ದೇಶದ ಪ್ರಸಕ್ತ ಸನ್ನಿವೇಶದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದ ದಲಿತ ಮತ್ತು ಹಿಂದುಳಿದ ವರ್ಗದ ಆರು ಮಂದಿ ವಿದ್ಯಾರ್ಥಿಗಳನ್ನು ಉಚ್ಛಾಟಿಸಿರುವ ಘಟನೆ ಗುಜರಾತ್ ರಾಜ್ಯದ ವಾದ್ರಾದ ಮಹಾತ್ಮಗಾಂಧೀ ಅಂತಾರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ದೇಶದಲ್ಲಿ ಗುಂಪು ಹತ್ಯೆ, ಸಾರ್ವಜನಿಕ ಉದ್ದಿಮೆಗಳ ಮಾರಾಟ, ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು, ಕಾಶ್ಮೀರದಲ್ಲಿ ಎಲ್ಲಾ ಸೇವೆಗಳನ್ನು ರದ್ದುಗೊಳಿಸಿರುವುದು, ಅತ್ಯಾಚಾರ ಪ್ರಕರಣಗಳ ಬಗ್ಗೆ ವಿದ್ಯಾರ್ಥಿಗಳು ಪತ್ರ ಬರೆದಿದಿದ್ದರು. ಪತ್ರ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಮತ್ತು ಆಡಳಿತ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶದ ಕಾರಣ ನೀಡಿ ವಿವಿಯ ರಿಜಿಸ್ಟ್ರರ್ ವಿದ್ಯಾರ್ಥಿಗಳನ್ನು ಉಚ್ಛಾಟಿಸಿದ್ದಾರೆ.
ಆದರೆ ಉಚ್ಛಾಟಿತ ವಿದ್ಯಾರ್ಥಿಗಳು ರಿಜಿಸ್ಟ್ರರ್ ಆರೋಪವನ್ನು ನಿರಾಕರಿಸಿದೆ. ಮಹಾತ್ಮಗಾಂಧೀ ಹೆಸರಿನಲ್ಲಿ ವಿಶ್ವವಿದ್ಯಾಲಯವನ್ನು ಕೇಸರೀಕರಣಗೊಳಿಸಲಾಗುತ್ತಿದೆ. ಭಿನ್ನ ದನಿಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಆರ್ ಎಸ್ಎಸ್ ಕಾರ್ಯಕರ್ತರಿಗೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗುತ್ತಿದೆ. ಆರ್ ಎಸ್ಎಸ್ ಶಾಖೆ ನಡೆಸಲು ಅನುಮತಿ ನೀಡಲಾಗಿದೆ. ಆದರೆ ಬಿಎಸ್ ಪಿ ಸಂಸ್ಪಾಪಕ ಕಾನ್ಶಿರಾಮ್ ಅವರ ಮಹಾ ಪರಿನಿರ್ವಾಣ ದಿವಸ್ ಆಚರಿಸಲು ನಮಗೆ ಅವಕಾಶ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ವಿದ್ಯಾರ್ಥಿ ಮುಖಂಡ ಚಂದನ್ ಸರೋಜ ಪತ್ರಿಕಾ ಹೇಳಿಕೆ ನೀಡಿದ್ದು, ಇತ್ತೀಚೆಗೆ 50 ಮಂದಿ ಗಣ್ಯರ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಿದ್ದನ್ನು ಪ್ರತಿಭಟಿಸಿ ವಿದ್ಯಾರ್ಥಿಗಳೆಲ್ಲರೂ ಸೇರಿ ಪ್ರಧಾನಿಗೆ ಬಹಿರಂಗ ಪತ್ರ ಬರೆದಿದ್ದೇವೆ. ಪ್ರತಿಭಟನೆ ನಡೆಸಲು ಮುಂದಾಗಿದ್ದೆವು. ಆದರೆ ವಿಶ್ವವಿದ್ಯಾಲಯ ಹೆಚ್ಚು ಮಂದಿ ಪೊಲೀಸರನ್ನು ನಿಯೋಜಿಸಿ ಪ್ರತಿಭಟನೆಗೆ ಅವಕಾಶ ನೀಡಲಿಲ್ಲ.
ಗಾಂಧಿ ಹಾಲ್ ಗೆ ಹೋಗಲು ಪ್ರಯತ್ನಿಸಿದೆವು. ಪೊಲೀಸರು ವಿದ್ಯಾರ್ಥಿಗಳನ್ನು ತಡೆದರು. ಹಾಗಾಗಿ ಗಾಂಧಿ ಹಾಲ್ ಗೇಟ್ ಬಳಿಯೇ ಧರಣಿ ಕುಳಿತು ಘೋಷಣೆ ಕೂಗಿದೆವು ಎಂದು ಹೇಳಿದ್ದಾರೆ.
ವಿವಿ ಬಿಡುಗಡೆ ಮಾಡಿರುವ ಉಚ್ಛಾಟಿತ ಪತ್ರದಲ್ಲಿ ಈ ಘಟನೆಯ ಕುರಿತು ಯಾವುದೇ ಮಾಹಿತಿ ಇಲ್ಲ. ವಿದ್ಯಾರ್ಥಿಗಳ ದನಿ ಅಡಗಿಸಲು ಉಚ್ಛಾಟನೆ ಮಾಡಲಾಗಿದೆ ಎಂದು ಎಐಎಸ್ಎ ವಿದ್ಯಾರ್ಥಿ ಸಂಘಟನೆ ಟೀಕಿಸಿದೆ.