ಹಿಂದುಳಿದವರನ್ನು ಹೊರಗಿಟ್ಟಿದ್ದ 2000 ವರ್ಷಗಳ ಹಿಂದಿನ ಶಿಕ್ಷಣ ಪದ್ದತಿಯ ಸವಕಲು NEP: ಮಲ್ಲಿಕಾರ್ಜುನ ಖರ್ಗೆ
ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ (NEP)-2020ರ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಹಾಗಾಗಿ ಈ ಕುರಿತು ರಾಜ್ಯಸಭೆಯ ಶೂನ್ಯವೇಳೆಯಲ್ಲಿ ಎನ್ಇಪಿ ಬಗ್ಗೆ ಮಾತನಾಡಿರುವ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆಯವರು, ಬಿಜೆಪಿ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಶಿಕ್ಷಣ ನೀತಿಯು 2000 ವರ್ಷಗಳ ಹಿಂದಿನ ಶೈಕ್ಷಣಿಕ ಪದ್ದತಿಯನ್ನು ಮರುಕಳಿಸಲು ಮುಂದಾಗಿದ್ದು, ಇದು ದಲಿತ, ಹಿಂದುಳಿದವರ, ಬಡ ವಿದ್ಯಾರ್ಥಿಗಳ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.
ಎನ್ಇಪಿಯು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವುದರ ಬದಲಾಗಿ, ಹಿಂದುಳಿದವರನ್ನು ಶಿಕ್ಷಣದಿಂದ ದೂರ ಇರುವ ಹುನ್ನಾರವನ್ನು ಹೊಂದಿದೆ. ಶಾಲೆಗಳಲ್ಲಿ ನೈತಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣವು ಸಂವಿಧಾನದ ತತ್ವಗಳನ್ನು ಆಧರಿಸಿರಬೇಕೆ ವಿನಾ ಪ್ರಾಚೀನ ಸಾಂಸ್ಕೃತಿಕ ಮೌಲ್ಯಗಳನ್ನಲ್ಲ. ಹಾಗಾಗಿ ಕೇಂದ್ರ ಸರ್ಕಾರವು ಹೊಸ ಶಿಕ್ಷಣ ನೀತಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ನಿರ್ದೇಶನಗಳನ್ನು ಸೂಚಿಸುವಂತಿಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಕಟ್ಟುಪಾಡುಗಳಿಗೆ ಜೋತುಬೀಳುವಂತಿಲ್ಲ ಎಂದು ಸಂವಿಧಾನದ ಪರಿಚ್ಛೇದ 28 (1) ದಲ್ಲಿ ಹೇಳಲಾಗಿದೆ. ಆದರೆ, ಕೇಂದ್ರವು ಪರೋಕ್ಷವಾಗಿ ಜಾತಿಯತೆ ಮತ್ತು ಧಾರ್ಮಿಕ ಅಸಮಾನತೆಯನ್ನು ಬೆಳೆಸುವಂತಹ ಶಿಕ್ಷಣವನ್ನು ಜಾರಿಗೆ ತರಲು ಮುಂದಾಗಿದೆ ಎಂದು ಆರೋಪಿಸಿದರು.
