ಸ್ವಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಗೆ ಮತ್ತೊಂದು ಸಂಕಷ್ಟ…..!
ಅತ್ಯಾಚಾರದ ಆರೋಪ ಹೊತ್ತು ದೇಶದಿಂದಲೇ ನಾಪತ್ತೆಯಾಗಿರುವ ಸ್ವಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 2014ರ ಡಿಸೆಂಬರ್ 28ರಂದು ಬೆಂಗಳೂರಿನ ಬಿಡದಿ ಆಶ್ರಮದ ಬಳಿ ನಿಗೂಢವಾಗಿ ಸಾವನ್ನಪ್ಪಿದ್ದ 24 ವರ್ಷದ ಯುವತಿಯ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಮೃತ ಯುವತಿಯ ತಾಯಿ ಒತ್ತಾಯಿಸಿದ್ದಾರೆ.
ಸಂಗೀತಾ ಎಂಬ 24 ವರ್ಷದ ಯುವತಿ 5 ವರ್ಷಗಳ ಹಿಂದೆ ಬೆಂಗಳೂರಿನ ಬಿಡದಿಯಲ್ಲಿರುವ ನಿತ್ಯಾನಂದ ಆಶ್ರಮದ ಬಳಿ ನಿಗೂಢವಾಗಿ ಸಾವನ್ನಪ್ಪಿದ್ದಳು. ತಮ್ಮ ಮಗಳ ಸಾವಿನ ಹಿಂದೆ ನಿತ್ಯಾನಂದ ಸ್ವಾಮಿಯ ಕೈವಾಡವಿದೆ ಎಂದು ಯುವತಿಯ ತಂದೆ-ತಾಯಿ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಆಶ್ರಮದೊಳಗೆ ತಮ್ಮ ಮಗಳಿಗೆ ಹಿಂಸೆ ಕೊಟ್ಟು ಆಕೆಯನ್ನು ಕೊಂದು ಆಶ್ರಮದ ಬಳಿ ಎಸೆದಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದರು. ನಂತರ ಆ ಪ್ರಕರಣ ಅಲ್ಲೇ ತಣ್ಣಗಾಗಿತ್ತು.
ನಿತ್ಯಾನಂದನ ಶಿಷ್ಯನ ಮಗಳ ಮೇಲೆ ನಿತ್ಯಾನಂದ ಆಶ್ರಮದಲ್ಲಿ ಅತ್ಯಾಚಾರ ನಡೆಸಲಾಗಿದೆ ಎಂದು ಆಕೆಯ ತಂದೆ ಕಳೆದ ವಾರ ಗಂಭೀರ ಆರೋಪ ಮಾಡಿದ್ದರು. ವಿದೇಶಿ ಯುವತಿ ಕೂಡ ತನ್ನ ಮೇಲೆ ನಿತ್ಯಾನಂದ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಿದ್ದಳು. ಇದರ ಜೊತೆಗೆ ಇದೀಗ ನಿತ್ಯಾನಂದ ಸ್ವಾಮಿಯ ವಿರುದ್ಧ ಹೊಸ ಹೊಸ ಆರೋಪಗಳು ಕೇಳಿಬರತೊಡಗಿರುವುದರಿಂದ ಹಳೆಯ ಪ್ರಕರಣಕ್ಕೂ ಮತ್ತೆ ಜೀವ ಬಂದಿದೆ.