ಕೊರೊನವೈರಸ್ ಗೆ ಕೋಮುಬಣ್ಣ ನೀಡುವುದರ ವಿರುದ್ಧ ಎಚ್ಚರಿಕೆ ನೀಡಿದ ಕೇರಳ ಮತ್ತು ಪಶ್ಚಿಮ ಬಂಗಾಳ
ಭಾರತದ ಕೆಲವು ಕೊರೊನ ಸೋಂಕು ಪ್ರಕರಣಗಳು ದೆಹಲಿಯಲ್ಲಿ ನಡೆದ ತಬ್ಲಿಗ್ಜಿ ಜಮಾತ್ ಮುಸ್ಲಿಂ ಧಾರ್ಮಿಕ ಸಮಾವೇಶಕ್ಕೆ ತಳುಕು ಹಾಕಿಕೊಂಡಿರುವ ಹಿನ್ನಲೆಯಲ್ಲಿ, ಕೊರೊನ ಸೋಂಕಿಗೆ ಕೋಮು ತಿರುವು ನೀಡುವುದರ ವೀರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ಎಚ್ಚರಿಸಿದ್ದಾರೆ.
ಮತ್ತೊಂದು ಪತ್ರಿಕಾಗೋಷ್ಠಿಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಬ್ಲಿಗ್ಜಿ ಜಮಾತ್ ಸಮಾವೇಶವನ್ನು ರೋಚಕಗೊಳಿಸಬಾರದು ಎಂದಿದ್ದಾರೆ.
ಆದರೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಆ ಸಂಸ್ಥೆಯನ್ನು ಟೀಕಿಸಿದ್ದು, ಇದು ದೇಶಕ್ಕೆ ಅಪಾಯ ತಂದೊಡ್ಡಿದೆ ಎಂದಿರುವುದಲ್ಲದೆ, ಅದರಿಂದ ದೂರ ಉಳಿಯುವಂತೆ ಜನರಿಗೆ ಹೇಳಿದ್ದಾರೆ.
ಕೋವಿದ್-19 ವೈರಾಣು ಮೂಲಕ ಕೋಮು ದ್ವೇಷ ಹರಡಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಪಿಣರಾಯಿ “ಕೊರೊನವೈರಸ್ ಯಾರದ್ದೋ ಧರ್ಮ ನೋಡಿ ಸೋಂಕು ಹರಡುವುದಿಲ್ಲ. ನಾವೆಲ್ಲಾ ಒಟ್ಟಾಗಿ ಈ ಸೋಂಕಿನ ವಿರುದ್ಧ ಎಚ್ಚರಿಕೆಯಿಂದ ಕಾಯಬೇಕಿರುವುದು ಮುಖ್ಯ. ಸರ್ಕಾರದ ಕೋರಿಕೆಯಂತೆ ಸಾರ್ವಜನಿಕ ಸಭೆಗಳನ್ನು ರದ್ದು ಮಾಡಿರುವ ಸಮಾಜದ ಎಲ್ಲ ವಲಯಗಳ ಕೆಲವನ್ನು ನಾವು ನೆನಪಿಸಿಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.
ಬುಧವಾರ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಟ್ವೀಟ್ ಮಾಡಿ “ರೋಗಕ್ಕೆ ಜಾತಿ-ಧರ್ಮಗಳಿಲ್ಲ. ಇದನ್ನು ಜಾತಿ-ಧರ್ಮದ ಪೂರ್ವಗ್ರಹಗಳಿಲ್ಲದೆಯೇ ಎದುರಿಸಬೇಕು. ಕೊರೊನಾ ವಿರುದ್ದ ದೇಶ ಒಂದಾಗಿನಡೆಸುತ್ತಿರುವ ಹೋರಾಟಕ್ಕೆ ಕೆಲವರು ಜಾತಿ-ಧರ್ಮದ ಬಣ್ಣ ಹಚ್ಚಲು ಪ್ರಯತ್ನಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ಈ ಸಂಕಷ್ಟದ ಗಳಿಗೆಯಲ್ಲಿ ಒಂದಾಗಿರೋಣ, ಎಚ್ಚರವಾಗಿರೋಣ” ಎಂದಿದ್ದರು.
https://twitter.com/siddaramaiah/status/1245234862807642112