ವಿದ್ಯಾರ್ಥಿ ಮೇಲೆ ಹರಿದ ಶಾಲಾವಾಹನ : ಸ್ಥಳದಲ್ಲೇ ಮಗು ಸಾವು..!
ಚಾಲಕನ ಅಜಾಗರೂಕತೆಯಿಂದ ಶಾಲಾವಾಹನ ವಿದ್ಯಾರ್ಥಿ ಮೇಲೆ ಹರಿದು ಸ್ಥಳದಲ್ಲೇ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಕಮ್ಮಸಂದ್ರದಲ್ಲಿ ನಡೆದಿದೆ.
ಎಲ್ ಕೆ ಜಿ ವಿದ್ಯಾರ್ಥಿ ದೀಕ್ಷಿತ್ ಮೃತಪಟ್ಟ ವಿದ್ಯಾರ್ಥಿ. ಹೊಸೂರು ಮುಖ್ಯ ರಸ್ತೆ ಕಮ್ಮಸಂದ್ರ ಬಳಿಯಿರುವ ಸೆಂಟ್ ಪೀಟರ್ಸ್ ಇಂಗ್ಲಿಷ್ ಶಾಲೆಯ ವಾಹನದಿಂದ ಈ ಘಟನೆ ನಡೆದಿದೆ. ಶಾಲಾ ಬಸ್ಸಿನಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸಹಾಯಕರು ಇರಲಿಲ್ಲ. ಚಾಲಕನ ಅಜಾಗರೂಕತೆ ಅಪಘಾತಕ್ಕೆ ಕಾರಣವಾಗಿದ್ದು, ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ವಿದ್ಯಾರ್ಥಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.