ಗಣಪತಿ ಕೂರಿಸಿ ಖರ್ಚು ಮಾಡುವ ಹಣವನ್ನ ಸಂತ್ರಸ್ತರಿಗಾಗಿ ಮೀಸಲಿಟ್ಟ ಯುವಕರು…
ನೆರೆ ಬಂದು ಸಾವಿರಾರು ಮಂದಿ ಬೀದಿ ಪಾಲಾಗಿದ್ದಾರೆ. ಸಂತ್ರಸ್ತರ ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕಾದ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಆದರೆ ಈ ಗ್ರಾಮದ ಯುವಕರು ಮಾತ್ರ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಿ ತಾವು ಗಣಪತಿ ಕೂರಿಸಿ ಖರ್ಚು ಮಾಡುವ ಹಣವನ್ನ ಸಂಪೂರ್ಣವಾಗಿ ಸಂತ್ರಸ್ತರಿಗಾಗಿ ಮೀಸಲಿಟ್ಟಿದ್ದಾರೆ. ಈ ಹಣವನ್ನ ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ ನೀಡುವ ಮೂಲಕ ಸಂತ್ರಸ್ತರಿಗೆ ತಮ್ಮ ಕೈಯಲ್ಲಾದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಹಾಸನ ಜಿಲ್ಲೆ ಶಾಂತಿ ಗ್ರಾಮ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಯುವಕರು ಗಣೇಶ ಚತುರ್ಥಿಯ ಅಂಗವಾಗಿ ಗಣಪತಿಯನ್ನು ಪ್ರತಿಷ್ಠಾಪಿಸಿ ಸಾವಿರಾರು ರೂಪಾಯಿ ಖರ್ಚು ಮಾಡಿ ಹತ್ತು ದಿನಗಳ ಕಾಲ ಪೂಜಿಸುತ್ತಿದ್ದರು. ಆದ್ರೆ ಈಗ ಒಂದು ದಿನ ಮಾತ್ರ ಗಣಪತಿಯನ್ನ ಪ್ರತಿಷ್ಠಾಪಿಸಿ ಹಣವನ್ನ ಸಂಗ್ರಹಿಸಿ ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ ನೀಡಿದ್ದಾರೆ. ಸುಮಾರು 75 ಸಾವಿರ ರೂಪಾಯಿ ಹಣವನ್ನ ಸಂಗ್ರಹಿಸಿ ಸಚಿವ ಸಿಟಿ,ರವಿಯವರ ಚೆಕ್ ಹಸ್ತಾಂತರಿಸಿ ಜಿಲ್ಲಾಧಿಕಾರಿ ಮೂಲಕ ಸಿಎಂ ನೆರೆ ಪರಿಹಾರ ನಿಧಿಗೆ ಹಣ ನೀಡಿದರು.
ಗಣಪತಿ ಗೆಳೆಯರ ಬಳಗ ಎಂಬ ಸಂಘವನ್ನ ನಿರ್ಮಿಸಿಕೊಂಡು ಗ್ರಾಮದಲ್ಲಿ ಪ್ರತೀವರ್ಷ ಗಣಪತಿ ಪ್ರತಿಷ್ಠಾಪಿಸುತ್ತಿದ್ದರು. ಆದ್ರೆ ಅಂತೆಯೇ ಈ ಬಾರಿ ಉತ್ತರ ಕರ್ನಾಟಕ ಮತ್ತು ಕೊಡಗು ಜಿಲ್ಲೆಯಲ್ಲಿ ಬಾರೀ ನೆರೆ ಉಂಟಾದ ಪರಿಣಾಮ ಎಲ್ಲರೂ ಮನೆಮಠ ಆಸ್ತಿಪಾಸ್ತಿ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಆದ್ರೆ ಈ ಯುವಕರು ಗಣಪತಿ ಪ್ರತಿಷ್ಠಾಪಿಸಿ ಖರ್ಚು ಮಾಡುವ ಹಣವನ್ನ ಈಗ ಸಿಎಂ ನೆರೆ ನಿಧಿಗೆ ನೀಡುವ ಮೂಲಕ ನೊಂದ ಹೃದಯಗಳಿಗೆ ಸಹಾಯದ ನೆರವು ನೀಡಿದ್ದಾರೆ.
ಮನಸ್ಸಿದ್ದರೆ ಮಾರ್ಗ ಎಂಬಂತೆ ಈ ಯುವಕರು ಉತ್ತಮ ಕಾರ್ಯ ಮಾಡಿದ್ದಾರೆ. ಕೆಲವರು ಎಷ್ಟೇ ಹಣವಿದ್ದರೂ ಏನನ್ನೂ ಸಹಾಯ ಮಾಡೊಲ್ಲಾ ಆದ್ರೆ ಕೆಲವರಿಗೆ ಹಣವಿದ್ದರೆ ಸಹಾಯ ಮಾಡುವ ಮನಸ್ಸಿರಬೇಕು. ಆದ್ರೆ ಈ ಯುವಕರು ತಮ್ಮ ಗ್ರಾಮದಲ್ಲಿ ಎಲ್ಲರಿಂದಲೂ ಚಂದಾ ಎತ್ತಿ ನೆರೆ ಪರಿಹಾರ ನಿಧಿಗೆ ಹಣ ನೀಡುವ ಮೂಲಕ ಎಲ್ಲಾ ಯುವಕರಿಗೆ ಮಾದರಿಯಾಗಿದ್ದಾರೆ.