ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ: ಉದ್ಧವ್ ಠಾಕ್ರೆ
ಮಹಾರಾಷ್ಟ್ರ ಸರ್ಕಾರ ಗಡಿ ವಿವಾದವನ್ನು ಮತ್ತೆ ಕೆದಕಿದ್ದು, ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಕರ್ನಾಟಕದ ಭಾಗವಾಗಿರುವ, ಬಹುಸಂಖ್ಯೆಯಲ್ಲಿ ಮರಾಠಿ ಮಾತನಾಡುವ ಮತ್ತು ಮರಾಠ ಸಂಸ್ಕೃತಿಯನ್ನು ಆಚರಿಸುವ ಪ್ರದೇಶಗಳನ್ನು ಮಹಾರಾಷ್ಟಕ್ಕೆ ಸೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಾವು ಒಗ್ಗಟ್ಟಾಗಿದ್ದೇವೆ. ಈ ವಿಷಯದಲ್ಲಿ ಬದ್ಧತೆಯನ್ನು ಪ್ರದರ್ಶಿಸುತ್ತೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿದೆ.
ಬೆಳಗಾವಿ ಮತ್ತು ಇತರ ಪ್ರದೇಶಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಣ ಗಡಿ ವಿವಾದ ಪ್ರಕರಣ ಹಲವು ವರ್ಷಗಳಿಂದ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ.
ಗಡಿ ವಿವಾದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸುವಂತೆ ಉಸ್ತುವಾರಿ ವಹಿಸಲು ಕಳೆದ ವರ್ಷ ಸಚಿವರಾದ ಏಕನಾಥ್ ಶಿಂಧೆ ಮತ್ತು ಛಗನ್ ಭುಜಬಲ್ ಅವರನ್ನು ಸಮನ್ವಯಕಾರರನ್ನಾಗಿ ಉದ್ಧವ್ ಠಾಕ್ರೆ ಅವರು ನೇಮಿಸಿದ್ದರು.
ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರತಿ ವರ್ಷ ಜನವರಿ 17ರಂದು ಹುತಾತ್ಮರ ದಿನವನ್ನು ಆಚರಿಸುತ್ತದೆ. ಬೆಳಗಾವಿ ಮತ್ತು ಇತರ ಕೆಲ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ 1956ರಲ್ಲಿ ನಡೆದ ಹೋರಾಟದಲ್ಲಿ ಮಡಿದವರ ಗೌರವಾರ್ಥ ಮಹಾರಾಷ್ಟ್ರ ಏಕೀಕರಣ ಸಮಿತಿ ಈ ದಿನವನ್ನು ಹುತಾತ್ಮರ ದಿನವನ್ನಾಗಿ ಆಚರಿಸುತ್ತಿದೆ.
ಇದನ್ನೂ ಓದಿ: ತಣ್ಣಗಾಗಿಲ್ಲ BJP ಅತೃಪ್ತರ ಬೇಗುದಿ; ಅಮಿತ್ ಶಾಗೆ ದೂರು ನೀಡಲು ಸರದಿಯಲ್ಲಿದೆ ದಂಡು!