ಪಿಎಂ ಕೇರ್ಸ್ ಆರ್ಟಿಐ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ: ಪ್ರಧಾನಮಂತ್ರಿ ಕಚೇರಿ
ಪಿಎಂ ಕೇರ್ಸ್ ನಿಧಿಯ ರಚನೆ ಮತ್ತು ಕಾರ್ಯಾಚರಣೆಯ ವಿವರಗಳನ್ನು ಬಹಿರಂಗಪಡಿಸಲು ಮಾಹಿತಿ ಕೇಳಿ ಸಲ್ಲಿಸಿದ್ದ ಆರ್ಟಿಐ ಮನವಿಗೆ ಪ್ರಧಾನಮಂತ್ರಿ ಕಚೇರಿ (ಪಿಎಂಒ) ಪ್ರತಿಕ್ರಿಯೆ ನೀಡಿದೆ. ಈ ನಿಧಿಯು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) 2005 ರ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಪಿಎಂಒ ಹೇಳಿದ್ದು, ಮಾಹಿತಿ ನೀಡಲು ನಿರಾಕರಿಸಿದೆ.
ಕೊರೊನಾ ಸೋಂಕು ಮತ್ತು ಇತರ ರೀತಿಯ ತುರ್ತು ಸಂದರ್ಭಗಳಲ್ಲಿ ದೇಣಿಗೆ ಸ್ವೀಕರಿಸಲು ಮತ್ತು ಪರಿಹಾರವನ್ನು ಒದಗಿಸಲು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ (PM CARES) ನಿಧಿಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 28 ರಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಿಧಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ ನಂತರ, ಹರ್ಷ ಕಂದುಕುರಿ ಅವರು ಏಪ್ರಿಲ್ 1 ರಂದು ಆರ್ಟಿಐ ಅರ್ಜಿಯನ್ನು ಸಲ್ಲಿಸಿದ್ದರು. ನಿಧಿಯ ರಚನೆ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ಟ್ರಸ್ಟ್ ಡೀಡ್, ಸರ್ಕಾರಿ ಆದೇಶಗಳು, ಅಧಿಸೂಚನೆಗಳು ಮತ್ತು ಸುತ್ತೋಲೆಗಳನ್ನು ಒದಗಿಸುವಂತೆ ಪಿಎಂಒಗೆ ಮನವಿ ಸಲ್ಲಿಸಿದ್ದರು.
“ನಾವು ಈಗಾಗಲೇ ಪ್ರಧಾನ ಮಂತ್ರಿಯ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್ಆರ್ಎಫ್) ಹೊಂದಿರುವಾಗ, ಮತ್ತೊಂದು ನಿಧಿಯನ್ನು ಹೊಂದಿರುವುದು ನನಗೆ ಅರ್ಥವಾಗಲಿಲ್ಲ. ಟ್ರಸ್ಟ್ನ ಸಂಯೋಜನೆ ಮತ್ತು ಉದ್ದೇಶಗಳ ಬಗ್ಗೆ ನನಗೆ ಕುತೂಹಲವಿತ್ತು. ನಾನು ಟ್ರಸ್ಟ್ ಡೀಡ್ ಓದಲು ಬಯಸಿದ್ದೇನೆ ”ಎಂದು ಬೆಂಗಳೂರಿನ ಅಜೀಮ್ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಕಾನೂನು ವಿದ್ಯಾರ್ಥಿಯಾಗಿರುವ ಕಂದುಕುರಿ ಹೇಳುತ್ತಾರೆ.
30 ದಿನಗಳಾದರೂ ಪಿಎಂಒ ಪ್ರತಿಕ್ರಿಯಿಸಿರಲಿಲ್ಲ. ಕೊನೆಗೆ ಮೇ 29ರಂದು ಪ್ರತಿಕ್ರಿಯೆ ಸಿಕ್ಕಿದೆ.
“ಪಿಎಂ ಕೇರ್ಸ್ ನಿಧಿಯು 2005 ರ ಆರ್ಟಿಐ ಕಾಯ್ದೆಯ ಸೆಕಾನ್ 2 (ಎಚ್) ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಪ್ರಾಧಿಕಾರವಲ್ಲ. ಹಾಗಿದ್ದರೂ, ಪಿಎಂ ಕೇರ್ಸ್ ಫಂಡ್ಗೆ ಸಂಬಂಧಿಸಿದ ಮಾಹಿತಿಯನ್ನು ವೆಬ್ಸೈಟ್ pmcares.gov.in ವೆಬ್ಸೈಟ್ನಲ್ಲಿ ನೋಡಬಹುದು” ಎಂದು ಪಿಎಂಒ ಉತ್ತರಿಸಿದೆ.
