ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗುವ ಅರ್ಥಿಕ ಪರಿಣಾಮಗಳೇನು..? ಇಲ್ಲಿದೆ ಮಾಹಿತಿ..
ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿ ಈ ದೇಶದ ಸಂವಿಧಾನದ ಮೂಲ ಆಶಯಗಳಾದ ಸಹಭಾಗಿತ್ವ, ಸಹೋದರತ್ವ, ಧರ್ಮನಿರಪೇಕ್ಷತೆ, ಜಾತ್ಯತೀತತೆಗಳಿಗೆ ವಿರುದ್ಧವಾಗಿರುವುದು ಬಹುತೇಕರಿಗೆ ಅರ್ಥವಾಗಿದೆ. ಇದು ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆದು ಒಂದಿಡೀ ಸಮುದಾಯವನ್ನು ಮುಖ್ಯವಾಹಿನಿಯಿಂದ ಹೊರಗಿಡುವಂಥ ಅಮಾನವೀಯ ಕೆಲಸವಾಗಿದೆ. ಈ ದೇಶ ಸರ್ವಜನಾಂಗದ ಶಾಂತಿಯ ತೋಟ ಎಂಬ ಹಿರಿಮೆಗೇ ಮಸಿಬಳಿಯುವಂತಹುದೂ ಆಗಿದೆ.
ಇದನ್ನ ಮನಗಂಡೇ ದೇಶದಾದ್ಯಂತ ಜಾತಿಧರ್ಮಗಳನ್ನು ಮೀರಿ ನಾಗರಿಕರು ಅದರಲ್ಲೂ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಮುಂದೆ ನಿಂತು ಶಾಂತಿಯುತ ಪ್ರತಿಭಟನಾ ಹೋರಾಟಗಳನ್ನು ನಡೆಸುತ್ತಿದ್ದಾರೆ. ಇಂಥಾ ಒಕ್ಕೊರಲ ಪ್ರತಿಭಟನೆಯಿಂದಾಗಿ ಕೆಲವು ರಾಜ್ಯ ಸರ್ಕಾರಗಳು ಸಿಎಎ ಮತ್ತು ಎನ್ಆರ್ಸಿಯನ್ನು ತಮ್ಮ ರಾಜ್ಯಗಳಲ್ಲಿ ಮಾಡುವುದಿಲ್ಲ ಎಂದೂ ಹೇಳಿವೆ.
ಈ ಪೌರತ್ವ ಕಾಯ್ದೆಯು ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯುವುದಷ್ಟೇ ಅಲ್ಲದೆ ದೇಶದ ಆರ್ಥಿಕತೆಯ ಮೇಲೆಯೂ ತಾಳಲಾರದಷ್ಟು ಆಘಾತ ಉಂಟುಮಾಡಲಿದೆ.
ಈ ಕಾಯ್ದೆಯ ಅನುಷ್ಟಾನದಿಂದ ದೇಶದ ಮೇಲೆ ಉಂಟಾಗುವ ಅರ್ಥಿಕ ಪರಿಣಾಮಗಳೇನು ಎಂದು ಸಂಕ್ಷಿಪ್ತವಾಗಿ ನೋಡುವ ಪ್ರಯತ್ನ ಮಾಡೋಣ.
