ರಾಹುಲ್ಗಾಂಧಿ ಮೇಲೆ ಹಲ್ಲೆ- ಪ್ರಜಾಪ್ರಭುತ್ವದ ಮೇಲಿನ ಗ್ಯಾಂಗ್ರೇಪ್: ಸಂಜಯ್ ರಾವತ್
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯ, ದೇಶದ ಪ್ರಜಾಪ್ರಭುತ್ವದ ಮೇಲಿನ ಗ್ಯಾಂಪ್ ರೇಪ್ ಇದ್ದಂತೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ರಾಹುಲ್ಗಾಂಧಿ ಒಂದು ರಾಷ್ಟ್ರೀಯ ಪಕ್ಷದ ಮುಖಂಡ. ಅಲ್ಲದೆ, ಮಾಜಿ ಪ್ರಧಾನಿಗಳಾದ ಇಂಧಿರಾ ಗಾಂಧಿ ಅವರ ಮೊಮ್ಮಗ, ರಾಜೀವ್ ಗಾಂಧಿ ಅವರ ಮಗ ಎಂಬುದನ್ನು ನಾವು ಮರೆಯಬಾದರು. ಅವರಿಬ್ಬರೂ ಈ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಅಂತಹ ಕುಟುಂಬದಿಂದ ಬಂದವರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯ ಖಂಡನೀಯ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ರಾಹುಲ್ಗಾಂಧಿ ಮತ್ತು ಪ್ರಿಯಾಂಕಗಾಂಧಿಯವರೊಂದಿಗೆ ಪೊಲೀಸರು ನಡೆದುಕೊಂಡ ಧೋರಣೆಯನ್ನು ದೇಶ ಎಂದಿಗೂ ಕ್ಷಮಿಸುವುದಿಲ್ಲ,ದೇಶದ ಪ್ರಜಾಪ್ರಭುತ್ವ ವಿರೋಧಿ ನಡೆಗಳನ್ನು ಪ್ರಶ್ನಿಸುತ್ತಿರುವ ರಾಹುಲ್ ಗಾಂಧಿ ಹಾಗೂ ಹಲವಾರು ನಾಯಕರ ವಿರುದ್ಧ ಇದೇ ರೀತಿಯ ವರ್ತನೆಯನ್ನು ದೇಶ ನೋಡುತ್ತಿದೆ. ಇದನ್ನು ದೇಶ ಪ್ರಜೆಗಳು ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ರಾಷ್ಟ್ರೀಯ ರಾಜಕೀಯ ಮುಖಂಡರು. ಕಾಂಗ್ರೆಸ್ ಜೊತೆಗೆ ನಮಗೆ ಭಿನ್ನಾಭಿಪ್ರಾಯವಿರಬಹುದು. ಆದರೆ, ಅವರೊಂದಿಗೆ ಪೊಲೀಸರು ವರ್ತಿಸಿದ ರೀತಿಯನ್ನು ಯಾರು ಕೂಡಾ ಬೆಂಬಲಿಸುವುದಿಲ್ಲ. ಅವರ ಕುತ್ತಿಗೆಯನ್ನು ಹಿಡಿದು ನೆಲಕ್ಕೆ ನೂಕಲಾಗಿದೆ. ಇದೊಂದು ರೀತಿಯಲ್ಲಿ ಪ್ರಜಾಪ್ರಭುತ್ವದ ಮೇಲಿನ ಗ್ಯಾಂಗ್ ರೇಪ್ ಎಂದು ಸಂಜಯ್ ರಾವತ್ ಕರೆದಿದ್ದಾರೆ.
ಇದನ್ನೂ ಓದಿ: ಖೈರ್ಲಾಂಜಿಯಿಂದ ಹತ್ರಾಸ್ವರೆಗೆ ದಲಿತರ ಮೇಲಿನ ಅತ್ಯಾಚಾರ ಮತ್ತು ದಮನದ ಕಥನ!