FACT CHECK | ಶಿವಸೇನೆ ಪಕ್ಷವನ್ನು ಇಬ್ಬಾಗ ಮಾಡಿದ ಬಿಜೆಪಿಯನ್ನು ಬೆಂಬಲಿಸಿ ಎಂದು ಹೇಳಿದ್ರಾ ಉದ್ಧವ್ ಠಾಕ್ರೆ?
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಧಾನಿ ಮೋದಿ ಅವರನ್ನು ಹೊಗಳುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರಿಗೇ ಮತ ನೀಡಿ ಎಂದು ಬಿಜೆಪಿ ವಿರೋಧಿಯಾದ ಉದ್ಧವ್ ಠಾಕ್ರೆ ಅವರು ಹೇಳುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
View this post on Instagram
ಕಳೆದ ವಿಧಾನ ಸಭೆ ಚುನಾವಣೆ ನಂತರ ಮಹಾರಾಷ್ಟ್ರದಲ್ಲಿ ಬಹುವರ್ಷಗಳ ಬಿಜೆಪಿ ಮೈತ್ರಿಯಿಂದ ಹೊರಬಂದಿದ್ದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (NCP) ಮಹಾ ವಿಕಾಸ್ ಅಘಾಡಿ (MVA) ಹೆಸರಿನಲ್ಲಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ಆದರೆ ಶಿವಸೇನೆಯ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದ ಏಕನಾಥ್ ಶಿಂಧೆ ಈ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು, ರಾಜ್ಯದ ರಾಜಕೀಯ ಚಿತ್ರಣವನ್ನೇ ಬದಲಿಸಿದ್ದರು.
ತಮ್ಮ ಶಿವಸೇನೆ ಪಕ್ಷವನ್ನು ಇಬ್ಬಾಗ ಮಾಡಿದ ಬಿಜೆಪಿ ಮತ್ತು ಮೋದಿಯನ್ನು ಬೆಂಬಲಿಸಿ ಮತ ಹಾಕುವಂತೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆಯೇ ? ಇದು ನಿಜವೇ? ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯಂತೆ, ಕೀವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ನಡೆಸಿದಾಗ, 2014ರ ಉದ್ಧವ್ ಠಾಕ್ರೆ ಭಾಷಣದ ವಿಡಿಯೋ ಲಭ್ಯವಾಗಿದೆ. ಉದ್ಧವ್ ಠಾಕ್ರೆ ಅವರು 21 ಏಪ್ರಿಲ್ 2014 ರಂದು ಮಾಡಿದ ಭಾಷಣದ ತುಣುಕು ಎಂದು ತಿಳಿದುಬಂದಿದೆ.. ಮುಂಬೈನ BKC ಮೈದಾನದಲ್ಲಿ ನಡೆದ ಶಿವಸೇನೆ – ಬಿಜೆಪಿ ಸಮಾವೇಶದಲ್ಲಿ ಉದ್ಧವ್ ಠಾಕ್ರೆ ಭಾಷಣ ಮಾಡಿದ್ದ ವಿಡಿಯೋ ಎಂಬುದು ಸ್ಪಷ್ಟವಾಗಿದೆ.
ಯೂಟ್ಯೂಬ್ನಲ್ಲಿ ಲಭ್ಯವಾದ ಮೂಲ ವಿಡಿಯೋದಲ್ಲಿ ಉದ್ಧವ್ ಠಾಕ್ರೆ ಭಾಷಣ ತುಣುಕು ಮತ್ತು ವೈರಲ್ ಆಗಿರುವ ದೃಶ್ಯಗಳು ಒಂದೇ ರೀತಿ ಇರುವುದನ್ನು ನೋಡಬಹುದು. ಇದೀಗ ವೈರಲ್ ಆಗಿರುವ ಠಾಕ್ರೆ ಅವರ ಮಾತು ಈ ವಿಡಿಯೋದ 11:28 ನಿಮಿಷದ ಅವಧಿಯಿಂದ ಶುರುವಾಗುತ್ತದೆ.
ಮೊದಲ ಬಾರಿಗೆ ಮೋದಿ ಅವರು ಪ್ರಧಾನಿಯಾದ ಆ ಚುನಾವಣೆಯ ಪ್ರಚಾರ ವೇದಿಕೆಯಲ್ಲಿ ಮಾತನಾಡಿದ್ದ ಉದ್ಧವ್ ಠಾಕ್ರೆ, ‘ಈ ದೇಶದ ಮುಖ ಯಾರಾಗಬೇಕು? ನಿಮ್ಮನ್ನು ನೀವೇ ಕೇಳಿಕೊಳ್ಳಿ. ಮೋದಿ ಅವರನ್ನು ದೂರ ಇಟ್ಟರೆ ಬೇರೆ ಆಯ್ಕೆ ಯಾರಿದ್ದಾರೆ? ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿ ಅಭ್ಯರ್ಥಿಯಾಗಲು ಸೂಕ್ತ ವ್ಯಕ್ತಿ ಯಾರಿದ್ದಾರೆ? ಕಾಂಗ್ರೆಸ್ನಲ್ಲಿ ಯಾರೂ ಇಲ್ಲ. ಎಲ್ಲರೂ ಭ್ರಷ್ಟರು. ಹೀಗಾಗಿ, ನೀವು ಕೇವಲ ಪ್ರಧಾನಿ ಮೋದಿ ಅವರಿಗೆ ಮತ ನೀಡೋದಿಲ್ಲ, ನೀವು ಭವಿಷ್ಯಕ್ಕೆ ಮತ ಹಾಕಲಿದ್ದೀರಿ’ ಎಂದು ಉದ್ಧವ್ ಠಾಕ್ರೆ ಹೇಳುತ್ತಾರೆ.
ಈ ವಿಡಿಯೋದಲ್ಲಿ ಉದ್ದವ್ ಠಾಕ್ರೆ ಅವರು ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಜೊತೆಯಲ್ಲೇ ಬಿಜೆಪಿಯನ್ನು, ಪ್ರಧಾನಿ ಮೋದಿ ಅವರನ್ನು ಹೊಗಳುತ್ತಾರೆ. ‘ನೀವು ಮೋದಿ ಅವರಿಗೆ ಮತ ಹಾಕಿದರೆ, ಉತ್ತಮ ಭವಿಷ್ಯಕ್ಕೆ ಮತ ಹಾಕಿದಂತೆ’ ಎನ್ನುತ್ತಾರೆ.
ಒಟ್ಟಾರೆಯಾಗಿ ಹೇಳುವುದಾದರೆ, 2014ರಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಪ್ರಧಾನಿ ಮೋದಿ ಅವರನ್ನು ಕುರಿತಾಗಿ ಆಡಿದ್ದ ಮಾತುಗಳನ್ನು ಪ್ರಸ್ತುತ ಸಂದರ್ಭಕ್ಕೆ ಲಿಂಕ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ವಾಸ್ತವವಾಗಿ ಈಗ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಬಿಜೆಪಿ ವಿರೋಧಿ ಇಂಡಿಯಾ ಮೈತ್ರಿ ಕೂಟದಲ್ಲಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | 230 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧಿಸಿದೆಯೇ?