‘ಭೂತ್ ವಿದ್ಯಾ’ ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವೈದ್ಯರಿಗಾಗಿ ವಿಶೇಷ ಕೋರ್ಸ್
ಹಳ್ಳಿ ಪ್ರದೇಶಗಳಲ್ಲಿ ಜನ ಈಗಲೂ ದೆವ್ವಗಳಿವೆ ಎಂಬುದನ್ನು ನಂಬುತ್ತಾರೆ. ಮೈಮೇಲೆ ದೆವ್ವ ಬಂದಿದೆ ಎಂದು ವಿಚಿತ್ರವಾಗಿ ಆಡುತ್ತಾರೆ. ಈ ವೇಳೆ ಮಾಟಗಾರರು, ಯಂತ್ರ ತಂತ್ರವಿದ್ಯೆ ಕಲಿತಿರುವವರ ಹತ್ತಿರ ಹೋಗುತ್ತಾರೆ. ಆದರೆ ಇಂತಹ ಸಮಸ್ಯೆ ನಿವಾರಿಸಲೆಂದೇ ವಿಶ್ವವಿದ್ಯಾಲಯವೊಂದು ‘ ಭೂತ್ ವಿದ್ಯಾ’ ಎಂಬ ಸರ್ಟಿಫಿಕೇಟ್ ಕೋರ್ಸ್ ಪರಿಚಯಿಸಿದೆ.
ವಾರಾಣಸಿಯಲ್ಲಿರುವ ದೇಶದ ಪ್ರತಿಷ್ಠಿತ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಈ ವಿಶೇಷ ಕೋರ್ಸ್ ಪರಿಚಯಿಸಲಾಗಿದೆ. ವೈದ್ಯರಿಗಾಗಿ ಶುರು ಮಾಡುತ್ತಿರುವ ಈ ಕೋರ್ಸ್ 6 ತಿಂಗಳ ಅವಧಿಯಾಗಿದ್ದು, 2020ರ ಜನವರಿಯಿಂದ ಶುರುವಾಗಲಿದೆ ಎಂದು ಬನಾರಸ್ ವಿವಿ ಅಧಿಕಾರಿಯೊಬ್ಬರು ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಈಗಾಗಲೇ ವೈದ್ಯ ವೃತ್ತಿ ಮಾಡುತ್ತಿರುವವರು ಈ ಕೋರ್ಸ್ ಗೆ ಸೇರಿಕೊಳ್ಳಬಹುದು.
ದೆವ್ವಗಳನ್ನು ನೋಡಿದ್ದೇನೆಂದು ಹೇಳುವವರು ಹಾಗೂ ದೆವ್ವ ಬಂದಂತೆ ಆಡುವವರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ಈ ಸರ್ಟಿಫಕೇಟ್ ಕೋರ್ಸ್ ನಲ್ಲಿ ಹೇಳಿಕೊಡಲಾಗುತ್ತಂತೆ. ಆಯುರ್ವೇದ ವಿಭಾಗದಿಂದ ಈ ಕೋರ್ಸ್ ಪರಿಚಯಿಸಲಾಗಿದ್ದು ಪ್ರಾಚೀನ ಹಿಂದೂ ವೈದ್ಯ ಪದ್ಧತಿ ಮೂಲಕ ದೆವ್ವದ ಭೀತಿಗೊಳಗಾಗಿರುವವರುನ್ನು ಚಿಕಿತ್ಸೆಗೊಳಪಡಿಸುವುದು, ಅವರ ಮಾನಸಿಕ ಅಸ್ವಸ್ಥತೆಯನ್ನು ಶಮನಗೊಳಿಸುವ ಬಗ್ಗೆ ಈ ಕೋರ್ಸ್ ನಲ್ಲಿ ಹೇಳಿಕೊಡಲಾಗುತ್ತದೆ.
ಮಾನಸಿಕ ತೊಂದರೆಗಳು, ಅಪರಿಚಿತ ಕಾರಣಗಳಿಂದ ಉಂಟಾದ ಮಾನಸಿಕ ಸಮಸ್ಯೆಗಳು ಸೇರಿ ಭೂತ ಸಂಬಂಧಿತ ಸಮಸ್ಯೆಗಳನ್ನು ಹೋಗಲಾಡಿಸಲು ಈ ಕೋರ್ಸ್ ಸಹಾಯವಾಗುತ್ತಂದಂತೆ. ಈ ಭೂತ್ ವಿದ್ಯಾ ಕೋರ್ಸ್ ಗಾಗಿ ಬನಾರಸ್ ವಿವಿಯಲ್ಲಿ ಪ್ರತ್ಯೇಕ ಘಟಕವನ್ನೇ ಸ್ಥಾಪಿಸಲಾಗಿದೆಯಂತೆ. ಭೂತ ಸಂಬಂಧಿತ ಸಮಸ್ಯೆಗಳ ನಿವಾರಣೆ ವಿಧಾನವನ್ನು ಕಲಿಸುವ ಭೂತ್ ವಿದ್ಯಾ ಕೋರ್ಸ್ ಪರಿಚಯಿಸಿರುವ ಭಾರತದ ಮೊದಲ ವಿಶ್ವವಿದ್ಯಾಲಯ ಇದು.