FACT CHECK | ಡಿ.ಕೆ ಶಿವಕುಮಾರ್ ಮತ್ತು ಚಂದ್ರಬಾಬು ನಾಯ್ಡು ಭೇಟಿಯ ಹಳೆಯ ವಿಡಿಯೋವನ್ನು 2024ರ ಲೋಕಸಭೆ ಚುನಾವಣೆಗೆ ಲಿಂಕ್ ಮಾಡಿ ಹಂಚಿಕೆ
ಮೂರನೇ ಬಾರಿಗೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿದೆ. ಈ ಮೂಲಕ ಎನ್ ಡಿಎ ಮೈತ್ರಿಕೂಟ ಅಧಿಕಾರ ನಡೆಸಲು ಸಜ್ಜಾಗಿದೆ.
ಡಿ.ಕೆ. ಶಿವಕುಮಾರ್ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ತೇಜಸ್ವಿ ಯಾದವ್…
ಬೇಳೆ ಬೇಯ್ತಾ ಇದ್ಯಾ?— LATPOTBABA (@LATPOTBABA1) June 5, 2024
ಇದರ ಬೆನ್ನಲ್ಲೇ ಎನ್ ಡಿಎ ಮೈತ್ರಿಕೂಟದ ಭಾಗವಾಗಿರುವ ನಾಯಕರು, ಇಂಡಿಯಾ ಒಕ್ಕೂಟದ ನಾಯಕರನ್ನು ಭೇಟಿಯಾಗಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಇತ್ತೀಚೆಗೆ ದಿಲ್ಲಿಯಲ್ಲಿ ಭೇಟಿಯಾದ ವಿಡಿಯೋ ಇದು ಎಂದು ಇನ್ನು ಕೆಲವರು, ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಭೇಟಿಯಾಗಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇಂಥಹ ಪೋಸ್ಟ್ಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ವಿಡಿಯೋ 1
‘ಡಿಕೆ ಶಿವಕುಮಾರ್’, ‘ಚಂದ್ರಬಾಬು ನಾಯ್ಡು’ ಮತ್ತು ‘ವಿಮಾನ ನಿಲ್ದಾಣ’ ಕೀವರ್ಡ್ನೊಂದಿಗೆ ಗೂಗಲ್ನಲ್ಲಿ ಸರ್ಚ್ ಮಾಡಿದಾಗ, ಡಿಸೆಂಬರ್ 2023ರ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಲಭ್ಯವಾಗಿದೆ. ವೈರಲ್ ದೃಶ್ಯಗಳ ಸ್ಕ್ರೀನ್ಗ್ರಾಬ್ ಅನ್ನು ಈ ವರದಿಯು ಒಳಗೊಂಡಿದ್ದು, ಇಬ್ಬರ ನಡುವಿನ ಮಾತುಕತೆಯನ್ನು ಇದರಲ್ಲಿ ವಿವರಿಸಲಾಗಿದೆ. ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣದದಲ್ಲಿ ಈ ಇಬ್ಬರು ರಾಜಕಾರಣಿಗಳು ಮಾತುಕತೆ ನಡೆಸಿದರು ಎಂದು ಇದರಲ್ಲಿ ಉಲ್ಲೇಖವಾಗಿದೆ.
“ನಾಯ್ಡು ಅವರು ತಮ್ಮ ತವರು ಕ್ಷೇತ್ರವಾದ ಕುಪ್ಪಂಗೆ ತೆರಳಲು ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಇಬ್ಬರೂ ಭೇಟಿಯಾದರು. ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ನಾಗ್ಪುರಕ್ಕೆ ತೆರಳುತ್ತಿದ್ದರು. ಉಭಯ ನಾಯಕರು ಕುಶಲೋಪರಿ ವಿಚಾರಿಸುವ ಈ ವಿಡಿಯೋವನ್ನು ಡಿಕೆ ಶಿವಕುಮಾರ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ,” ಎಂದು ವರದಿಯಲ್ಲಿ ಸೇರಿಸಲಾಗಿದೆ.
ಇದೇ ತುಣುಕನ್ನು ಸುದ್ದಿ ಸಂಸ್ಥೆ ಎಎನ್ಐ ಕೂಡ ಡಿಸೆಂಬರ್ 28, 2023 ರಂದು ಹಂಚಿಕೊಂಡಿದೆ.