ಹಳ್ಳಿಗಳಲ್ಲಿನ ಬಡ ಮಕ್ಕಳ ಶಿಕ್ಷಣ ಪದ್ಧತಿ ಅನಾನುಕೂಲತೆಯಿಂದ ಕೂಡಿದೆ. ಅಂಗನವಾಡಿ ಶಿಕ್ಷಕರಿಗೆ ಸಮರ್ಪಕ ರೀತಿಯಲ್ಲಿ ಕಲಿಸಲು ಸರಿಯಾದ ನೀತಿಯನ್ನು ರೂಪಿಸಿಲ್ಲ. ಆದ್ದರಿಂದ ಬಡ ಮಕ್ಕಳು 1ನೇ ತರಗತಿಗೆ ಸೇರುವ ಮೊದಲು ಕಲಿಯುವ ಶಿಕ್ಷಣವು ಔಪಚಾರಿಕವಾಗಿಲ್ಲ. ಹತ್ತನೇ ತರಗತಿಯ ನಂತರ ಶೇ. 50 ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗುಳಿಯುತ್ತಾರೆ. ಈ ಪ್ರಮಾಣವನ್ನು ಕಡಿಮೆ ಮಾಡಲು ಯಾವುದೇ ಯೋಜನೆ ಇಲ್ಲ. ಈ ವಿದ್ಯಾರ್ಥಿಗಳಲ್ಲಿ ಶೇ. 32.4 ರಷ್ಟು ದಲಿತರು, ಶೇ. 25.7 ಅಲ್ಪಸಂಖ್ಯಾತರು ಮತ್ತು ಶೇ. 16.4 ಬುಡಕಟ್ಟು ಜನಾಂಗದವರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ.
ಗ್ರಾಮೀಣ ಮತ್ತು ಹಿಂದುಳಿದ ಮಕ್ಕಳಿಗೆ ನಾವು ಅಭಿವೃದ್ಧಿಯ ಅವಕಾಶಗಳನ್ನು ಒದಗಿಸಬೇಕಾದರೆ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ಗೆ ಆದ್ಯತೆ ನೀಡಬೇಕು. ಭಾರತೀಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ತಮ್ಮ ಭಾಷೆ ಮತ್ತು ಸಾಹಿತ್ಯ ತರಗತಿಗಳ ಮೂಲಕ ಕಲಿಯುತ್ತಾರೆ. ಸಂಸ್ಕೃತ ಅಥವಾ ಹಿಂದಿಯ ಮೂಲಕ ಒಂದೇ ಸಂಸ್ಕೃತಿಯನ್ನು ಉತ್ತೇಜಿಸುವುದು ಹಿಂದುಳಿದ ಮಕ್ಕಳನ್ನು ಆಧುನಿಕ ಶಿಕ್ಷಣದಿಂದ ದೂರವಿರಿಸಿದಂತಾಗುತ್ತದೆ ಎಂದು ಆರೋಪಿಸಿದ್ದಾರೆ.
ಆರ್ಟಿಇ ಕಾಯಿದೆಯ ಆದೇಶದಂತೆ 1 ಅಥವಾ 2 ಕಿ.ಮೀ ವ್ಯಾಪ್ತಿಯಲ್ಲಿ ಹೊಸ ಪ್ರಾಥಮಿಕ ಶಾಲೆಗಳನ್ನು ಸರಕಾರ ಸ್ಥಾಪಿಸುವುದು ಕಡ್ಡಾಯಗೊಳಿಸುವ ಬಗ್ಗೆ ಎನ್ಇಪಿಯಲ್ಲಿ ಯಾವುದೇ ಉಲ್ಲೇಖವಿಲ್ಲ. ಇಂತಹ ಹಲವು ಕಾರಣಗಳಿಂದ ಹೊಸ ಶಿಕ್ಷಣ ನೀತಿ -2020 ಮಕ್ಕಳ ಭವಿಷ್ಯಕ್ಕೆ ಮಾರಕ. ಆದ್ದರಿಂದ ಈ ನೀತಿಯನ್ನು ಕೇಂದ್ರ ಸರಕಾರ ಹಿಂತೆಗೆದುಕೊಳ್ಳಬೇಕು ಎಂದು ಖರ್ಗೆ ಒತ್ತಾಯಿಸಿದರು.
ಇದನ್ನೂ ಓದಿ: NEP ಕರ್ನಾಟಕದಲ್ಲೇ ಮೊದಲು ಜಾರಿ; ಶಿಕ್ಷಣ ಮಾರಾಟಕ್ಕೆ ಕರ್ನಾಟಕವೇ ಬಲಿಪಶು ಎಂದು ಕೆವಿಎಸ್ ವಿರೋಧ!