ರಾಜ್ಯ ರಾಜಕೀಯದಲ್ಲಿ ಇನ್ನೂ ಮುಗಿಯದ ಕಣ್ಣೀರಿನ ಕಥೆ : ಯಾರ ಕಣ್ಣೀರಿನಿಂದ ಯಾರು ಡಿಸಿಎಂ ಆದ್ರು?
ರಾಜ ರಾಜಕೀಯಲದಲ್ಲಿ ಕಣ್ಣೀರಿನ ಕಥೆ ಇನ್ನೂ ಮುಗಿಯುತ್ತಿಲ್ಲ. ಚುನಾವಣೆ ಬಂದಾಗಲೆಲ್ಲಾ ಅದು ಮರುಕಳಿಸುತ್ತಲೇ ಇರುತ್ತದೆ. ಈ ಬಾರಿಯ ವಿಧಾನಸಭಾ ಕ್ಷೇತ್ರಗಳಾದ ಶಿರಾ ಹಾಗೂ ಆರ್ ಆರ್ ನಗರ ಉಪಚುನಾವಣೆಗೆ ಕಣ್ಣೀರಿನ ಕಥೆ ಮತ್ತೆ ಶುರುವಾಗಿದೆ. ಕಣ್ಣೀರು ಕೈ ಹಿಡಿದೆ ಎಂದು ದೇವೇಗೌಡ್ರು, ಕಣ್ಣೀರು ತೆನೆಯೊಂದಿಗೆ ಕೈ ಬಿಟ್ಟಿದೆ ಎಂದು ಸಿದ್ಧರಾಮಯ್ಯ. ಇಬ್ಬರು ಸದ್ಯ ಕಣ್ಣೀರ ಕಥೆ ಶುರು ಮಾಡಿದ್ದಾರೆ.
‘ಕುಮಾರಸ್ವಾಮಿ ಸಿಎಂ ಆಗಿದ್ದಾಗ ಪಕ್ಷದ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಅವರು ಸರಿಯಾಗಿ ಆಡಳಿತ ನಡೆಸಿದ್ದರೆ ಯಾರೂ ಕೂಡ ಪಕ್ಷ ಬಿಟ್ಟು ಹೋಗುತ್ತಿರಲಿಲ್ಲ’ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಮೊದಲಿನಿಂದಲೂ ಆರೋಪ ಮಾಡುತ್ತಲೇ ಇದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ‘ದೋಸ್ತಿ ಸರ್ಕಾರ ಪತನಕ್ಕೆ ಸಿದ್ಧರಾಮಯ್ಯ ನವರೇ ಕಾರಣ’ ಅಂತ ಮಾಜಿ ಸಿಎಂ ಹೆಚ್ ಡಿ ಕುಮಾರ ಸ್ವಾಮಿ ಕಿಡಿ ಕಾರಿದ್ದಾರೆ. ಇದಕ್ಕೆ ಸಿದ್ಧು ‘ಚುನಾವಣೆ ಹತ್ತಿರ ಬಂದಾಗ ಕುಮಾರ ಸ್ವಾಮಿ ಕಣ್ಣೀರು ಸುರಿಸುವುದು ಕಿರುಕುಳ ಕೊಟ್ಟಿರುವುದು ಎಲ್ಲವೂ ರಾಜ್ಯದಲ್ಲಿ ಸಾಮಾನ್ಯವಾಗಿದೆ. ಕುಣಿಯೋಕೆ ಬಾರದವರು ನೆಲ ಡೊಂಕು ಎಂದರಂತೆ ಹಾಗಾಯ್ತು ಇವರ ಕಥೆ’ ಎಂದು ಕಾಲೆಳೆದಿದ್ದಾರೆ.
ಇನ್ನೂ ಇದಕ್ಕೆ ಕೆಂಡವಾದ ಜೆಡಿಎಸ್ ವರಿಷ್ಠ ದೇವೇಗೌಡ್ರು ‘ ಅಂದು ನಾನು ಕಣ್ಣೀರು ಹಾಕಿದ್ದಕ್ಕೆ ಸಿದ್ಧರಾಮಯ್ಯ ಡಿಸಿಎಂ ಆಗಿದ್ದು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿರಾ ಉಪಚುನಾವಣಾ ಕಣದಲ್ಲಿ ತೊಡೆ ತಟ್ಟಿದ ದೇವೇಗೌಡರು, ‘ಸಿದ್ಧರಾಮಯ್ಯ ರಾಜಕೀಯಕ್ಕೆ ಯಾವಾಗ ಬಂದ್ರು ಅನ್ನೋದು ಗೊತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮ ಮೇಲೆ ದಾಳಿ ಮಾಡುತ್ತಿವೆ. ಹಾಗಂತ ನಾವು ದೃತಿಗೆಡೋದಿಲ್ಲ. ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಲು ನಾನು ಟೊಂಕಕಟ್ಟಿ ಬಂದಿದ್ದೇನೆ. ಮಹಾ ಜನತೆ ಎಲ್ಲವನ್ನು ಎದುರಿಸಿ ನಿಂತು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.