ನಾಪತ್ತೆಯಾಗಿದ್ದ ಅಮಾಯಕ ಬಾಲಕಿ ಅಪ್ರಾಪ್ತ ಪ್ರೇಮಿಗಳ ಕಿಚ್ಚಿಗೆ ಬಲಿ…!
ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿಯೋರ್ವಳು ಅಸ್ಥಿಪಂಜರದ ಸ್ಥಿತಿಯಲ್ಲಿ ಸಿಕ್ಕ ಘಟನೆ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಹಾವನೂರು ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಐದು ಶ್ವೇತಾ ಪೂಜಾರಿ ಎಂದು ಗುರುತಿಸಲಾಗಿದೆ. ಬಾಲಕಿಯ ಕೊಲೆಗೆ ಅಪ್ರಾಪ್ತರ ಪ್ರೇಮ ಪ್ರಕರಣವೇ ಮೂಲ ಕಾರಣವೆಂದು ಆರೋಪಿಸಲಾಗಿದೆ. ಘಟನೆಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪ್ರಾಪ್ತರ ಲವ್ ವಿಷಯ ಓರ್ವ ಅಮಾಯಕಿ ಬಾಲಕಿಯನ್ನು ಬಲಿತೆಗೆದುಕೊಂಡ ಪ್ರಸಂಗ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ನಮ್ಮ ಹುಡುಗಿಯ ತಂಟೆಗೆ ಬಂದರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದೇ, ಮತ್ತೊಬ್ಬ ಬಾಲಕಿಯನ್ನು ಬಲಿತೆಗೆದುಕೊಳ್ಳುವಂತೆ ಮಾಡಿದೆ. ಅಫಜಲಪುರ ತಾಲೂಕಿನ ಹಾವನೂರು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಬಾಲಕಿಯನ್ನು ಐದು ವರ್ಷದ ಶ್ವೇತಾ ಎಂದು ಗುರುತಿಸಲಾಗಿದೆ. ಡಿಸೆಂಬರ್ 5 ರಂದು ನಾಪತ್ತೆಯಾಗಿದ್ದ ಶ್ವೇತಾ ಇಂದು ಗ್ರಾಮದ ಹಳ್ಳದಲ್ಲಿ ತಲೆಬುರುಡೆ, ತುಂಡಾದ ಮೂಳೆಯ ರೂಪದಲ್ಲಿ ಪತ್ತೆಯಾಗಿದ್ದಾಳೆ. ಶ್ವೇತಾಳ ಸಾವಿಗೆ ಆಕೆಯ ಸಹೋದರಿ ಸಂಬಂಧಿಯ ಲವ್ ಮ್ಯಾಟರ್ ಕಾರಣ ಎಂಬ ಮಾತು ಕೇಳಿಬಂದಿದೆ.
ಶ್ವೇತಾಳ ತಂದೆ ನಿಂಗಪ್ಪನ ಅಣ್ಣನ ಮಗಳನ್ನು ಅದೇ ಗ್ರಾಮದ ಮುಕುಂದಪ್ಪ ಎನ್ನುವಾತ ಪ್ರೀತಿಸಿದ್ದ ಎನ್ನಲಾಗಿದೆ. ಅವರಿಬ್ಬರ ಪ್ರೀತಿ ವಿಷಯದ ತಿಳಿದ ನಿಂಗಪ್ಪ, ಮುಂಕುಂದಪ್ಪನಿಗೆ ಎಚ್ಚರಿಕೆ ನೀಡಿದ್ದ. ನಮ್ಮ ಹುಡುಗಿಯ ತಂಟೆಗೆ ಬಂದರೆ ಸರಿಯಿರುವುದಿಲ್ಲ ಎಂದು ತಾಕೀತು ಮಾಡಿದ್ದ. ಇದರಿಂದ ಕುಪಿತಗೊಂಡಿದ್ದ ಮುಕುಂದಪ್ಪ, ನೀನು ಕಣ್ಣೀರು ಹಾಕ್ತಿಯಾ, ನಿನಗೆ ಬೇಕಾದ ಅತ್ಯಮೂಲ್ಯ ವಸ್ತು ಕಳಕೋತಿಯಾ ಎಂದು ಆವಾಜ್ ಹಾಕಿದ್ದ ಎನ್ನಲಾಗಿದೆ. ಮುಕುಂದಪ್ಪ ಎಚ್ಚರಿಕೆ ನೀಡಿದ ದಿನದಂದೇ ಸಂಜೆ ಶ್ವೇತ ನಾಪತ್ತೆಯಾಗಿದ್ದಳು. ಇಂದು ಶ್ವೇತಾಳ ತಲೆಬುರುಡೆ, ಮೂಳೆಗಳು ಸಿಕ್ಕಿವೆ. ಶ್ವೇತಾಳ ಸಾವಿಗೆ ಮುಕುಂದಪ್ಪನೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಶ್ವೇತಾಳ ತಂದೆ ನಿಂಗಪ್ಪ ಪೂಜಾರಿ ಆಗ್ರಹಿಸಿದ್ದಾರೆ.
ನಾಪತ್ತೆಯಾದ ಬಾಲಕಿಯ ತಲೆಬುರುಡೆ, ಮೂಳೆಗಳು ಸಿಕ್ಕಿದ್ದರಿಂದ ನಿಧಿಗಾಗಿ ಬಲಿಕೊಟ್ಟಿರಬಹುದೆಂದು ಶಂಕಿಸಲಾಗಿತ್ತು. ಆದರೆ ಪ್ರಕರಣಕ್ಕೆ ಲವ್ ಟ್ವಿಸ್ಟ್ ಸಿಕ್ಕಿದ್ದು, ಘಟನೆ ಬಗ್ಗೆ ಪೋಷಕರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪೋಷಕರು ನೀಡಿದ ದೂರಿನ ಮೇರೆಗೆ ಮುಕುಂದಪ್ಪ, ಹಯ್ಯಾಳಿ ಸೇರಿ ಏಳು ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಗಾಣಗಾಪುರ ಪೊಲೀಸರು, ತನಿಖೆ ಆರಂಭಿಸಿದ್ದಾರೆ.