3 ವರ್ಷದಿಂದ ಒಂದೇ ಭರವಸೆ ನೀಡುತ್ತಿರುವ ಮೋದಿ; ಕನಿಷ್ಟ ಸಂಖ್ಯೆಯನ್ನಾದರೂ ಬದಲಿಸಿ ಎಂದ ನೆಟ್ಟಿಗರು!
ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಅವರ ಭಾಷಣೆ ಕಳೆದ ಮೂರು ವರ್ಷಗಳಿಂದ ಪುನರಾವರ್ತಿತಗೊಳ್ಳುತ್ತಿವೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದು, ಕನಿಷ್ಟ ನೀವು ನೀಡುವ ಭರವಸೆಯಲ್ಲಿನ ಸಂಖ್ಯೆಯನ್ನಾದರೂ ಬದಲಿಸಿ ಎಂದು ಕಾಲೆಳೆಯುತ್ತಿದ್ದಾರೆ.
ಆಗಸ್ಟ್ 15, 2019, 2020, 2021 ಈ ಮೂರು ವರ್ಷವೂ 100 ಲಕ್ಷ ಕೋಟಿ ರೂಪಾಯಿಗಳನ್ನು ಆಧುನಿಕ ಮೂಲಸೌಕರ್ಯ ಯೋಜನೆಗಳಿಗಾಗಿ ವಿನಿಯೋಗಿಸಲಾಗುತ್ತದೆ ಎಂದು ಹೇಳಿದ್ದಾರೆ ಎಂಬ ಮೀಮ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ರಾಷ್ಟ್ರದ ಜನರನ್ನು ಒಂದೇ ಭರವಸೆ, ಯೋಜನೆಯ ಹೆಸರಿನಲ್ಲಿ ಮೂರು ವರ್ಷಗಳಿಂದ ಪ್ರಧಾನಿ ಮೋದಿ ಮೂರ್ಖರನ್ನಾಗಿಸಿದ್ದಾರೆ ಎಂದು ಹೇಳಲಾಗುತ್ತಿದೆ. 73, 74 ಮತ್ತು 75ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಇದೇ ಮಾತನ್ನು ಹೇಳಲಾಗಿದೆ ಎಂದು ಪತ್ರಿಕಾ ವರದಿಗಳನ್ನು ಕೊಲಾಜ್ ಮಾಡಿ ಶೇರ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಸ್ವಾತಂತ್ರ್ಯ ದಿನ: 2 ವರ್ಷ ಅಮೃತ ಮಹೋತ್ಸವ ಆಚರಣೆಗೆ ಮೋದಿ ಕರೆ! ಹೈಲೈಟ್ಸ್
ಕರ್ನಾಟಕ ಕಾಂಗ್ರೆಸ್ ಕೂಡ ಎಐಸಿಸಿಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಹೇಳಿಕೆಯನ್ನು ಆಧರಿಸಿ ಟ್ವೀಟ್ ಮಾಡಿದೆ.
“ಆಗಸ್ಟ್ 15, 2019ಕ್ಕೆ ಎರಡು ವರ್ಷಗಳು ಕಳೆದಿವೆ. ಕನಿಷ್ಟ ಪಕ್ಷ 100 ಲಕ್ಷ ಕೋಟಿಗಳ ಸಂಖ್ಯೆಯನ್ನಾದರೂ ಬದಲಿಸ ಬಹುದಿತ್ತು!” ಎಂದು ಮೋದಿಯವರ ಭಾಷಣಕ್ಕೆ ವ್ಯಂಗ್ಯದ ಪ್ರತಿಕ್ರಿಯೆ ನೀಡಿದೆ.
ಆಗಸ್ಟ್ 15, 2019ಕ್ಕೆ ಎರಡು ವರ್ಷಗಳು ಕಳೆದಿವೆ.
ಕನಿಷ್ಟಪಕ್ಷ 100 ಲಕ್ಷ ಕೋಟಿಗಳ ಸಂಖ್ಯೆಯನ್ನಾದರೂ ಬದಲಿಸ ಬಹುದಿತ್ತು!
– @rssurjewala pic.twitter.com/hQWTcB43k2— Karnataka Congress (@INCKarnataka) August 15, 2021
ಮೀಮ್ಗಳ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೂರು ವರ್ಷಗಳ ಭಾಷಣದ ವಿಡಿಯೊ ಕೂಡ ಕೊಲಾಜ್ ಮಾಡಿ ಹಂಚಿಕೊಳ್ಳಲಾಗುತ್ತಿದೆ.
ಮೂರು ವರ್ಷ ಒಂದೇ ಭಾಷಣದ ಪ್ರತಿ ಓದಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತೆ ಲಾವಣ್ಯ ಬಲ್ಲಾಳ್ ತಮ್ಮ ಫೇಸ್ಬುಕ್ ವಾಲ್ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.
ಒಕ್ಕೂಟ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿರುವ ರೈತರು ಕೂಡ, ಪ್ರಧಾನಿಯವರು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆಗಸ್ಟ್ 15ರಂದು ಗೋವಾದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವುದಿಲ್ಲ; ಕಾರಣವೇನು ಗೊತ್ತೇ?