ವಾಣಿಜ್ಯ ನಗರಿಯಲ್ಲಿ ಭಾವೈಕ್ಯತೆಯ ಗಣೇಶೋತ್ಸವ-ಮೊಹರಂ ಹಬ್ಬ..
ವಾಣಿಜ್ಯ ನಗರ ಹುಬ್ಬಳ್ಳಿಯ ಬಮ್ಮಾಪುರ ಓಣಿಯಲ್ಲಿ ಭಾವೈಕ್ಯತೆಯಿಂದ ಗಣೇಶೋತ್ಸವ ಮತ್ತು ಮೊಹರಂ ಹಬ್ಬವನ್ನು ಆಚರಿಸಲಾಗುತ್ತಿದೆ.
ವಿಘ್ನೇಶ್ವರ ಉತ್ಸವ ಸಮಿತಿ ಪ್ರತಿವರ್ಷದಂತೆ ಸಾರ್ವಜನಿಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದೆ. ಹನ್ನೊಂದು ದಿನಗಳ ಕಾಲ ವಿಘ್ನ ನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.ಮೊಹರಂ ಹಬ್ಬ ಕೂಡ ಏಕಕಾಲಕ್ಕೆ ಬಂದಿರುವುದರಿಂದ ಮುಸ್ಲೀಮರು ಪಂಜಾಗಳನ್ನು ಇಟ್ಟಿದ್ದಾರೆ.
ಸೈಯ್ಯದ್ ಸಾದತ್ ಜಮಾತ್ನ ಸದಸ್ಯರು ಪಂಜಾಗಳನ್ನು ಇರಿಸಿ ಮುಸ್ಲೀಮ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದಾರೆ. ವಿಶೇಷವೆಂದರೆ ಗಣೇಶ ಮೂರ್ತಿ ಮತ್ತು ಪಂಜಾಗಳನ್ನು ಒಂದೇ ವೇದಿಕೆಯಲ್ಲಿ ಇರಿಸಲಾಗಿದೆ. ಮುಸ್ಲೀಮರು ಪಂಜಾಗಳಿಗೆ ಧೂಪ ಹಾಕಿ ಪ್ರಾರ್ಥಿಸುತ್ತಿದ್ದು ಪಕ್ಕದಲ್ಲಿರುವ ಗಣೇಶನಿಗೂ ಭಕ್ತಿಯಿಂದ ನಮಿಸುತ್ತಿದ್ದಾರೆ.
ಹಿಂದೂಗಳು ಗಣೇಶನನ್ನು ಆರಾಧಿಸುವುದರ ಜೊತೆಗೆ ಪಂಜಾಗಳಿಗೂ ಪೂಜೆ ಸಲ್ಲಿಸುತ್ತಿದ್ದಾರೆ. ಗಣೇಶ ಮತ್ತು ಪಂಜಾಗಳು ಅಕ್ಕಪಕ್ಕದಲ್ಲಿರುವುದು ಜನಾಕರ್ಷಣೆ ಮಾಡುತ್ತಿದೆ. ಗಣೇಶೋತ್ಸವ ಮತ್ತು ಮೊಹರಂ ಹಬ್ಬವನ್ನು ಹಿಂದೂ- ಮುಸ್ಲೀಮರು ಸೌಹಾರ್ಧತೆಯಿಂದ ಆಚರಿಸುತ್ತಿರುವುದು ಗಮನ ಸೆಳೆಯುತ್ತಿದೆ.