ಕಾಯಿದೆಯ ಸಂಬಂಧಿತ ವಿಭಾಗವು “ಸಾರ್ವಜನಿಕ ಪ್ರಾಧಿಕಾರ”ದ – (ಎ) ಸಂವಿಧಾನದ ಮೂಲಕ ಅಥವಾ ಅಡಿಯಲ್ಲಿ ವ್ಯಾಖ್ಯಾನಿಸುತ್ತದೆ; (ಬಿ) ಸಂಸತ್ತು ಮಾಡಿದ ಯಾವುದೇ ಕಾನೂನಿನಿಂದ; (ಸಿ) ರಾಜ್ಯ ಶಾಸಕಾಂಗವು ಮಾಡಿದ ಯಾವುದೇ ಕಾನೂನಿನಿಂದ; (ಡಿ) ಸೂಕ್ತವಾದ ಸರ್ಕಾರವು ನೀಡಿದ ಅಧಿಸೂಚನೆ ಅಥವಾ ಆದೇಶದ ಮೂಲಕ ಸರ್ಕಾರವು ಒದಗಿಸುವ ನಿಧಿಯಿಂದ ನೇರವಾಗಿ ಅಥವಾ ಪರೋಕ್ಷವಾಗಿ ಗಣನೀಯವಾಗಿ ಹಣಕಾಸು ಒದಗಿಸುತ್ತದೆ.
ಕಂದುಕುರಿ ಈಗ ಮತ್ತಷ್ಟು ಮೇಲ್ಮನವಿ ಸಲ್ಲಿಸಲು ಯೋಜಿಸಿದ್ದಾರೆ. “ಟ್ರಸ್ಟ್ನ ಹೆಸರು, ನಿಯಂತ್ರಣ, ಲಾಂಚನ ಬಳಕೆ, ಸರ್ಕಾರಿ ಡೊಮೇನ್ ಹೆಸರು – ಈ ಎಲ್ಲವೂ ಪಿಎಂ ಕೇರ್ಸ್ ನಿಧಿಯು ಸಾರ್ವಜನಿಕ ಪ್ರಾಧಿಕಾರ ಎಂದು ಸೂಚಿಸುತ್ತದೆ. ಅಲ್ಲದೆ, ಪ್ರಧಾನ ಮಂತ್ರಿಯವರು ಟ್ರಸ್ಟ್ನ ಎಕ್ಸ್-ಆಫಿಸಿಯೊ ಅಧ್ಯಕ್ಷರಾಗಿದ್ದರೆ, ಮೂರು ಕ್ಯಾಬಿನೆಟ್ ಮಂತ್ರಿಗಳು ಎಕ್ಸ್-ಆಫಿಸಿಯೊ ಟ್ರಸ್ಟಿಗಳಾಗಿದ್ದಾರೆ. ಟ್ರಸ್ಟ್ನ ಸಂಯೋಜನೆಯು, ಸರ್ಕಾರವು ಟ್ರಸ್ಟ್ನ ಮೇಲೆ ಸಾಕಷ್ಟು ನಿಯಂತ್ರಣವನ್ನು ಹೊಂದಿದೆ. ಹಾಗಾಗಿ ಅದನ್ನು ಸಾರ್ವಜನಿಕ ಪ್ರಾಧಿಕಾರವಾಗಿದೆ ಎಂದು ತೋರಿಸಲು ಇಷ್ಟು ಸಾಕಲ್ಲವೇ” ಎಂದು ಅವರು ಹೇಳಿದರು.
ಈಗಾಗಲೇ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಒರಿಹಾರ ನಿಧಿ ಜಾರಿಯಲ್ಲಿರುವಾಗ, ಕೊರೊನಾ ಸೋಂಕಿನ ನಿಯಂತ್ರಣದ ಸಂದರ್ಭದ ಪರಿಹಾರಕ್ಕಾಗಿ ಮತ್ತೊಂದು ಪಿಎಂ ಕೇರ್ಸ್ನ ಅಗತ್ಯವೇನಿದೆ ಎಂದು ದೇಶಾದ್ಯಂತ ವಿರೋಧ ಮತ್ತು ಪ್ರಶ್ನೆಗಳು ವ್ಯಕ್ತವಾಗಿದ್ದವು. ಅದರ ನಡುವೆಯೂ ಸರ್ಕಾರ ಈ ನಿಧಿಯನ್ನು ಅರಂಭಿಸಿತ್ತು. ಪಿಎಂ ಕೇರ್ಸ್ ಆರಂಭವಾದಾಗಿನಿಂದ ಆ ನಿಧಿಗೆ ಬಂದಿರುವ ಧನ ಸಹಾಯದ ಮೊತ್ತ ಎಷ್ಟು ಎಂಬುದನ್ನು ನಿಖವಾಗಿ ಇನ್ನೂ ಸರ್ಕಾರ ಬಹಿರಂಗ ಪಡಿಸಿಲ್ಲ.
ಅಲ್ಲದೆ, ಪಿಎಂಎನ್ಆರ್ಎಫ್ (ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ) ಆರ್ಟಿಐ ಕಾಯ್ದೆಗೆ ಒಳಪಟ್ಟಿದೆಯೇ ಎಂಬ ಬಗ್ಗೆಯೂ ಅಸ್ಪಷ್ಟತೆ ಇದೆ. 2008 ರಲ್ಲಿ ಮಾಹಿತಿಯನ್ನು ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗವು ನಿರ್ದೇಶನ ನೀಡಿದ್ದರೆ, ದೆಹಲಿ ಹೈಕೋರ್ಟ್ನ ವಿಭಾಗೀಯ ಪೀಠವು ಈ ಕಾಯಿದೆಯಡಿ ಪಿಎಂಎನ್ಆರ್ಎಫ್ ಸಾರ್ವಜನಿಕ ಪ್ರಾಧಿಕಾರವೇ ಎಂಬ ಪ್ರಶ್ನೆಗೆ ದ್ವಂದ್ವ ವ್ಯಕ್ತಪಡಿಸಿತ್ತು.