ಕಡೆಯ ಆರು ವರ್ಷಗಳಲ್ಲಿ ಅಸ್ಸಾಮ್ ರಾಜ್ಯದಲ್ಲಿ ನಡೆದ ಎನ್ಆರ್ಸಿ ಪ್ರಕ್ರಿಯೆಗೆ ಖರ್ಚಾದ ಹಣ ಹತ್ತಿರತ್ತಿರ 1500 ಕೋಟಿ ರೂಪಾಯಿಗಳು. ಜೊತೆಗೆ ಈ ಕೆಲಸಕ್ಕೆ ಬಳಸಿಕೊಂಡ ಸರ್ಕಾರೀ ಉದ್ಯೋಗಿಗಳ ಸಂಖ್ಯೆ ಐವತ್ತೈದು ಸಾವಿರ. ಅಸ್ಸಾಮ್ ಜನಸಂಖ್ಯೆ ಮೂರೂವರೆ ಕೋಟಿ. ಆ ಲೆಕ್ಕದಲ್ಲಿ ಇಡೀ ದೇಶದಲ್ಲಿ ಎನ್ಆರ್ಸಿ ಮಾಡಲು ಖರ್ಚಾಗುವ ಹಣ ಕನಿಷ್ಟ ಅರವತ್ತುಸಾವಿರ ಕೋಟಿ ರೂಪಾಯಿಗಳು. ಜೊತೆಗೆ ಬೇರೆ ಕೆಲಸಗಳನ್ನು ಬಿಟ್ಟು ಸಾವಿರಾರು ಉದ್ಯೋಗಿಗಳು ಎನ್ಆರ್ಸಿ ಕೆಲಸಕ್ಕೆ ಬಳಕೆಯಾದರೆ ತಗಲುವ ಪರೋಕ್ಷ ಖರ್ಚು ಇನ್ನೂ ಹಲವು ಸಾವಿರ ಕೋಟಿಗಳು.
ದೇಶವನ್ನು ಆರ್ಥಿಕ ಹಿಂಜರಿಕೆಯಿಂದ ಮೇಲೆತ್ತುವ ಮುಖ್ಯ ಕ್ರಮವಾದ ಗ್ರಾಮೀಣ ಉದ್ಯೋಗ ಖಾತ್ರಿಗೆ ಹೆಚ್ಚುವರಿಯಾಗಿ ಹತ್ತು ಸಾವಿರ ಕೋಟಿ ಕೊಡಲು ಸರ್ಕಾರದ ಬಳಿ ಹಣವಿಲ್ಲ.
ಕರ್ನಾಟಕದ ಪ್ರವಾಹ ಪೀಡಿತರಿಗೆ ಕೊಡಬೇಕಾದಷ್ಟರಲ್ಲಿ ಕನಿಷ್ಟ ಶೇಕಡಾ ಹತ್ತರಷ್ಟು ಕೊಡಲೂ ಸರ್ಕಾರದ ಬಳಿ ದುಡ್ಡಿಲ್ಲ. ಅಂತಹುದರಲ್ಲಿ ಇಷ್ಟೊಂದು ದೊಡ್ಡ ಮೊತ್ತ (ಒಟ್ಟು ಕನಿಷ್ಟ ಒಂದು ಲಕ್ಷಕೋಟಿ ) ಸರ್ಕಾರದ ಹತ್ತಿರ ಎಲ್ಲಿದೆ?
ಸರ್ಕಾರ ಸಾಲ ಮಾಡಿಯೇ ಈ ಖರ್ಚನ್ನು ಹೊಂದಿಸಬೇಕಾಗುವುದರಿಂದ ನಮ್ಮೆಲ್ಲರ ತಲೆಯ ಮೇಲೆ ಮತ್ತಷ್ಟು ಸಾಲದ ಹೊರೆ ಬೀಳಲಿದೆ ಮತ್ತು ಅದರಿಂದ ದೇಶ ಇನ್ನಷ್ಟು ಆರ್ಥಿಕವಾಗಿ ಹಿಂದೆ ಬೀಳಲಿದೆ.
