ಲಾಕ್ಡೌನ್: ಮೂರು ದಿನಗಳ ಕಾಲ ನಡೆದು ರಸ್ತೆಯಲ್ಲೇ ಪ್ರಾಣಬಿಟ್ಟ 12 ವರ್ಷದ ಬಾಲಕಿ
ಕೊರೊನಾ ನಿಯಂತ್ರಣಕ್ಕಾಗಿ ರಾಷ್ಟ್ರವ್ಯಾಪಿ ಲಾಕ್ಡೌನ್ ಮುಗಿದ ನಂತರ ಊರು ಸೇರುವ ಆಸೆ ಹೊಂದಿದ್ದ 12 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
ಲಾಕ್ಡೌನ್ ವಿಸ್ತರಿಸಿದ್ದರಿಂದಾಗಿ ಹತಾಶಳಾಗಿದ್ದ ಬಾಲಕಿ ತೆಲಂಗಾಣದಿಂದ ಛತ್ತೀಸ್ಘಡದ ತನ್ನ ಸ್ಥಳೀಯ ಬಿಜಾಪುರ ಜಿಲ್ಲೆಗೆ ಕಾಲ್ನಡಿಗೆಯಲ್ಲಿ 150 ಕಿ.ಮೀ ಪ್ರಯಾಣ ಮಾಡಿದ ಬಾಲಕಿ ಊರು ಸೇರುವ ಮುನ್ನವೇ ತನ್ನ ಕೊನೆಯುಸಿರೆಳೆದಿದ್ದಾಳೆ. ತನ್ನ ಕುಟುಂಬದ ಬಂಡಿ ಸಾಗಿಸಲು ಮೆಣಸಿಕಾಯಿ ಬೆಳೆಯುವ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಜಾಮ್ಲೋ ಮಕ್ಡಾಮ್ ತನ್ನ ಹಳ್ಳಿ ಸೇರಲು ಕೇವಲ ಒಂದು ಗಂಟೆ ದೂರದಲ್ಲಿ ಹಾದಿ ಮಧ್ಯೆಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.
ತೆಲಂಗಾಣದ ಹಳ್ಳಿಯೊಂದರಲ್ಲಿ ಮೆಣಸಿನಕಾಯಿ ಬೆಳೆಯುವ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ 11 ಮಂದಿಯೊಂದಿಗೆ ಆಕೆ ಏಪ್ರಿಲ್ 15 ರಂದು ಊರು ಸೇರಲು ದೀರ್ಘ ಪ್ರಯಾಣ ಆರಂಭಿಸಿದ್ದರು. ಈ ಗುಂಪು ಮೂರು ದಿನಗಳ ಕಾಲ ಕಾಡು-ಮೇಡುಗಳಲ್ಲಿ ನಡೆದು ಹೆದ್ದಾರಿ ತಲುಪಿ ಸಾಗಿತ್ತು.
ಶನಿವಾರ ಮಧ್ಯಾಹ್ನ ಆಕಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಪರಿಣಾಮ ಸಾವಿಗೆ ತುತ್ತಾಗಿದ್ದಾಳೆ. ಜಾಮ್ಲೊ ಸಾವನ್ನಪ್ಪಿದಾಗ ಅವಳ ಮನೆಯಿಂದ ಕೇವಲ 14 ಕಿ.ಮೀ ದೂರದಲ್ಲಿದ್ದಳು. ಕೊನೆಗೆ ಆಕೆಯ ದೇಹವನ್ನು ಆಂಬ್ಯುಲೆನ್ಸ್ನಲ್ಲಿ ಮನೆಗೆ ಕೊಂಡೊಯ್ಯಲಾಗಿದೆ.
“ಆಕೆಗೆ ಕೊರೊನಾ ವೈರಸ್ ಪರೀಕ್ಷೆ ನಡೆಸಿದ್ದು, ಕೊರೊನಾ ಸೋಂಕು ಆಕೆಗೆ ತಗುಲಿಲ್ಲ ಎಂಬುದನ್ನು ವೈದ್ಯರು ಸ್ಪಷ್ಟಪಡಿಸಿದ್ದು, ಆಕೆ ತೀವ್ರವಾದ ಅಪೌಷ್ಟಿಕತೆಯಿಂದ ಬಳಲುತಿದ್ದಳು” ಎಂದು ವೈದ್ಯರು ತಿಳಿಸಿದ್ದಾರೆ.
ಹಸಿವು ಮತ್ತು ಬೇಸಿಗೆ ಬಿಸಿಲಿನಿಂದ ಬಳಲಿ ಹೊಟ್ಟೆ ನೋವು ಕಾಣಿಸಿಕೊಂಡು ಸಾವನ್ನಪ್ಪಿದ ಬಾಲಕಿಯ ಕುಟುಂಬಕ್ಕೆ ರಾಜ್ಯ ಸರ್ಕಾರ ಒಂದು ಲಕ್ಷ ರೂ. ಪರಿಹಾರ ಘೋಷಿಸಿದೆ.
ತಮ್ಮ ಹಳ್ಳಿಗಳನ್ನು ಬಿಟ್ಟು, ಉದ್ಯೋಗವನ್ನರಸಿ ವಲಸೆ ಹೋಗಿದ್ದ ಬಡ ಜನರು ಲಾಕ್ಡೌನ್ ಸಂದರ್ಭದಲ್ಲಿ ಉದ್ಯೋಗ ಮತ್ತು ಆಶ್ರಯವಿಲ್ಲದೆ ಉಳಿದಿರುವ ಸಾವಿರಾರು ವಲಸೆ ಕಾರ್ಮಿಕರು ಹತಾಶೆಯಿಂದ ಕಾಲ್ನಡಿಗೆಯಲ್ಲಿ ದೀರ್ಘ ಪ್ರಯಾಣವನ್ನು ಮುಂದಾಗಿದ್ದಾರೆ.
COVID-19 ಸೋಂಕನ್ನು ನಿಯಂತ್ರಣಕ್ಕೆ ಲಾಕ್ಡೌನ್ ಅನಿವಾರ್ಯ. ಆದರೆ, ಅದಕ್ಕಾಗಿ ಯಾವುದೇ ಪೂರ್ವ ತಯಾರಿಯೂ ಇಲ್ಲದೇ, ಬಡಜನರ ಸಂಕಷ್ಟಕ್ಕೆ ಸರಿಯಾದ ಸ್ಪಂದನೆಯೂ ಇಲ್ಲದೆ. ಹಲವಾರು ವಲಸೆ ಕರ್ಮಿಕರು ನಡು ರಸ್ತೆಗಳಲ್ಲಿ ಸಾವಿಗೀಡಾಗುತ್ತಿದ್ದಾರೆ. ಆದರೂ ಸರ್ಕಾರ ಅಂತಹ ಜನರ ಬದುಕನ್ನು ಉಳಿಸಲು ಮುಂದಾಗದಿರುವುದು ಇಂತಹ ಸಾವುಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.