ಬಾಬರಿ ಮಸೀದಿ ದ್ವಂಸಗೊಳಿಸಲು ಯಾರೂ ಸಂಚು ಮಾಡಿಲ್ಲ ಎನ್ನಲು ಕೋರ್ಟ್‌ ಕೊಟ್ಟ 10 ಕಾರಣಗಳು!

ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ಅಡ್ವಾಣಿ ಸೇರಿದಂತೆ 32 ಆರೋಪಿಗಳನ್ನು ದೋಷಮುಕ್ತ ಎಂದು ಘೋಷಿಸಿ ಲಖನೌ ನ ಸಿಬಿಐ ಕೋರ್ಟಿನ ನ್ಯಾಯಾಧೀಶ ಎಸ್.ಕೆ.ಯಾದವ್ ಎಲ್ಲಾ ಆರೋಪಿಗಳ ಮೇಲಿನ ಆರೋಪವನ್ನು ಖುಲಾಸೆ ಮಾಡಿದ್ದಾರೆ.

ಏಕ್ ಧಕ್ಕಾ ಔರ್ ಧೋ-ಬಾಬ್ರಿ ಮಸ್ಜಿದ್ ಥೋಡ್ ದೋ ಎಂದು ಅದ್ವಾನಿಯಾದಿಯಾಗಿ ಎಲ್ಲಾ ಆರೋಪಿಗಳು ದೇಶಾದ್ಯಂತ ಪ್ರಚೋದನಾತ್ಮಕ ಭಾಷಣ ಮಾಡಿ ಮಸೀದಿಯನ್ನು ಬೀಳಿಸಲೆಂದೇ ಅಯೋಧ್ಯೆಗೆ ಕರಸೇವಕರನ್ನು ಕರೆತಂದದ್ದು ಜಗತ್ತಿಗೇ ಗೊತ್ತಿತ್ತು. ಹಾಗಿದ್ದರೂ ನ್ಯಾಯಾಧೀಶರು ಯಾವ ನ್ಯಾಯ-ನೀತಿ-ತರ್ಕ-ಸಾಕ್ಶ್ಯ-ಆಧಾರಗಳ ಮೇಲೆ ಇವರನ್ನೆಲ್ಲಾ ಬಿಡುಗಡೆ ಮಾಡಿದರು?

ನ್ಯಾಯಾಧೀಶ ಯಾದವ್ ಅವರ ತೀರ್ಪು 2300 ಪುಟಗಳಷ್ಟಿದೆ ಮತ್ತು ಹಿಂದಿಯಲ್ಲಿದೆ. ಆದರೆ, ನ್ಯಾಯಾಧೀಶ ಯಾದವ್ ಅವರು ತಮ್ಮ ಅಂತಿಮ ತೀರ್ಪಿಗೆ ಕೊಟ್ಟಿರುವ 10 ಪ್ರಮುಖ ಕಾರಣಗಳನ್ನು ದೆಹಲಿ ವಿಶ್ವವಿದ್ಯಾಲಯದ ಹಿಂದಿ ಪ್ರೊಫೆಸರ್ ಆಗಿರುವ ಅಪೂರ್ವಾನಂದ್ ಅವರು The Wire ಪತ್ರಿಕೆಗಾಗಿ ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.

ಅದರ ಕನ್ನಡಾನುವಾದ ಇಲ್ಲಿದೆ:

1. ಲಾಲ್ ಕೃಷ್ಣ ಅದ್ವಾನಿಯವರು ಬಾಬ್ರಿ ಮಸೀದಿ ನಾಶದ ಬಗ್ಗೆ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಅವರು ಈ ಅಪರಾಧದಲ್ಲಿ ಪಾಲುದಾರರಾಗಿರಲು ಸಾಧ್ಯವೇ ಇಲ್ಲ. ಹಾಗೂ ಅವರ ವ್ಯಕ್ತಪಡಿಸಿದ ದುಃಖದ ಬಗ್ಗೆ ಇತರ ಸಹ ಆರೋಪಿಗಳೂ ಕೂಡಾ ಯಾವುದೇ ಆಕ್ಷೇಪಣೆಯನ್ನು ವ್ಯಕ್ತಪಡಿಸಿಲ್ಲ. ॒(ಅಂದರೆ ಉಳಿದ ಆರೋಪಿಗಳೂ ಈ ದುಃಖದಲ್ಲಿ ಭಾಗಿಯಾಗಿದ್ದಾರೆಂಬ ತಾತ್ಪರ್ಯವಾಗುವುದರಿಂದ ಅವರುಗಳೂ ಕೂಡಾ ಅಪರಾಧದಲ್ಲಿ ಭಾಗಿಯಾಗಿರಲು ಸಾಧ್ಯವಿಲ್ಲ!)

2. ಆಗ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಅವರು ಅಯೋಧ್ಯೆಯಲ್ಲಿ ಯಥಾಸ್ಥಿತಿಯನ್ನು ಉಳಿಸಿಕೊಳ್ಳಲಾಗುವುದು ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದರಿಂದ ಅವರು ಈ ಅಪರಾಧದಲ್ಲಿ ಭಾಗಿಯಾಗಿರಲು ಸಾಧ್ಯವೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಸ್ಥಳದಲ್ಲಿ ಬೇರೆ ಸಮುದಾಯಗಳ ಧಾರ್ಮಿಕ ಭಾವನೆಗಳಿಗೆ ಭಂಗ ತರುವ ಯಾವ ಮಾತುಗಳನ್ನೂ ಆಡಿಲ್ಲ.

3. ಘಟನೆ ನಡೆದ ಸ್ಥಳದಲ್ಲಿ ಅಸಂಖ್ಯಾತ ಜನರು ಸೇರಿದ್ದರಿಂದ ಮತ್ತು ಅವರನ್ನು ಚದುರಿಸಲು ಪ್ರಯತ್ನಿಸಿದ್ದರೆ ಅಸಂಖ್ಯಾತ ಜನರು ಸಾವು-ನೋವುಗಳಿಗೆ ಗುರಿಯಾಗುವ ಸಾಧ್ಯತೆಯೂ ಇದ್ದಿದ್ದರಿಂದ ಜನರನ್ನು ನಿಯಂತ್ರಣ ಮಾಡದಿರುವುದಕ್ಕೆ ಯಾರನ್ನೂ ದೂರಲೂ ಸಾಧ್ಯವಿಲ್ಲ. ಅಲ್ಲದೆ ಮಹಿಳಾ ಕರಸೇವಕರು ರಾಸ್ತಾ ರೋಖೋ ಮಾಡುತ್ತಿದ್ದರಿಂದ ಹೆಚ್ಚುವರಿ ಪೊಲೀಸರು ಸ್ಥಳವನ್ನು ತಲುಪಲಾಗಲಿಲ್ಲ.

4. ಭದ್ರತಾ ವ್ಯವಸ್ಥೆಗಳು ಸೂಕ್ತವಾಗಿತ್ತೋ ಇಲ್ಲವೋ ಎಂಬುದನ್ನು ನಮಗೆ ಪತ್ರಕರ್ತರು ಹೇಳಬೇಕಿಲ್ಲ.ನಮಗೆ ಅದನ್ನು ತಿಳಿಸಬೇಕಿರುವವರು ಪೊಲೀಸ್ ಅಧಿಕಾರಿಗಳು.

5. ಆಡಳಿತ ವ್ಯವಸ್ಥೆಗೆ ಮತ್ತು ಪೊಲೀಸರಿಗೆ ಆ ಕಟ್ಟಡದ ಭದ್ರತೆಯನ್ನು ನೋಡಿಕೊಳ್ಳುವುದರ ಜೊತೆಗೆ ಇನ್ನೂ ಎಷ್ಟೋ ಬೇರೆ ಕೆಲಸಗಳಿದ್ದವು.

6. ವಿವಾದಿತ ಸ್ಥಳದಲ್ಲಿ ಇತರ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಅಥವಾ ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ಬರುವ ಯಾವ ಕೃತ್ಯಗಳೂ ಜರುಗಿಲ್ಲ. ಅಯೋಧ್ಯಾದ ಮುಸ್ಲಿಮರಿಗೆ ಕರಸೇವೆಯಿಂದ ಯಾವುದೇ ಭೀತಿಯುಂಟಾಗಿರಲಿಲ್ಲ. ಅದರ ಬಗ್ಗೆ ಅವರಿಗೆ ನಿರಾಸಕ್ತ ಭಾವನೆಯೇ ಇದ್ದಿತು. ಅಲ್ಲದೇ ಒಬ್ಬ ಹಿಂದೂ ಮಹಿಳೆಯು ಮುಸ್ಲಿಂ ಪುರುಷನನ್ನು ರಕ್ಷಿಸಿದ ವಿಷಯವು ದಾಖಲಾಗಿರುವುದರಿಂದ ಅಯೋಧ್ಯೆಯಲ್ಲಿ ಖಂಡಿತವಾದ ಕೋಮು ಸೌಹಾರ್ದವಿತ್ತು ಎಂಬ ನಿರ್ಣಯಕ್ಕೆ ನಿಶ್ಚಿತವಾಗಿ ಬರಬಹುದು.

7. ಬಿಜೆಪಿ ನಾಯಕರು ಬಾಬರ್ ಮತ್ತು ಔರಂಗಜೇಬ್‌ಗಳಂತಾಗ ಬಯಸುವವರ ವಿರುದ್ಧವಿದ್ದಾರೆಯೇ ವಿನಾ ಇಡೀ ಮುಸ್ಲಿಂ ಸಮುದಾಯದ ವಿರುದ್ಧವಲ್ಲ.

8. ಒಂದೆಡೆ ಕರಸೇವಕರು ಕರಸೇವೆಯ ಬಗ್ಗೆ ಅತ್ಯುತ್ಸಾಹದಲ್ಲಿದ್ದರೆ ಕೆಲವು ಮುಸ್ಲಿಮ್ ಪುಂಡರು ಗೋರಿಗಳಿಗೆ ಹಾನಿ ಮಾಡಿ ಕೋಮುದ್ವೇಷ ಹುಟ್ಟಿಸುವ ಪ್ರಯತ್ನ ಮಾಡಿದ್ದರು.

9. ಸುಪ್ರೀಂ ಕೋರ್ಟನ್ನು ಎಲ್ಲರೂ ಗೌರವಿಸುತ್ತಾರೆ ಮತ್ತು ಅದರ ಆದೇಶಗಳನ್ನು ಒಪ್ಪಿಕೊಳ್ಳುತ್ತಾರೆ. ಹಾಗಿರುವಾಗ ಸುಪ್ರಿಂಕೋರ್ಟೇ ವಿವಾದಿತ ಸ್ಥಳದಲ್ಲಿ ಯಥಾಸ್ಥಿತಿ ಕಾಪಾಡಬೇಕೆಂದು ಆದೇಶ ನೀಡಿದ್ದಾಗ ಅದರ ವಿರುದ್ಧ ಯಾರೂ ನಡೆಯಬಯಸಲು ಸಾಧ್ಯವೇ ಇಲ್ಲ.

10. ಆ ಕಟ್ಟಡಕ್ಕೆ ಹಾನಿಯುಂಟಾಗುತ್ತದೆಂಬುದನ್ನಾಗಲೀ ಅಥವಾ ನೆಲಸಮಮಾಡಲಾಗುತ್ತದೆಂಬುದನ್ನಾಗಲೀ ಯಾರೂ ನಿರೀಕ್ಷಿಸಿರಲು ಸಾಧ್ಯವಿರಲಿಲ್ಲ. ಅದೇನೇ ಇದ್ದರೂ ಆ ವಿವಾದಿತ ಪ್ರದೇಶದಲ್ಲಿ ನಮಾಜ್ ಮಾಡುತ್ತಿದ್ದ ಬಗ್ಗೆಯೂ ಯಾವುದೇ ಸಾಕ್ಷಿ ಇಲ್ಲ.

– ಶಿವಸುಂದರ್


ಇದನ್ನೂ ಓದಿ: ಬಾಬರಿ ಮಸೀದಿಯನ್ನು ಜಾದೂ ಮೂಲಕ ನೆಲಸಮ ಮಾಡಲಾಯಿತೇ? ಓವೈಸಿ ಪ್ರಶ್ನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights