ಡಿ.ಕೆ ಶಿವಕುಮಾರನ್ನ ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ…
ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಅವರನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾಗಿ ಆತ್ಮಸ್ಥೈರ್ಯ ತುಂಬಿದರು.
ತಿಹಾರ್ ಜೈಲಿಗೆ ಬೆಳಗ್ಗೆ 8.15ಕ್ಕೆ ಆಗಮಿಸಿದ ಸೋನಿಯಾಗಾಂಧಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಸುಮಾರು 25 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಈ ವೇಳೆ ಡಿ.ಕೆ ಶಿವಕುಮಾರ್ ಗೆ ಧೈರ್ಯ ಹೇಳಿದ್ದಾರೆ ಎನ್ನಲಾಗಿದೆ. ಸೋನಿಯಾ ಗಾಂಧಿಗೆ ಸಂಸದ ಡಿ.ಕೆ ಸುರೇಶ್ ಸಾಥ್ ನೀಡಿದರು.
ಸೋನಿಯಾ ಗಾಂಧಿ ಭೇಟಿ ಬಳಿಕ ಮಾತನಾಡಿದ ಸಂಸದ ಡಿ.ಕೆ ಸುರೇಶ್, ಸೋನಿಯಾ ಗಾಂಧಿ ಅವರು ಡಿ.ಕೆ ಶಿವ ಕುಮಾರ್ ಅವರನ್ನ ಭೇಟಿಯಾಗಿ ಆತ್ಮಸ್ಥೈರ್ಯ ತುಂಬಿದ್ದಾರೆ. ಇದರಿಂದ ಡಿ.ಕೆ ಶಿವಕುಮಾರ್ ಗೆ ಧೈರ್ಯ ಹೆಚ್ಚಾಗಿದೆ. ಇಂದು ಜಾಮೀನು ಅರ್ಜಿ ವಿಚಾರಣೆ ಹಿನ್ನೆಲೆ, ಶುಭ ಸುದ್ದಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.