ಇನ್ನು, ಬೇರೆ ದೇಶದಿಂದ ಬಂದಿರುವ ಮುಸ್ಲಿಮರಿಗೆ ಸಿಎಎ ಅಡಿಯಲ್ಲಿ ಪೌರತ್ವ ನೀಡಲಾಗುವುದಿಲ್ಲ (ಸಿಎಎ ಪ್ರಕಾರ ಹಿಂದು,ಕ್ರೈಸ್ತ, ಜೈನ, ಪಾರ್ಸಿ ಮತ್ತು ಬೌದ್ಧರಿಗೆ ಮಾತ್ರ ಪೌರತ್ವ ನೀಡಲಾಗುತ್ತದೆ). ಪೌರತ್ವವಿಲ್ಲದ ಮುಸ್ಲಿಮರನ್ನು ಬೇರೆ ಯಾವುದೇ ದೇಶಕ್ಕೆ ಕಳಿಸಲಾಗುವುದೂ ಇಲ್ಲ. ಏಕೆಂದರೆ, ಆಗಿರುವವರ ಬಳಿ ಅವರು ಬೇರೆ ದೇಶದ ಪ್ರಜೆಗಳೆಂದು ಸಾಬೀತುಪಡಿಸುವ ದಾಖಲೆಗಳೂ ಇರುವುದಿಲ್ಲ. ಆಗ, ಅಂತವರನ್ನು ಸರ್ಕಾರದ ಪ್ರಕಾರ ಡಿಟೆನ್ಷನ್ ಸೆಂಟರುಗಳಲ್ಲಿ (Detention centre) ಇಡಲಾಗುತ್ತದೆ.
ಸುಮ್ಮನೆ ಒಂದು ಅಂದಾಜಿಗೆ ಆ ರೀತಿ ಪೌರತ್ವ ಇಲ್ಲದ ಇಪ್ಪತ್ತು ಲಕ್ಷ ಮುಸ್ಲಿಮರು ಸಿಗುತ್ತಾರೆಂದುಕೊಳ್ಳೋಣ (ಬಿಜೆಪಿ ಐಟಿ ಸೆಲ್ ಈ ಸಂಖ್ಯೆ ಎರಡು ಮೂರು ಕೋಟಿಯಷ್ಟಿದೆ ಎಂದು ಪ್ರಚಾರ ಮಾಡ್ತಿದೆ). ಈ ಇಪ್ಪತ್ತು ಲಕ್ಷ ಜನರನ್ನ ಡಿಟೆನ್ಷನ್ ಸೆಂಟರುಗಳಲ್ಲಿಟ್ಟು ನೋಡಿಕೊಳ್ಳುವುದಕ್ಕೆ ವರ್ಷಕ್ಕೆ ಕನಿಷ್ಟ ಹತ್ತು ಸಾವಿರ ಕೋಟಿಗಳಷ್ಟು ಖರ್ಚಾಗಲಿದೆ. ಒಂದು ಸೆಂಟರಿನಲ್ಲಿ ಅಂದಾಜು ಮೂರು ಸಾವಿರ ಜನ, ಊಟ, ಬಟ್ಟೆ, ಮಕ್ಕಳ ಸ್ಕೂಲು ಮತ್ತು ಉಸ್ತುವಾರಿ ಸಿಬ್ಬಂದಿಗಳ ವೆಚ್ಚ ಎಲ್ಲ ಸೇರಿದರೆ ವರ್ಷಕ್ಕೆ ಹತ್ತು ಸಾವಿರ ಕೋಟಿ ದಾಟಲಿದೆ. ಅಸ್ಸಾಮಿನಲ್ಲಿ ಪ್ರತಿ ಸೆಂಟರನ್ನು ಕಟ್ಟಲು ಐವತ್ತು ಕೋಟಿ ವ್ಯಯಿಸಲಾಗಿದೆ. ಆ ಲೆಕ್ಕದಲ್ಲಿ ಐನೂರು ಸೆಂಟರುಗಳನ್ನು ಕಟ್ಟಲು ಇಪ್ಪತ್ತೈದು ಸಾವಿರ ಕೋಟಿ ಒಟ್ಟಿಗೇ ಖರ್ಚಾಗಲಿದೆ.
ಇಲ್ಲಿ ಅಂದಾಜಿಸಿರುವ ಇಪ್ಪತ್ತು ಲಕ್ಷ ಜನ ಬದುಕಲು ಇವತ್ತು ಒಂದಲ್ಲ ಒಂದು ಕೆಲಸ ಮಾಡಿ (ಮೆಕ್ಯಾನಿಕ್, ಸೆಕ್ಯೂರಿಟಿ, ಸಣ್ಣ ಅಂಗಡಿ ಇತ್ಯಾದಿ) ಸಂಪಾದನೆ ಮಾಡುತ್ತಾ ದೇಶದ ಜಿಡಿಪಿಗೆ ತಮ್ಮ ಕಾಣಿಕೆಯನ್ನು ನೀಡುತ್ತಿದ್ದಾರೆ.
