ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಸಿಎಂ ಚಾಲನೆ – ಲೋಹದ ಹಕ್ಕಿ ಹಾರಾಟ ನೋಡಿ ಖುಷಿಯಾದ ಜನತೆ
ಕಲ್ಯಾಣ ಕರ್ನಾಟಕದ ಬಹುದಿನಗಳ ಕನಸು ಕೊನೆಗೂ ನನಸಾಗಿದ್ದು, ಕಲಬುರ್ಗಿಯಲ್ಲಿ ಲೋಹದ ಹಕ್ಕಿ ಹಾರಾಟ ಆರಂಭಗೊಂಡಿದೆ. ನೆನ್ನೆ ಮುಖ್ಯಮಂತ್ರಿ ಯಡಿಯೂರಪ್ಪ, ಕಲಬುರ್ಗಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ನಂತರ ನಡೆದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಹೆಸರಿನಲ್ಲಷ್ಟೇ ಕಲ್ಯಾಣವಾಗಲ್ಲ. ಹೆಸರು ಬದಲಿಸಿದಂತೆ ಈ ಭಾಗದ ಅಭಿವೃದ್ಧಿ ಪಥ ಬದಲಾಯಿಸಿ, ನಿಜವಾದ ಕಲ್ಯಾಣ ಮಾಡೋದಾಗಿ ಭರವಸೆ ನೀಡಿದರು.
ಕಲಬುರ್ಗಿ ವಿಮಾನ ನಿಲ್ದಾಣ ಕೊನೆಗೂ ಲೋಕಾರ್ಪಣೆಗೊಂಡಿದೆ. ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಬಳಿ 181 ಕೋಟಿ ರೂಪಾಯಿ ವೆಚ್ಚದಲ್ಲಿ 742 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ತಲೆಯೆತ್ತಿದೆ. ರಾಜ್ಯದ ಎರಡೆಯ ಅತಿದೊಡ್ಡ ರನ್ ವೇ ಹೊಂದಿಗೆ ಎಂಬ ಹೆಗ್ಗಳಿಕೆ ಹೊಂದಿರುವ ವಿಮಾನ ನಿಲ್ದಾಣದ ಉದ್ಘಾಟನೆ ಸಮಾರಂಭ ನೆನ್ನೆ ನೆರವೇರಿತು. ಬೆಂಗಳೂರಿನಿಂದ ಸ್ಟಾರ್ ಏರ್ಸ್ ವಿಮಾನದಲ್ಲಿ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಕಲಬುರ್ಗಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದರು.
ನಂತರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣ ಆಗಿರೋದ್ರಿಂದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನೆರವಾಗಲಿದೆ ಎಂದರು. ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ಮೋದಿ ಅವರೇ ಆಗಮಿಸಬೇಕಿತ್ತು. ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಅವರು ಬರಲಾಗಿಲ್ಲ ಎಂದರು. ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡುವ ಮೂಲಕ ಅಭಿವೃದ್ಧಿ ಪಥಕ್ಕೆ ಅಡಿಗಲ್ಲು ಹಾಕಿದ್ದೇನೆ. ಕೆಲವೊಬ್ಬರು ಹೆಸರು ಬದಲಿಸಿದರೆ ಏನು ಪ್ರಯೋಜನ ಅಂತೀದಾರೆ. ಆದರೆ ನಾನು ಕೇವಲ ಹೆಸರು ಬದಲಿಸಿ ಸುಮ್ಮನೇ ಕೂಡಲ್ಲ. ಹೆಸರಿಗೆ ತಕ್ಕಂತೆ ಈ ಭಾಗವನ್ನು ಕಲ್ಯಾಣ ಮಾಡುವುದು ನನ್ನ ಸಂಕಲ್ಪವಾಗಿದೆ. ಮುಂದಿನ ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡೋದಾಗಿ ಯಡಿಯೂರಪ್ಪ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಿಎಂ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತಿತತರು ಉಪಸ್ಥಿತರಿದ್ದರು. ವಿಮಾನ ನಿಲ್ದಾಣದ ಎದುರಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಸಹಸ್ರಾರು ಜನ, ಲೋಹದ ಹಕ್ಕಿ ಹಾರಾಟದ ದೃಶ್ಯಗಳನ್ನು ಕಣ್ತುಂಬಿಕೊಂಡರು. ಬಂದ ವಿಮಾನದ ಮೂಲಕವೇ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿಗೆ ವಾಪಸ್ಸಾದರು.