ಧಾರಾಕಾರ ಮಳೆಯಿಂದಾಗಿ ಆಸ್ಪತ್ರೆಗಳ ಎಮರ್ಜೆನ್ಸಿ ವಾರ್ಡ್ಗಳಿಗೆ ನುಗ್ಗಿದ ನೀರು
ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರ. ಕೊರೊನಾ ಸೊಂಕಿನ ಹರಡುವಿಕೆಯನ್ನು ನಿಯಂತ್ರಿಸುವುದಕ್ಕಾಗಿ ಹರಸಾಹಸ ಪಡುತ್ತಿರುವ ಮಹಾರಾಷ್ಟ್ರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ ಮುಂಗಾರಿನ ಆರ್ಭಟ ಹೆಚ್ಚಾಗಿದ್ದು, ಆಸ್ಪತ್ರೆಗಳಿಗೂ ಮಳೆ ನೀರು ನುಗ್ಗಲಾರಂಭಿಸಿದೆ.
ನಿನ್ನೆಯಿಂದ ಧಾರಕಾರವಾಗಿ ಮಳೆಯಾಗುತ್ತಿರುವ ಪರಿಣಾಮ ಜಲಂಗಾವ್ನಲ್ಲಿರುವ ಡಾ. ಉಲ್ಹಾಸ್ ಪಾಟೀಲ್ ವೈದ್ಯಕೀಯ ಕಾಲೇಜಿನ ತುರ್ತು ವಾರ್ಡ್ಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಆಸ್ಪತ್ರೆಯ ರೋಗಿಗಳು ಭಯಭೀತರಾಗಿದ್ದ ಸ್ಥಿತಿ ಉಂಟಾಗಿತ್ತು.
ಮಳೆ ನೀರು ನುಗ್ಗಿದ ಸಂದರ್ಭದಲ್ಲಿ ಏಳರಿಂದ ಎಂಟು ರೋಗಿಗಳನ್ನು ಎಮರ್ಜನ್ಸಿ ವಾರ್ಡ್ನಲ್ಲಿ ದಾಖಲಿಸಲಾಗಿತ್ತು. ಬಳಿಕ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ವೈದ್ಯರು ಹಾಗೂ ಸಿಬ್ಬಂದಿಗಳ ಸಹಾಯದಿಂದ ರೋಗಿಗಳನ್ನು ಸ್ಥಳಾಂತರ ಮಾಡಲು ಸಾಧ್ಯವಾಗಿದೆ.
ಮುಂಗಾರು ಮಳೆ ಚುರುಕುಗೊಂಡಿರುವಂತೆಯೇ ತಗ್ಗಾದ ಪ್ರದೇಶಗಳಲ್ಲಿ ಪ್ರವಾಹದ ಸ್ಥಿತಿಯುಂಟಾಗುತ್ತಿದೆ. ಕೊರೊನಾ ವೈರಸ್ ಭೀತಿಯ ಜೊತೆಗೇ ಕಳೆದ ತಿಂಗಳು ನಿಸರ್ಗ ಚಂಡಮಾರುತ ಕೂಡ ಮಹಾರಾಷ್ಟ್ರ ಜನರ ನಿದ್ರೆಗೆಡಿಸಿತ್ತು. ಕೊರೊನಾ, ನೈಸರ್ಗಿಕ ವಿಪತ್ತುಗಳು ಎದುರಾಗುತ್ತಿದ್ದು, ಜನಸಾಮಾನ್ಯರು ಮತ್ತಷ್ಟು ಸಂಕಷ್ಟಕ್ಕೆ ಎದುರಾಗುತ್ತಿದ್ದಾರೆ.
Maharashtra: Rainwater entered the emergency ward of Dr Ulhas Patil Medical College and Hospital in Jalgaon earlier today. Dr Pramod Bhirud, Registrar, says,"Resident doctor&staff members were present at the hospital. 7-8 patients admitted in the ward who were safely evacuated". pic.twitter.com/CafwnJ849I
— ANI (@ANI) June 14, 2020
ಮಹಾರಾಷ್ಟ್ರದಲ್ಲಿ 1,07,958 ಕೊರೊನಾ ಸೋಂಕಿತರಿದ್ದು, ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಕೇರಳ ರಾಜ್ಯದ ವೈದ್ಯರ ತಂಡ ಮಹಾರಾಷ್ಟ್ರಕ್ಕೆ ತೆರಳಿದ್ದು, ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ.