58 ಕ್ಷೇತ್ರಗಳ ಉಪಚುನಾವಣೆ: BJPಯತ್ತ ಮತದಾರರ ಚಿತ್ತ? ಕರ್ನಾಟಕದಲ್ಲಿ ಏನಾಗಲಿದೆ?
ಕರ್ನಾಟಕದ ಎರಡು ಕ್ಷೇತ್ರಗಳು, ಮಧ್ಯಪ್ರದೇಶ 28 ಸ್ಥಾನಗಳು ಸೇರಿದಂತೆ 11 ರಾಜ್ಯಗಳಲ್ಲಿ 58 ಸ್ಥಾನಗಳಿಗೆ ಉಪಚುನಾವಣೆ ನಡೆದಿದ್ದು, ಇಂದು ಮತ ಎಣಿಕೆ ಆರಂಭವಾಗಿದೆ. ಅಲ್ಲದೆ, ಬಿಹಾರ ವಿಧಾನ ಸಭಾ ಸಾವ್ರರ್ತಿಕ ಚುನಾವಣೆಯ ಮತ ಎಣಿಕೆಯೂ ಇಂದೇ ನಡೆಯುತ್ತಿದ್ದು, ಇಡೀ ದೇಶದ ಚಿತ್ತ ಚುನಾವಣಾ ಫಲಿತಾಂಶದತ್ತ ನೆಟ್ಟಿದೆ.
ಬಿಹಾರದಲ್ಲಿ ಡಬಲ್ ಎಂಜಿನ್ ಸರ್ಕಾರ ಪತನಗೊಂಡು ಮಹಾಘಟಬಂಧನ್ ಅಧಿಕಾರ ಹಿಡಿಯಲಿದೆ. ಉಪಚುನಾವಣೆಗಳಲ್ಲಿ ಬಿಜೆಪಿಯೇ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಗಳು ಹೇಳಿರುವುದು ಫಲಿತಾಂಶದ ಬಗ್ಗೆ ಮತ್ತಷ್ಟು ಕೌತುಕವನ್ನು ಹುಟ್ಟಿಸಿದೆ.
ಮಧ್ಯಪ್ರದೇಶದಲ್ಲಿ ಉಪಚುನಾವಣೆ ನಡೆದ 28 ಸ್ಥಾನಗಳಲ್ಲಿ ಆಡಳಿತಾರೂಢ ಬಿಜೆಪಿಗೆ ಕನಿಷ್ಟ 08 ಕ್ಷೇತ್ರಗಳನ್ನು ಗೆದ್ದುಕೊಳ್ಳುವ ಅಗತ್ಯವಿದೆ. ಅಲ್ಲದೆ, 27 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದ್ದೇ ಆದಲ್ಲಿ ಮತ್ತೆ ಅಧಿಕಾರವನ್ನು ಮರಳಿ ಪಡೆಯಲು ಸಾಧ್ಯವಿದೆ. ಈ ಆಶಯದೊಂದಿಗೆ ಕಾಂಗ್ರೆಸ್ ಹೋರಾಟ ನಡೆಸಿದೆ.
ಕರ್ನಾಟಕದಲ್ಲಿ ಮೈತ್ರಿ ಸರ್ಕಾರವನ್ನು ಪತನಗೊಳಿಸಿ, ರಾಜಾರಾಜೇಶ್ವರಿನಗರದಲ್ಲಿ ಬಿಜೆಪಿ ಸೇರಿದ ಮುನಿರತ್ನ ಹಾಗೂ ಅಕಾಲಿಕ ಮರಣ ಹೊಂದಿದ ಜೆಡಿಎಸ್ ಶಾಸಕ ದಿ. ಸತ್ಯನಾರಾಯಣ ಅವರ ಕ್ಷೇತ್ರ ಶಿರಾದಲ್ಲಿ ಉಪಚುನಾವಣೆ ನಡೆದಿದ್ದು, ಮೂರು ಪಕ್ಷಗಳು ಪ್ರತಿಷ್ಟೆಯಾಗಿ ತೆಗೆದುಕೊಂಡಿವೆ. ಮತದಾರ ಯಾರಿಗೆ ಒಲಿಯಲಿದ್ದಾನೆ ಎಂದು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.
ದೇಶದಲ್ಲಿ ಒಟ್ಟು 58 ಸ್ಥಾನಗಳಲ್ಲಿ ಉಪಚುನಾವಣೆ ನಡೆದಿದ್ದು, ಮಧ್ಯಪ್ರದೇಶ 28, ಉತ್ತರ ಪ್ರದೇಶದಲ್ಲಿ 07, ಗುಜರಾತ್ನಲ್ಲಿ 08, ಮಣಿಪುರ 04, ಹರಿಣಾಯ 01, ಛತ್ತೀಸ್ಘಡ 01, ಜಾರ್ಖಂಡ್ 02, ಕರ್ನಾಟಕ 02, ನಾಗಾಲ್ಯಾಂಡ್ 02, ಒಡಿಶಾ 02 ಸ್ಥಾನಗಳಿಗೆ ಚುನಾವಣಾ ಕದನ ನಡೆದಿದ್ದು, ಇಂದು ಫಲಿತಾಂಶ ಮುಂದಿಡಲಿದೆ.
ಉತ್ತರ ಪ್ರದೇಶದಲ್ಲಿ ಅತ್ಯಾಚಾರ, ಕೊಲೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆಡಳಿತ ವಿರೋಧಿ ಅಲೆ ಇದೆ ಎಂದು ಹೇಳಲಾಗುತ್ತಿದ್ದು, ಬಿಜೆಪಿ ವಿರುದ್ಧ ಫಲಿತಾಂಶ ಬರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಮಧ್ಯಪ್ರದೇಶದಲ್ಲಿ ಆಪರೇಷನ್ ವಿರುದ್ಧ ಮತದಾನ ನಡೆದಿದೆ ಎಂದು ಹೇಳಿದರೂ, ಬಿಜೆಪಿಯೇ ಗೆಲುವು ಸಾಧಿಸಲಿದೆ. ಅಲ್ಲದೆ, ಉಪಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಬಿಜೆಪಿಯೇ ಪಡೆಯಲಿದೆ ಎಂದು ಸಮೀಕ್ಷೆಗಳು ಹೇಳಿದ್ದು, ಫಲಿತಾಂಶ ಏನಾಗಲಿದೆ ಎಂಬುದು ಇಂದು ತಿಳಿಯಲಿದೆ.
ಇದನ್ನೂ ಓದಿ: ಕಾಂಗ್ರೆಸ್ ಭದ್ರಕೋಟೆ ಭೇದಿಸುತ್ತಿದೆ ಬಿಜೆಪಿ: ಸಿದ್ದರಾಮಯ್ಯ ತವರಲ್ಲಿ ಅರಳುತ್ತಿದೆ ಕಮಲ!