ಅಲ್ಪಸಂಖ್ಯಾತರ ವಿರುದ್ಧ ಸುಳ್ಳುಸುದ್ದಿ: ಉತ್ತರ ಪ್ರದೇಶದಲ್ಲಿ ಮೂವರ ಬಂಧನ
ಮುಸ್ಲಿಂ ವ್ಯಕ್ತಿ ಉಗಿಯುವ ಮೂಲಕ ಕೊರೊನ ವೈರಸ್ ಹರಡುತ್ತಿದ್ದಾನೆ ಎಂಬ ಸುಳ್ಳು ಸುದ್ದಿ ಹರಡುತ್ತಿದ್ದ ಮೂವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪೋಲೀಸರ ಪ್ರಕಾರ ಆರೋಪಿಗಳಾದ ಅರುಣ್ ಕುಮಾರ್, ಮನೋಜ್ ಮತ್ತು ತರುಣ್ ಗುರ್ಜಾರ್ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷ ಹರಡಿ ಕೋಮು ಉದ್ವಿಘ್ನತೆ ಸೃಷ್ಟಿಸಲು ಪ್ರಯತ್ನ ಪಡುತ್ತಿದ್ದರು ಎಂದು ಹೇಳಿದ್ದಾರೆ.
“ಒಂದು ನಿರ್ಧಿಷ್ಟ ಘಟನೆ ಕುರಿತಂತೆ ತನಿಖೆಗಾಗಿ ಲಖ್ವ್ಯಯ ಗ್ರಾಮಕ್ಕೆ ಭೇಟಿ ನೀಡಿದ್ದೆವು. ನೈಮುದ್ದೀನ್ ಎಂಬುವವರು ಹಿಂದೂ ವ್ಯಕ್ತಿಗಳ ಅಂಗಡಿಗಳಿಗೆ ಹೋಗಿ ಉಗಿದು ವೈರಸ್ ಹಾಡಲು ಪ್ರಯತ್ನ ಪಡುತ್ತಿದ್ದಾನೆ ಎಂಬ ವದಂತಿ ಹರಡುತ್ತಿರುವುದು ತಿಳಿದುಬಂದಿತು. ಲಾಕ್ ಡೌನ್ ಸಮಯದಲ್ಲಿ ಇದನ್ನು ತನಿಖೆ ಮಾಡಿದಾಗ, ಇದು ಮೂವರು ಹಿಂದೂ ಯುವಕರ ಕೃತ್ಯ ಎಂದು ತಿಳಿದುಬಂದಿತು. ಉದ್ವಿಘ್ನತೆ ಉಂಟುಮಾಡಲು ಈ ಕಥೆ ಹರಡುತ್ತಿರುವುದಾಗಿ ಅವರು ಹೇಳಿದರು” ಎಂದು ಕಂಕಂಖೇರ ಪೋಲಿಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಆರೋಪಿಗಳಲ್ಲಿ ಒಬ್ಬನಾದ ಅರುಣ್ ಎಂಬುವವರ ಅಂಗಡಿಯಲ್ಲಿ ನೈಮುದ್ದೀನ್ ಉಗಿದಿದ್ದ ಎಂಬ ಆರೋಪದ ಮೇರೆಗೆ ಪ್ರಶ್ನಿಸಿದಾಗ ಇದು ಸುಳ್ಳು ಎಂದು ತಿಳಿದುಬಂದಿದೆ. ಇಡೀ ಹಿಂದೂ ಸಮುದಾಯವನ್ನು ಮುಸ್ಲಿಮರ ವಿರುದ್ಧ ಎತ್ತುಕಟ್ಟಲು ಈ ಕಥೆಯನ್ನು ಕಟ್ಟಲಾಗಿದೆ ಎಂದು ಪೊಲೀಸರ ವಿಚಾರಣೆಯಲ್ಲಿ ತಿಲಿದುಬಂದಿದೆ.
ಆರೋಪಿಗಳನ್ನು ಭಾರತೀಯ ಅಪರಾಧ ಸಂಹಿತೆ 153 ಬಿ, 186, 193, 270 ಅಡಿಯಲ್ಲಿ ಬಂಧಿಸಲಾಗಿದೆ.