#WATCH | DK Shivakumar, Karnataka Deputy CM met former CM of Andhra Pradesh and TDP chief N Chandrababu Naidu at HAL airport in Bengaluru, earlier today pic.twitter.com/dLamRjf0I9
— ANI (@ANI) December 28, 2023
ಡಿಸೆಂಬರ್ 2023ರಲ್ಲಿ ಕಾಂಗ್ರೆಸ್ ನಾಯಕ ಮತ್ತು ಟಿಡಿಪಿ ಮುಖ್ಯಸ್ಥರ ನಡುವಿನ ಈ ಭೇಟಿಯು ರಾಜಕೀಯ ಊಹಾಪೋಹಗಳನ್ನು ಹುಟ್ಟುಹಾಕಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಟಿಡಿಪಿ ಪ್ರಧಾನ ಕಾರ್ಯದರ್ಶಿ ಮತ್ತು ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ , ಈ ಸಭೆ ಕಾಕತಾಳೀಯ ಅಷ್ಟೇ. ಇದಕ್ಕೆ ಯಾವುದೇ ರಾಜಕೀಯ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದ್ದರು.
“ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ಅವರು ಚಂದ್ರಬಾಬು ಅವರನ್ನು ಭೇಟಿಯಾದರು, ಆದರೆ ಇದು ಐಎನ್ಡಿಐಎ ಬಣದೊಂದಿಗೆ ಮೈತ್ರಿಯನ್ನು ಸೂಚಿಸುವುದಿಲ್ಲ,” ಎಂದು ನಾರಾ ಲೋಕೇಶ್ ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ್ದರು.
ಆದ್ದರಿಂದ, ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಭೇಟಿಯಾಗಿದ್ದ ಹಳೆಯ ವಿಡಿಯೋವನ್ನೇ ಇಟ್ಟುಕೊಂಡು, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ದಿಲ್ಲಿಯಲ್ಲಿ ಎನ್ಡಿಎ ಪಾಲುದಾರರನ್ನು ಸೆಳೆಯಲು ಆಮಿಷ ಒಡ್ಡುತ್ತಿದ್ದಾರೆ ಎಂದು ಹೇಳಿ ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳಾಗಿದೆ.
ವಿಡಿಯೋ 2
ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಆರ್ ಜೆಡಿ ನಾಯಕ ತೇಜಸ್ವಿಯಾದವ್ ಅವರು ಒಂದೇ ವಿಮಾನದಲ್ಲಿ ಪ್ರಯಾಣಿಸಿದ ವಿಡಿಯೋವನ್ನು ಹಂಚಿಕೊಂಡಿದ್ದು, ಗೂಗಲ್ ಕೀ ವರ್ಡ್ ಸರ್ಚ್ ನಡೆಸಿದ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಜೂನ್ 5, 2024ರ ದಿ ಹಿಂದೂ ವರದಿ ಪ್ರಕಾರ, ಎನ್ ಡಿಎ ಮತ್ತು ಐಎನ್ಡಿಐಎಯ ಪ್ರತ್ಯೇಕ ಸಭೆಗಾಗಿ ಪಾಟ್ನಾ ವಿಮಾನ ನಿಲ್ದಾಣದಿಂದ ಇಬ್ಬರೂ ಬಿಹಾರದ ಪಾಟ್ನಾದಿಂದ ದಿಲ್ಲಿಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಿದರು ಎಂದಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ಈ ಪ್ರಕಾರ, ನಿತೀಶ್ ಮತ್ತು ತೇಜಸ್ವಿ ಅವರು ಒಂದೇ ವಿಮಾನದಲ್ಲಿ ಸಂಚರಿಸಿದ್ದು, ಆರಂಭದಲ್ಲಿ ರಾಜಕೀಯ ಚರ್ಚೆಗಳಿಗೆ ಕಾರಣವಾಗಿತ್ತು. ಬಳಿಕ ನಿತೀಶ್ ಅವರು ಎನ್ ಡಿಎ ಬೆಂಬಲಿಸಿ ಪತ್ರ ನೀಡಿದ್ದರು ಮತ್ತೀಗ ಅವರು NDA ಮಿತ್ರಕೂಟದ ಪಾಲುದಾರರಾಗಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಹಿಂದೂ ಧರ್ಮದ ವ್ಯಕ್ತಿಯೊಬ್ಬನನ್ನು ತನ್ನ ಮಕ್ಕಳ ಮುಂದೆಯೇ ಮುಸ್ಲಿಂ ವ್ಯಕ್ತಿ ಹತ್ಯೆ ಮಾಡಿದ್ದು ನಿಜವೇ?