FACT CHECK | ಚರಂಡಿ ನೀರನ್ನು ಬಳಸಿ ಬಿರಿಯಾನಿ ತಯಾರಿಸಲಾಗಿದೆಯೇ?
”ಈ ವಿಡಿಯೋ ನೋಡಿ.. ಇಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಚರಂಡಿಯಿಂದ ನೀರನ್ನು ತೆಗೆದು ಅದರ ಮೂಲಕ ಆಹಾರವನ್ನು ತಯಾರಿಸುತ್ತಿದ್ದಾನೆ. ಅವರು ಕೇವಲ ಆಹಾರಕ್ಕೆ ಉಗುಳುವುದು ಮಾತ್ರವಲ್ಲ. ಈ ರೀತಿಯಾಗಿ ಆಹಾರಕ್ಕೆ ಕೊಳಕು ನೀರನ್ನು ಸೇರಿಸಿ, ಹಿಂದೂಗಳ ವಿರುದ್ಧ ಆಹಾರದ ಜಿಹಾದ್ ಅನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಎಲ್ಲಾ ಸನಾತನಿ ಹಿಂದೂಗಳು ಎಚ್ಚರದಿಂದಿರಬೇಕು. ಮುಂದಿನ ದಿನಗಳಲ್ಲಿ ಮುಸಲ್ಮಾನರ ಹೋಟೆಲ್ಗಳಲ್ಲಿ ಆಹಾರ ಖರಿದಿಸುವುದನ್ನು ಹಿಂದೂಗಳು ನಿಲ್ಲಿಸಬೇಕಾಗಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಇದೆ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, 16 ಆಗಸ್ಟ್ 2023ರಂದು ಕಲ್ಕ ಪಿಂಜೋರ್ ಲೈವ್ ಎಂಬ ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಳ್ಳಲಾದ ವರದಿಯೊಂದು ಲಭ್ಯವಾಗಿದೆ.
ಇದರ ಪ್ರಕಾರ ರೆಸ್ಟೋರೆಂಟ್ನಲ್ಲಿ ಕ್ಲೀನಿಂಗ್ ಮಾಡಿದ ನೀರನ್ನು ರಸ್ತೆ ಮತ್ತು ಚರಂಡಿಗೆ ಬಿಡುತ್ತಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಹೀಗಾಗಿ ಕೆಲವರು ಈ ರೆಸ್ಟೋರೆಂಟ್ಗೆ ದಾಳಿ ನಡೆಸಿ, ಡಾಬಾದ ನೀರನ್ನು ಗಟಾರಕ್ಕೆ ಬಿಡುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಹೋಟೆಲ್ ಮಾಲೀಕರು ಕೂಡ ಕೊಳಕು ನೀರನ್ನು ರಸ್ತೆಗೆ ಬಿಟ್ಟಿದ್ದಕ್ಕೆ ಕ್ಷಮೆಯಾಚನೆ ಮಾಡಿದ್ದಾರೆ. ಈ ಸಂಬಂಧ ಪೊಲೀಸರಿಗೆ ಲಿಖಿತವಾಗಿ ಕ್ಷಮಾಪಣೆಯನ್ನು ಕೋರಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಆಲ್ಟ್ ನ್ಯೂಸ್ ಕೂಡ ಪಿಂಜೋರ್ ಪೊಲೀಸ್ ಸ್ಟೇಷನ್ನಲ್ಲಿ ವಿಚಾರಿಸಿದ್ದು, ಇದೇ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಹೋಟೆಲ್ನಿಂದ ನೀರನ್ನು ಚರಂಡಿಗೆ ಮತ್ತು ರಸ್ತೆಗೆ ಬಿಡುತ್ತಿರುವುದನ್ನು ಪ್ರಶ್ನಿಸಿ ಸಾರ್ವಜನಿಕರು ಹೋಟೆಲ್ ಮಾಲೀಕರ ವಿರುದ್ದ ಗಲಾಟೆ ಮಾಡಿದ್ದನ್ನು, ಮುಸ್ಲಿಂ ವ್ಯಕ್ತಿಯೊಬ್ಬ ಕೊಳಚೆ ನೀರನ್ನು ಬಳಸಿಕೊಂಡು ಬಿರಿಯಾನಿ ತಯಾರಿಸಿದ್ದಾನೆ ಎಂದು ಸುಳ್ಳು ಮತ್ತು ಕೋಮು ದ್ವೇಷದೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024ರ ಮೇಲೆ ಯಾವುದೇ ಮತದಾನ ನಡೆದಿಲ್ಲ