ರಕ್ರಿಯೆಯಲ್ಲಿ ನೀಡಲಾಗುವ ಸವಲತ್ತುಗಳು ಮತ್ತು ಆರ್ಥಿಕ ನೆರವಿನ ಬಗ್ಗೆ ಗ್ರಾಮಸ್ಥರಿಗೆ ಭರವಸೆ ನೀಡಲಾಗಿದೆ. ಗ್ರಾಮಸ್ಥರ ಸ್ಥಳಾಂತರಕ್ಕೆ ಸರ್ಕಾರ ಸಿದ್ಧವಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಪ್ರಚಾರಕ್ಕೆ ಬಿಜೆಪಿ ಖರ್ಚು ಮಾಡಿದ್ದು ಬರೋಬ್ಬರಿ 252 ಕೋಟಿ ರೂ..!