ಕರ್ನಾಟಕದಲ್ಲಿ ಶನಿವಾರವೂ ಲಾಕ್ಡೌನ್; ಯಡಿಯೂರಪ್ಪ ಇಂಗಿತ!
ಕೊರೊನಾ ಸೋಂಕು ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆ.04ರ ವರೆಗೆ ಭಾನುವಾರದ ಲಾಕ್ಡೌನ್ ಘೋಷಿಸಿದೆ. ಇದರಿಂದಾಗಿ, ಜನರ ಚಟುವಟಿಕೆಗಳನ್ನು ಕ್ರಮೇಣ ನಿಯಂತ್ರಿಸಲು ಸಾಧ್ಯವಾಗಿದೆ. ಹಾಗಾಗಿ ಶನಿವಾರವೂ ಲಾಕ್ಡೌನ್ ಮಾಡಬಹುದಾ ಎಂಬ ವಿಚಾರವಾಗಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ನಿರಂತರ ಎರಡು ತಿಂಗಳ ಲಾಕ್ಡೌನ್ ಹೇರಿಕೆಯು ಸಡಿಲಗೊಳ್ಳುತ್ತಿದ್ದಂತೆ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಮತ್ತಷ್ಟು ನಿಯಂತ್ರಿಸಲು ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ನಿಯಮ ಜಾರಿಗೆ ತರಲಾಗಿದೆ. ಜೊತೆಗೆ, ಭಾನುವಾರ ಸಂಪೂರ್ಣ ಲಾಕ್ಡೌನ್ ಜಾರಿ ಮಾಡಲಾಗಿದೆ.
ಕಳೆದ ಭಾನುವಾರದ ಲಾಕ್ಡೌನ್ಗೆ ರಾಜ್ಯದ ಜನರು ಉತ್ತಮವಾಗಿ ಸ್ಪಂದಿಸಿದ್ದು, ಶನಿವಾರವೂ ಲಾಕ್ಡೌನ್ ಘೋಷಣೆ ಮಾಡಿದರೆ ಹೇಗೆ ಎಂದು ಸಚಿವರೊಂದಿಗಿನ ಸಭೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚರ್ಚಿಸಿದ್ದಾರೆ.
ಸಭೆಯಲ್ಲಿ ಡಾ.ಸಿ.ಎನ್.ಅಶ್ವತ್ನಾರಾಯಣ್, ಡಾ.ಕೆ.ಸುಧಾಕರ್ ಜತೆ ಲಾಕ್ಡೌನ್ ಜಾರಿ ಬಗ್ಗೆ ಸಿಎಂ ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ. “ಸದ್ಯ ಭಾನುವಾರ ಮಾತ್ರ ಸಂಪೂರ್ಣ ಲಾಕ್ಡೌನ್ ಆದೇಶ ಜಾರಿ ಮಾಡಿದ್ದೇವೆ. ರಾತ್ರಿ 8 ಘಂಟೆಯಿಂದ ಬೆಳಿಗ್ಗೆ 5 ಘಂಟೆಯವರೆಗೂ ಕರ್ಫ್ಯೂ ಜಾರಿಗೊಳಿಸಿದ್ದೇವೆ. ಇದಿಷ್ಟೇ ಸಾಕಾಗುವುದಿಲ್ಲ ಎನಿಸುತ್ತಿದೆ. ಹೀಗಾಗಿ, ಮುಂದಿನ ಮೂರು ವಾರಗಳ ಕಾಲ ಶನಿವಾರವು ಲಾಕ್ಡೌನ್ ವಿಸ್ತರಣೆ ಮಾಡಿದರೆ ಹೇಗೆ? ಎಂದು ಸಚಿವರನ್ನು ಸಿಎಂ ಪ್ರಶ್ನಿಸಿದ್ದಾರೆ.
ಈ ಕುರಿಂತೆ ಚಿಂತಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಲಾಗಿದ್ದು, ಸಚಿವರ ಅಭಿಪ್ರಾಯದ ಮೇಲೆ ಶನಿವಾರದ ಲಾಕ್ಡೌನ್ ಭವಿಷ್ಯ ನಿರ್ಧಾರವಾಗಲಿದೆ ಎನ್ನಲಾಗಿದೆ.