FACT CHECK | ಬೆಂಗಳೂರಿನಲ್ಲಿ ಸುರಿದ ಮಳೆಗೆ ನಡು ರಸ್ತೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು ನಿಜವೇ?
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜಧಾನಿ ಬೆಂಗಳೂರನ್ನು “ಬ್ರ್ಯಾಂಡ್ ಬೆಂಗಳೂರು” ಎಂಬಂತೆ ಮಾಡಲಾಗುವುದು ಎಂದು ಹೇಳಲಾಗಿತ್ತು. ರಾಜಧಾನಿಯನ್ನು ವಿಶ್ವದರ್ಜೆ ನಗರವನ್ನಾಗಿಸುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದನ್ನು ಹೇಳಿದ್ದು, ಈ ಹಿನ್ನೆಲೆಯಲ್ಲಿ ಮಳೆಯಿಂದಾದ ಅನಾಹುತಗಳ ಕುರಿತಾಗಿ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಟೀಕೆಗಳನ್ನು ಮಾಡಲಾಗುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಬ್ರಾಂಡ್ ಬೆಂಗಳೂರು ಬಿಸಿ ನೀರು ಭಾಗ್ಯ ಅಷ್ಟೇ…. ಯಾರಿಗೆ ಏನಾದ್ರೆ ನಮಗೇನು ಅಂತಿದೆ ಕಾಸಿಲ್ಲದ ಸರ್ಕಾರ..” ಎಂಬ ಹೇಳಿಕೆಯೊಂದಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ಇದೇ ವಿಡಿಯೋಗೆ ಕೆಲವು ಎಕ್ಸ್ ಖಾತೆ ಬಳಕೆದಾರರು ಕಮೆಂಟ್ ಮಾಡಿದ್ದು ಇದು ನಮ್ಮ ಬೆಂಗಳೂರಿನದಲ್ಲ ಎಂದು ತಿಳಿಸಿ ಮತ್ತೊಂದು ಫೋಟೊವನ್ನು ಹಂಚಿಕೊಂಡಿದ್ದಾರೆ.
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ idhe aythu nindhu. ಯಾವುದೋ abroad ali agirodhuna ಬೆಂಗಳೂರು anthidhiyalo…ಲೇವಡಿಗಾರ ಸೇನೆ pic.twitter.com/RD1K0gk5ri
— Niranjan C M (@niru_cm) October 20, 2024
ಬೇರಿ ದೇಶದ ವಿಡಿಯೋವನ್ನು ಇಲ್ಲಿಯದ್ದು ಎಂದು ಹಂಚಿಕೊಂಡಿರುವ ನಿಮಗೆ ನಾಚಿಕೆಯಾಗಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಗಳೂರಿನಲ್ಲಿ ಮಳೆಯಿಂದಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್ ವಿಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಹಲವು ವರದಿಗಳು ಲಭ್ಯವಾಗಿದ್ದು ಈ ದೃಶ್ಯ ವಿಯೆಟ್ನಾಂನದ್ದು ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ ಎಂದು ನ್ಯೂಸ್ ಚೆಕ್ಕರ್ ವರದಿ ಮಾಡಿದೆ.
ಅಕ್ಟೋಬರ್ 16, 2024ರಂದು ರೆಡಿಟ್ ನಲ್ಲಿ ವಿಯೆಟ್ನಾಂ ನೇಷನ್ ಎಂಬ ಬಳೆಕೆದಾರರು ಮಾಡಿದ ಪೋಸ್ಟ್ ನಲ್ಲಿ, “ಅಕ್ಟೋಬರ್ 14 ರ ಮಧ್ಯಾಹ್ನ, 2 ಗಂಟೆಗಳಿಗೂ ಹೆಚ್ಚು ಕಾಲ ಸುರಿದ ಭಾರೀ ಮಳೆಯು ಕ್ಯಾನ್ ಥೋ ನಗರದ ಮಧ್ಯ ಪ್ರದೇಶದ ಬೀದಿಗಳಲ್ಲಿ ಪ್ರವಾಹಕ್ಕೆ ಕಾರಣವಾಯಿತು. ಗುಡುಗು ಸಹಿತ ಭಾರೀ ಮಳೆಯಿಂದಾಗಿ ನಿನ್ಹ್ ಕಿಯು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಸುಮಾರು ಒಂದು ಗಂಟೆಗಳ ಕಾಲ ವಿದ್ಯುತ್ ಕಡಿತಗೊಂಡಿತು. ನ್ಗುಯೆನ್ ವ್ಯಾನ್ ಲಿನ್ಹ್ ಬೀದಿಯಲ್ಲಿ, ವಿದ್ಯುತ್ ತಂತಿ ಪ್ರವಾಹದ ನೀರಿದ್ದ ರಸ್ತೆಯ ಮೇಲೆ ಬಿದ್ದಿತು, ಅದರಿಂದ ಕಿಡಿಗಳು ಸಿಡಿದಿದ್ದರಿಂದ ಅನೇಕ ಜನರು ಭಯಭೀತರಾಗಿದ್ದರು. ನಿಹು ಕಿಯು ಜಿಲ್ಲೆಯ ಹಲವು ಮನೆಗಳ ಮನೆಗಳಿಗೆ ನೀರು ನುಗ್ಗಿ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿತು” ಎಂದಿದೆ. ( ಅನುವಾದಿಸಲಾಗಿದೆ)
ಅಕ್ಟೋಬರ್ 17, 2024ರಂದು KÊNH VTC14 ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಕಟಿಸಲಾದ ವೀಡಿಯೋಕ್ಕೆ “ತುಂಡಾದ ವಿದ್ಯುತ್ ತಂತಿಗಳು ಜಲಾವೃತಗೊಂಡ ರಸ್ತೆಗೆ ಬೀಳುವ ಭಯಾನಕ ದೃಶ್ಯ, ಇದರಿಂದ ಎಲ್ಲೆಡೆ ಕಿಡಿಗಳು ಹಾರಿವೆ” (ವಿಯೆಟ್ನಾಮೀಸ್ ನಿಂದ ಅನುವಾದಿಸಲಾಗಿದೆ) ಶೀರ್ಷಿಕೆ ನೀಡಲಾಗಿದೆ. ಜೊತೆಗೆ ವೀಡಿಯೋದ ವಿವರಣೆಯಲ್ಲಿ “ಅಕ್ಟೋಬರ್ 14 ರ ಮಧ್ಯಾಹ್ನ, ಸುಮಾರು 2 ಗಂಟೆಗಳ ಕಾಲ ಭಾರೀ ಮಳೆಯು ಕ್ಯಾನ್ ಥೋ ನಗರದ ಮಧ್ಯ ಭಾಗದ ಬೀದಿಗಳಲ್ಲಿ ವಿಪರೀತ ಪ್ರವಾಹಕ್ಕೆ ಕಾರಣವಾಯಿತು. ಕೆಲವೆಡೆ ವಾಹನದ ಟೈರ್ ಗಳ ಅರ್ಧಕ್ಕೂ ಮೇಲ್ಪಟ್ಟು ನೀರು ತುಂಬಿತ್ತು. ದೈನಂದಿನ ಚಟುವಟಿಕೆ ಹಾಗೂ ಸಂಚಾರಕ್ಕೆ ಇದರಿಂದ ತೊಂದರೆಯಾಯಿತು” ಎಂದಿದೆ. (ವಿಯೆಟ್ನಾಮೀಸ್ ನಿಂದ ಅನುವಾದಿಸಲಾಗಿದೆ)
ಅಕ್ಟೋಬರ್ 16, 2024ರ ವಿಯೆಟ್ನಾಂ ಪ್ಲಸ್ ಪ್ರಕಟಿಸಿದ ವರದಿಯಲ್ಲಿ, “ಕ್ಯಾನ್ ಥೋದಲ್ಲಿ ವಿದ್ಯುತ್ ತಂತಿಗಳು ಜಲಾವೃತಗೊಂಡ ರಸ್ತೆಯ ಮೇಲೆ ಬಿದ್ದಾಗ ಸಂಭವಿಸಿದ ಆಘಾತಕಾರಿ ದೃಶ್ಯ. ತುಂಡಾದ ವಿದ್ಯುತ್ ತಂತಿಯು ನೀರಿನ ಮೇಲ್ಮೈಯಲ್ಲಿ ಅಪಾಯಕಾರಿಯಾಗಿ ಮತ್ತು ವಿಚಿತ್ರವಾಗಿ ಕಾಣುವ ಕಿಡಿಗಳ ವಿದ್ಯಮಾನವನ್ನು ಸೃಷ್ಟಿಸುತ್ತಿರುವುದನ್ನು ಕಂಡು ಜನರು ಭಯಭೀತರಾಗಿದ್ದರು.” ಎಂದಿದೆ. (ವಿಯೆಟ್ನಾಮೀಸ್ ನಿಂದ ಅನುವಾದಿಸಲಾಗಿದೆ)
ಒಟ್ಟಾರೆಯಾಗಿ ಹೇಳುವುದಾದರೆ, ವಿದ್ಯುತ್ ತಂತಿಗಳು ಮಳೆನೀರು ಹರಿಯುತ್ತಿದ್ದ ರಸ್ತೆಮೇಲೆ ಬಿದ್ದು ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಘಟನೆ ಬೆಂಗಳೂರಿನದ್ದಲ್ಲ ಬದಲಿಗೆ ವಿಯೆಟ್ನಾಂನದ್ದು ಎಂಬುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಸರ್ಕಾರವನ್ನು ಟಾರ್ಗೆಟ್ ಮಾಡುವ ಉದ್ದೇಶದಿಂದ ಸಂಬಂಧವಿಲ್ಲದ ವಿಡಿಯೋವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕೊಲೆಯಾದ ಹಿಂದೂ ಕಾರ್ಯಕರ್ತನ ಫೋಟೊ ಎಂದು ರಾಘವೇಂದ್ರ ಶುಕ್ಲಾ ಎಂಬ ಪತ್ರಕರ್ತನ ಫೋಟೊ ಹಂಚಿಕೆ