ಎಂಟರ್ ಪ್ರೈಸಸ್ ಎಲೆಕ್ಟ್ರಿಕಲ್ ಶಾಪ್ ನಲ್ಲಿ ಉಡ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು….
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮತ್ತಿಘಟ್ಟದಲ್ಲಿ ಉಡವೊಂದು ಕಾಣಿಸಿಕೊಂಡು ಕೆಲ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು.. ಮತ್ತಿಘಟ್ಟದ ಶ್ರೀವೀರಭದ್ರಸ್ವಾಮಿ ಎಂಟರ್ ಪ್ರೈಸಸ್ ಎಲೆಕ್ಟ್ರಿಕಲ್ ಶಾಪ್ ನಲ್ಲಿ ಈ ಉಡ ಕಾಣಿಸಿಕೊಂಡಿದೆ.
ಶಾಪ್ ಮಾಲೀಕ ಚನ್ನೇಗೌಡ ಬೆಳಗ್ಗೆ ಬಂದು ಅಂಗಡಿ ಬಾಗಿಲು ತೆರೆದಾಗ ಉಡಕಂಡು ಗಾಬರಿಗೊಂಡಿದ್ದಾರೆ. ಜೋರಾಗಿ ಉಸಿರಾಡುತಿದ್ದ ಉಡ ಹೊರಗೆ ಹೋಗಲು ಪ್ರಯತ್ನಿಸುತಿತ್ತು. ಆದರೆ ಉಡ ಕಂಡ ಸುದ್ದಿ ತಿಳಿದು ಜನರು ಜಮಾಯಿಸಿದರಿಂದ ಗಾಬರಿಗೊಂಡ ಉಡ ಅಂಗಡಿಯಿಂದ ಹೊರಕ್ಕೆ ಬಂದಿಲ್ಲ…
ಇದರಿಂದಾಗಿ ಇನ್ನಷ್ಟು ಗಾಬರಿಗೊಂಡ ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ಚನ್ನೇಗೌಡ ತನ್ನ ಸ್ನೇಹಿತ ಡಾಬಾ ರಮೇಶ್ ಗೆ ಕರೆಮಾಡಿ ಉಡವನ್ನು ಹಿಡಿಯುವಂತೆ ಕೇಳಿಕೊಂಡಿದ್ದಾರೆ. ಹಾವನ್ನು ಹಿಡಿದಿರುವ ಅನುಭವ ಇರುವ ಡಾಬಾ ರಮೇಶ್ ಸರಾಗವಾಗಿ ಗೋಣಿಚೀಲದ ಮೂಲಕ ಹಿಡಿದಿದ್ದಾರೆ. ಕಾರ್ಯಾಚರಣೆ ವೇಳೆ ಉಡದ ಬಾಯಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ರಕ್ತ ವಸರಿದೆ. ಬಳಿಕ ಹಿಡಿದ ಉಡವನ್ನು ಸುರಕ್ಷಿತವಾಗಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಗ್ರಾಮಸ್ಥರ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತಿಘಟ್ಟ ಅರಣ್ಯ ಪ್ರದೇಶದಿಂದ ಉಡ ಬಂದಿರುವ ಸಾಧ್ಯತೆ ಹೆಚ್ಚಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ..