ಮೌಢ್ಯಾಚಾರಣೆಯಾದ ಸಿಡಿ ಹಬ್ಬಕ್ಕೆ ಎಂಪಿ ರೇಣುಕಾಚಾರ್ಯ ಚಾಲನೆ…!
ಮೊನ್ನೆಯಷ್ಟೇ ಮೂಢನಂಬಿಕೆಗಳ ಆಚರಣೆಗೆ ಸರ್ಕಾರ ಕಡಿವಾಣ ಹಾಕಿತ್ತು. ಇದರ ಅರಿವಿಲ್ಲ ಜನ ಈಗಲೂ ಮೂಢ ಆಚರಣೆಗಳನ್ನ ಬಹುರಂಗವಾಗಿ ಆಚರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ದಾವಣೆಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕಂಚಿಕೊಪ್ಪ ಗ್ರಾಮದಲ್ಲಿ ಅವರು ಸಿಡಿ ಉತ್ಸವಕ್ಕೆ ಚಾಲನೆ ನೀಡಿರುವುದು.
ಹೌದು… ಮೌಢ್ಯಾಚರಣೆ ವ್ಯಾಪ್ತಿಯಲ್ಲಿ ಬರುವ ‘ಸಿಡಿ’ ಆಚರಣೆ. ಬಾಯಿ, ಬೆನ್ನಿಗೆ ಕಬ್ಬಿಣದ ಸಲಾಕೆಗಳನ್ನು ಚುಚ್ಚಿಕೊಂಡು ದೇವರ ಸೇವೆ ಮಾಡುವ ಆಚರಣೆ ಇದಾಗಿದೆ.
ನಿಯಮ ಪಾಲನೆಗಳ ಉಲ್ಲಂಘನೆ ಮೂಲಕ ಸುದ್ದಿಯಾಗುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಈಗ ತಮ್ಮದೇ ಸರ್ಕಾರ ಜಾರಿಗೆ ತಂದಿರುವ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಉಲ್ಲಂಘಿಸಿ, ಮೌಢ್ಯಾಚಾರಣೆಯಾದ ಸಿಡಿ ಹಬ್ಬಕ್ಕೆ ಚಾಲನೆ ನೀಡಿದ್ದಾರೆ.
ಸಮಾಜದಲ್ಲಿನ ಕೆಲ ಅನಿಷ್ಟ ಪದ್ದತಿಗಳ ಆಚರಿಸುವುದನ್ನು ತಡೆಯುವ ಸಲುವಾಗಿ ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಮೌಢ್ಯ ಪ್ರತಿಬಂಧಕ ಕಾಯ್ದೆ ತರುವ ಪ್ರಸ್ತಾವ ಮುಂದಿಟ್ಟಿತ್ತು. ಯಡಿಯೂರಪ್ಪ ಸರ್ಕಾರ ಈಗ ಈ ಕಾಯ್ದೆಯನ್ನು ಜಾರಿಗೆ ತಂದಿದೆ. ಜನರಲ್ಲಿ ಭೀತಿ ಹುಟ್ಟಿಸುವ, ಮಾನಸಿಕ, ದೈಹಿಕ ದೌರ್ಜನ್ಯ ನಡೆಸುವ ಆಚರಣೆಗಳನ್ನು ಆಚರಿಸುವವರಿಗೆ ಶಿಕ್ಷೆ ವಿಧಿಸಲು ಈ ಕಾಯ್ದೆ ಅವಕಾಶ ನೀಡಿದೆ. ನಾಲ್ಕು ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಮೌಢ್ಯ ಪ್ರತಿಬಂಧಕ ಕಾಯ್ದೆಯಲ್ಲಿ ವಿವರಿಸಿರುವ ರೀತಿಯ ಭಯಾನಕ ಆಚರಣೆಗಳನ್ನ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಎಚ್ಚರಿಕೆ ನೀಡಿದ್ದರು. ಈಗ ಅವರದೇ ಪಕ್ಷದ ನಾಯಕರು ಈ ರೀತಿಯ ಅನಿಷ್ಟ ಆಚರಣೆಗೆ ಚಾಲನೆ ನೀಡಿರುವುದು ವಿಪರ್ಯಾಸವೇ ಸರಿ.