ಉತ್ತರಾಖಂಡ ಪ್ರವಾಹ : 32 ಮಂದಿ ಮೃತ – 197 ಜನ ನಾಪತ್ತೆ..!
ಉತ್ತರಾಖಂಡ ಪ್ರವಾಹದಲ್ಲಿ ಸಿಲುಕಿ 32 ಜನ ಮೃತಪಟ್ಟಿದ್ದು ತಪೋವನ್ ಸುರಂಗದಲ್ಲಿ 197 ಮಂದಿ ಇನ್ನೂ ಕಾಣೆಯಾಗಿದ್ದಾರೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಇನ್ನೂ ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಭಾನುವಾರ ಸಂಭವಿಸಿದ ಅಲಕಾನಂದ ನದಿ ಪ್ರವಾಹ ವ್ಯಾಪಕ ವಿನಾಶಕ್ಕೆ ಕಾರಣವಾಗಿದೆ. ಈವರೆಗೆ ಒಟ್ಟು 32 ಶವಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅಧಿಕಾರಿಗಳು ನಾಪತ್ತೆಯಾದವರ ಅಧಿಕೃತ ಅಂಕಿ ಅಂಶಗಳು 197 ಇರಬಹುದು ಎಂದು ಅಂದಾಜಿಸಿದ್ದಾರೆ.
ಶೋಧ ಮತ್ತು ಪಾರುಗಾಣಿಕಾ ಕಾರ್ಯಾಚರಣೆ ನಡೆಸಲು ಚಮೋಲಿ ಜಿಲ್ಲೆಯಲ್ಲಿ ಭಾರತೀಯ ಸೇನೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್ಎಫ್) ಯ 600 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರವಾಹಕ್ಕೆ ಸಿಲುಕಿದ ದೂರದ ಹಳ್ಳಿಗಳಿಗೆ ಪಡಿತರ, ಔಷಧ ಮತ್ತು ಇತರ ಅಗತ್ಯ ವಸ್ತುಗಳನ್ನು ಸಾಗಿಸಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, “ಐಟಿಬಿಪಿ ಜವಾನರು 5-6 ಕಿ.ಮೀ ದೂರದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಹೋಗುವುದನ್ನು ನಾನು ನೋಡಿದ್ದೇನೆ, ಪಡಿತರ,ಔಷಧಿ ಇತ್ಯಾದಿಗಳನ್ನು ಸಂತ್ರಸ್ತರಿಗೆ ನೀಡುತ್ತಿರುವವರಿಗೆ ಧನ್ಯವಾದ” ತಿಳಿಸಿದ್ದಾರೆ.