ಡೋಣಿ ನದಿ ಪ್ರವಾಹದಲ್ಲಿ ಸಿಲುಕಿದ್ದ ಮೂರು ಜನರ ರಕ್ಷಣೆ ಮಾಡಿದ ಗ್ರಾಮಸ್ಥರು…
ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಟ್ರ್ಯಾಕ್ಟರ್ ಹಾಗೂ ಅದರಲ್ಲಿದ್ದ ಮೂವರನ್ನ ಗ್ರಾಮಸ್ಥರು ಹಗ್ಗ ಕಟ್ಟಿ ಕಾಪಾಡಿದ ಘಟನೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕಡಕೋಳ ಬಳಿ ನಡೆದಿದೆ.
ಅ. 11 ರಂದು ನಡೆದ ಘಟನೆ ಈಗ ಬೆಳಕಿಗೆ ಬಂದಿದೆ. ಸೇತುವೆ ಇಲ್ಲದ ಕಾರಣ ಕಚ್ಚಾ ರಸ್ತೆಯಲ್ಲಿಯೇ ತಾಳಿಕೋಟೆ ಕಡೆಗೆ ಸಂಚರಿಸಿದ ಟ್ರ್ಯಾಕ್ಟರ್, ಚಾಲಕ ಮತ್ತೊಬ್ಬ ವ್ಯಕ್ತಿ ಡೋಣಿ ಪ್ರವಾಹದ ಮಧ್ಯೆಯೇ ಸಿಲುಕಿದ್ದರು. ಕಡಕೋಳ ಗ್ರಾಮಸ್ಥರು ಕೊಚ್ಚಿ ಹೋಗುತ್ತಿದ್ದವರನ್ನು ರಕ್ಷಿಸಿದ್ದಾರೆ.
ಗ್ರಾಮದ ಯುವಕರು ಸಂಗನಗೌಡ ಯಲರಡ್ಡಿ, ಹನುಮಂತ ತಳವಾರ, ಪರಸುರಾ, ತಳವಾರ, ಪ್ರಭು ಗುಡ್ಡೋಡಗಿ, ಪ್ರಕಾಶ ಗುನ್ನಾಪುರ ಎನ್ನುವ ಗ್ರಾಮಸ್ಥರು ಸುಮಾರು 5 ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಮೂವರನ್ನು ರಕ್ಷಿಸಿದ್ದಾರೆ.
ಡೋಣಿ ನದಿಯ ಎರಡೂ ಬದಿಯಲ್ಲಿ ಹಂಚಿ ಹೋಗಿರುವ ಕಡಕೋಳ ಗ್ರಾಮದ ಜನ ಹೊಲಗಳಿಗೆ ಹೋಗಬೇಕಾದರೆ ಸೇತುವೆ ಸಮಸ್ಯೆಯಿಂದ ಸುಮಾರು 50 ಕಿ. ಮೀ. ಸುತ್ತಿ ತೆರಳಬೇಕು. ಸೇತುವೆ ನಿರ್ಮಿಸುವಂತೆ ಆಗ್ರಹಿಸಿದರೂ ಸ್ಪಂದಿಸದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.