ರಾಜ್ಯದಲ್ಲಿ ಯಡಿಯೂರಪ್ಪ ಮುಕ್ತ BJPಗೆ ಸಿದ್ದತೆ ಜೋರಾಗಿದೆ: ಕಾಂಗ್ರೆಸ್ ಲೇವಡಿ
ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ಆದಷ್ಟು ಬೇಗ ಮುಖ್ಯಮಂತ್ರಿಯಾಗಬೇಕು ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಯಡಿಯೂರಪ್ಪ ಮುಕ್ತ ಬಿಜೆಪಿ ನಿರ್ಮಾಣಕ್ಕೆ ಸಿದ್ದತೆ ಜೋರಾಗಿದೆ ಎಂದು ಲೇವಡಿ ಮಾಡಿದೆ.
ಗುರುವಾರ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದ ಸದಾನಂದಗೌಡ ಅವರು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಹುದ್ದೆಯ ಮುಂದಿರುವ ಉಪ ಎಂಬ ಪದ ಹೋಗಿ ಅಗಷ್ಟು ಬೇಗ ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದರು.
ಅಲ್ಲದೆ, ಎರಡು ದಿನದ ಹಿಂದೆ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡುವ ವಿಚಾರವಾಗಿ ಪ್ರಶ್ನೆ ಎತ್ತಿದ್ದ ಬಿಜೆಪಿ ಶಾಸಕ ಯತ್ನಾಳ್ ಅವರಿಗೆ ಸದನದಲ್ಲಿ ಉತ್ತರ ನೀಡುವುದಾಗಿ ಹೇಳಿದ್ದ ಸಿಎಂ ಯಡಿಯೂರಪ್ಪ ಅಧಿವೇಶನದಲ್ಲಿ ಇರಲಿಲ್ಲ. ಹೀಗಾಗಿ ತಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದು ಹೇಳಿದ್ದ ಸಿಎಂ ನಾಪತ್ತೆಯಾಗಿದ್ದಾರೆ ಎಂದು ಕಿಡಿಕಾರಿದ್ದರು.
ಈ ಎರಡೂ ವಿದ್ಯಮಾನಗಳನ್ನು ದಾಳವಾಗಿ ಬಳಿಸಿಕೊಂಡಿರುವ ಕಾಂಗ್ರೆಸ್, ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಮುಕ್ತ ಬಿಜೆಪಿ ಸಿದ್ಧತೆ ಜೋರಾಗಿದೆ ಎಂದು ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆಗೆ ಉತ್ತರಿಸಲಾಗದೆ ಸದನದಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಾಪತ್ತೆಯಾದರೆ, ಇತ್ತ ಡಿವಿ ಸದಾನಂದಗೌಡ ಮುಖ್ಯಮಂತ್ರಿ ಗಾದಿಗೆ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರ ಹೆಸರನ್ನು ತೇಲಿಬಿಡುತ್ತಿದ್ದಾರೆ. ಬಿಎಸ್ ವೈ ಮುಕ್ತ ಬಿಜೆಪಿ ಸಿದ್ಧತೆ ಜೋರಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಗೀತಾ ಶಿವರಾಜ್ಕುಮಾರ್ ಕೂಡ ಕಾಂಗ್ರೆಸ್ ಸೇರಲಿದ್ದಾರೆ: ಮಧು ಬಂಗಾರಪ್ಪ