ನಿರ್ಭಯಾ ಪ್ರಕರಣದ ಅಪರಾಧಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಜಾ….
ಕ್ಷಮಾಧಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಡೆ ಪ್ರಶ್ನಿಸಿ ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಆರ್. ಭಾನುಮತಿ, ಎ.ಎಸ್.ಬೋಪಣ್ಣ ಮತ್ತು ಅಶೋಕ್ ಭೂಷಣ್ ಒಳಗೊಂಡ ತ್ರಿಸದಸ್ಯ ಪೀಠವು ಬುಧವಾರ ಬೆಳಗ್ಗೆ 10.40ರ ಸುಮಾರಿಗೆ ಅಪರಾಧಿ ಮುಕೇಶ್ ಸಿಂಗ್ ಅರ್ಜಿ ವಜಾಗೊಳಿಸಿತು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಅಪರಾಧಿ ಮುಕೇಶ್ ಸಿಂಗ್ ಕ್ಷಮಾಧಾನ ಅರ್ಜಿ ಸಲ್ಲಿಸಿದ್ದನು. ಆದರೆ, ರಾಷ್ಟ್ರಪತಿ ಕ್ಷಮಾಧಾನ ಅರ್ಜಿಯನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಮುಕೇಶ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ. ಮುಕೇಶ್ ಪರ ವಕೀಲ ವಾದ ಮಂಡಿಸಿ, ಸರ್ಕಾರ ರಾಷ್ಟ್ರಪತಿಗಳ ಮುಂದೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿಲ್ಲ ಎಂದಿದ್ದರು.
ಇಷ್ಟೇ ಅಲ್ಲದೆ ಜೈಲಿನಲ್ಲಿರುವಾಗ ಸಾಕಷ್ಟು ಸಂಕಟ ಮತ್ತು ಅವಮಾನವನ್ನು ಅನುಭವಿಸಿದ್ದಾನೆ. ಮುಕೇಶ್ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಅಲ್ಲದೆ, ಆತನನ್ನು ಒಂಟಿಯಾಗಿ ಜೈಲಿನ ಕೋಣೆಯಲ್ಲಿರಿಸಿ ಹಿಂಸಿಸಲಾಗಿದೆ ಎಂದು ಮಕೇಶ್ ಪರ ವಕೀಲರು ವಾದ ಮಂಡಿಸಿದ್ದರು.
ಆದರೆ, ಜೈಲಿನಲ್ಲಿನ ಬಳಲಿಕೆ ಆಧಾರವನ್ನು ಇಟ್ಟುಕೊಂಡು ರಾಷ್ಟ್ರಪತಿಗಳು ತಿರಸ್ಕರಿಸಿದ ಕ್ಷಮಾಧಾನ ಅರ್ಜಿಯನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಹೇಳಿ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ.