ನನ್ನನ್ನು ಕಂಡರೆ ಬಿಜೆಪಿಗೆ ಭಯ – ಜಾಮೀನು ರದ್ದಾಗಿದ್ದಕ್ಕೆ ಚಂದ್ರಶೇಖರ್ ಅಜಾದ್ ಆರೋಪ
ಹೊಸ ಪಕ್ಷ ಕಟ್ಟಿ ದೆಹಲಿ ಮತ್ತು ಉತ್ತರ ಪ್ರದೇಶ ಚುನಾವಣೆಗಳಲ್ಲಿ ಸ್ಪರ್ಧಿಸುತ್ತೇವೆ ಎಂದು ಘೋಷಿಸಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ರವರು ಜಾಮೀನು ರದ್ದುಗೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು ನನ್ನನ್ನು ಕಂಡರೆ ಬಿಜೆಪಿಗೆ ಭಯ, ಹಾಗಾಗಿ ಜಾಮೀನು ರದ್ದುಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಸ್ಲಿಂ ಸಮಾಜದೊಂದಿಗೆ ಸೇರಿ ಡಿಸೆಂಬರ್ 17 ರಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭಾರೀ ಆಂದೋಲನವನ್ನು ಘೋಷಿಸಿದ್ದೆ. ಅಂದೇ ನಮ್ಮ ಹೊಸ ರಾಜಕೀಯ ಪಕ್ಷ ರಚನೆಯನ್ನು ಸಹ ಹಮ್ಮಿಕೊಂಡಿದ್ದೆವು. ಇದರಿಮದ ಬಿಜೆಪಿ ಸರ್ಕಾರವು ಭಯಭೀತವಾಗಿದೆ. ಹಾಗಾಗಿ ನನ್ನ ಜಾಮೀನು ರದ್ದುಗೊಳಿಸುವ ಆದೇಶವನ್ನು ಹೊರಡಿಸಿ, ಡಿಸೆಂಬರ್ 17 ರಂದೇ ಅಲಹಾಬಾದ್ ಹೈಕೋರ್ಟ್ನಲ್ಲಿ ಹಾಜರಾಗುವಂತೆ ಮಾಡಿದೆ. ಆದರೆ ನಾವು ಈ ತಂತ್ರಗಳಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೂ ಎರಡು ದಿನಗಳ ಮುಂಚೆಯೇ ಅವರು ತಮ್ಮ ಹೊಸ ರಾಜಕೀಯ ಪಕ್ಷದ ಕುರಿತು ಘೋಷಿಸಿದ್ದರು. “ನಾನು ಇಂದು ಹೊಸ ರಾಜಕೀಯ ಆಯ್ಕೆಗಳನ್ನು ಬಹುಜನ ಸಮಾಜಕ್ಕೆ ಘೋಷಿಸುತ್ತಿದ್ದೇನೆ. ಸಮಾಜಕ್ಕೆ ತಮ್ಮ ಜೀವನವನ್ನು ಅರ್ಪಿಸಿ ನಾಯಕತ್ವವನ್ನು ವಹಿಸುವ ಪ್ರಾಮಾಣಿಕ, ಹೋರಾಟನಿರತ ಮತ್ತು ಮಹತ್ವಕಾಂಕ್ಷೆಯುಳ್ಳ ಯುವಜನರಿಗೆ ಪಕ್ಷ ಸೇರಲು ಮನವಿ ಮಾಡುತ್ತೇನೆ. ಇನ್ನು ಮುಂದೆ ಶ್ರೀಮಂತರಲ್ಲ, ಕಾರ್ಯಕರ್ತರು ನಾಯಕನಾಗುತ್ತಾರೆ. ಜೈ ಭೀಮ್” ಎಂದು ಟ್ವೀಟ್ ಮಾಡಿದ್ದರು.