ದೇಶದ ತಲಾದಾಯ ಇವತ್ತು ತಿಂಗಳಿಗೆ ಹತ್ತು ಸಾವಿರದ ಐನೂರು ರೂಪಾಯಿಗಳು. ಈ ಲೆಕ್ಕದಲ್ಲಿ ಇಪ್ಪತ್ತು ಲಕ್ಷ ಜನರಿಂದ ಪ್ರತಿವರ್ಷ ಜಿಡಿಪಿಗೆ ಸಿಗುವ ಕೊಡುಗೆ ಹತ್ತಿರತ್ತಿರ ಇಪ್ಪತ್ತೈದು ಸಾವಿರ ಕೋಟಿ ರೂಪಾಯಿಗಳು.
ಅಂದರೆ, ಅಷ್ಟು ಜನರನ್ನು ನೋಡಿಕೊಳ್ಳುವ ಮತ್ತು ನಿಂತುಹೋಗುವ ಸಂಪಾದನೆ ಈ ಎರಡರಿಂದ ಭಾರತಕ್ಕೆ ವಾರ್ಷಿಕವಾಗಿ ಆಗುವ ಒಟ್ಟು ಆರ್ಥಿಕ ನಷ್ಟ ಕನಿಷ್ಟ ಮೂವತ್ತೈದರಿಂದ ನಲವತ್ತು ಸಾವಿರ ಕೋಟಿ ರೂಪಾಯಿಗಳು.
ಅದಲ್ಲದೆ, ಮೇಲೆ ಹೇಳಿದಂತೆ ಈಗ ತಕ್ಷಣಕ್ಕೆ ಆಗುವ ನಷ್ಟ ಕನಿಷ್ಟ ಒಂದು ಲಕ್ಷ ಕೋಟಿ ರೂಪಾಯಿಗಳು.
ಇಷ್ಟರ ಜೊತೆಗೆ, ದೇಶದೊಳಗೆ ಸಿಎಎ ಕಾರಣಕ್ಕಾಗಿ ಅಶಾಂತಿಯ ವಾತಾವರಣವಿರುವಾಗ ಯಾವುದೇ ದೇಶ ಭಾರತದಲ್ಲಿ ಬಂಡವಾಳ ಹೂಡಲು ಮುಂಬರುವುದಿಲ್ಲ.
ಈಗಾಗಲೇ ಈಶಾನ್ಯ ರಾಜ್ಯಗಳಲ್ಲಿ ಹನ್ನೆರಡು ಸಾವಿರ ಕೋಟಿ ಹೂಡಬೇಕಾಗಿದ್ದ ಜಪಾನ್ ತನ್ನ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಇದಲ್ಲದೆ, ದೇಶದ ಕೋಟ್ಯಂತರ ಮಂದಿ ತಮ್ಮ ಪೌರತ್ವ ಸಾಬೀತಿಗೆ ಅಲೆದಾಡುತ್ತ ಕಳೆಯುವುದರಿಂದ ಅವರ ಉತ್ಪಾದನಾ ಮಟ್ಟ ಕುಸಿದು ಅದೂ ಕೂಡ ಆರ್ಥಿಕತೆಗೆ ಮತ್ತೊಂದು ಭಾರೀ ಹೊಡೆತ ಕೊಡಲಿದೆ.
ತಾನೇ ಕೈಯಾರೆ ಮಾಡಿಕೊಂಡ (ನೋಟುಬಂದಿ ಮತ್ತು ಜಿಎಸ್ಟಿ) ತಪ್ಪುಗಳಿಂದಾಗಿ ಆರ್ಥಿಕ ದುಸ್ಥಿತಿಯಲ್ಲಿರುವ ಸರ್ಕಾರ ಸಿಎಎ ಮತ್ತು ಎನ್ಆರ್ಸಿಯಿಂದುಂಟಾಗುವ ಆರ್ಥಿಕ ಹೊರೆ ತಾಳಿಕೊಳ್ಳುವ ಸ್ಥಿತಿಯಲ್ಲಂತು ಇಲ್ಲವೇ ಇಲ್ಲ.
ಒಟ್ಟಿನಲ್ಲಿ, ಈ ಸಿಎಎ ಮತ್ತು ಎನ್ಆರ್ಸಿ ದೇಶವನ್ನು ಧರ್ಮಾಧಾರಿತವಾಗಿ ಒಡೆದು ಸಮಾಜದೊಳಗಿನ ಸಾಮರಸ್ಯವನ್ನು ಹಾಳುಮಾಡುವುದರ ಜೊತೆಗೆ ಆರ್ಥಿಕವಾಗಿಯೂ ಕೂಡ ದೇಶವನ್ನು ಕೆಳತಳ್ಳಲಿದೆ.
ಒಟ್ಟಾರೆ, ಇದು ದೇಶವನ್ನು ನೈತಿಕವಾಗಿ ಮತ್ತು ಆರ್ಥಿಕವಾಗಿ ಪ್ರಪಾತಕ್ಕೆ ಬೀಳಿಸಲಿದೆ. ( ಜನಶಕ್ತಿಯಿಂದ ತಡೆಯದೇ ಹೋದರೆ)
ಹಾಗಾದರೆ, ಈ ಸರ್ಕಾರ ಯಾವ ಕಾರಣಕ್ಕಾಗಿ ಈ ಸಿಎಎ ಮತ್ತು ಎನ್ಆರ್ಸಿ ಮಾಡುತ್ತಿದೆ?
ಒಂದು, ಇದರ ಎಲ್ಲ ಪರಿಣಾಮಗಳ ಅಂದಾಜಿಲ್ಲದೆ ತಮ್ಮ ಹಿಂದುತ್ವ ಕಾರ್ಯಸೂಚಿಯ ಭಾಗವಾಗಿ ಇದನ್ನು ಮಾಡುತ್ತಿರಬಹುದು.
ಎರಡು, ಪರಿಣಾಮಗಳ ಅರಿವಿದ್ದು ಅದರಲ್ಲೂ ಆರ್ಥಿಕ ದುಷ್ಪರಿಣಾಮದ ಅರಿವಿದ್ದು ಕೇವಲ ರಾಜಕೀಯ ಲಾಭದ ಕಾರಣಕ್ಕೆ ಇದನ್ನು ಮಾಡುವಂತೆ ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿರಬಹುದು. ಅಂದರೆ, ಚುನಾವಣೆ ಹತ್ತಿರ ಬಂದಂತೆ ಐದಾರು ಸಾವಿರ ಜನರನ್ನು ಮಾತ್ರ ಡಿಟೆನ್ಷನ್ ಸೆಂಟರುಗಳಲ್ಲಿಟ್ಟು ಅದನ್ನೇ ಕೋಟಿ ಜನ ಎಂಬಂತೆ ಸೋಷಿಯಲ್ ಮೀಡಿಯ ಮೂಲಕ ನಂಬಿಸಿ ಹಿಂದೂಗಳ ಓಟು ಪಡೆಯುವ ಹುನ್ನಾರವೂ ಇರಬಹುದು.
ಯಾವ ಕಾರಣಕ್ಕೇ ಮಾಡುತ್ತಿದ್ದರೂ ಇದನ್ನು ಇಡೀ ದೇಶ ಈಗ ಮಾಡುತ್ತಿರುವಂತೆ ಒಗ್ಗಟ್ಟಿನಿಂದ ಶಾಂತಿಯುತವಾಗಿ ಎದುರಿಸಿ ದೇಶವನ್ನು ನೈತಿಕ ಮತ್ತು ಆರ್ಥಿಕ ಅಧಃಪತನದಿಂದ ಉಳಿಸಬೇಕಾಗಿದೆ.