ಕಾಂಗ್ರೆಸ್‌ ಭದ್ರಕೋಟೆ ಭೇದಿಸುತ್ತಿದೆ ಬಿಜೆಪಿ: ಸಿದ್ದರಾಮಯ್ಯ ತವರಲ್ಲಿ ಅರಳುತ್ತಿದೆ ಕಮಲ!

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಇನ್ನೂ ಭ್ರದ್ರಕೋಟೆಯಾಗಿ ಉಳಿದಿರುವುದು ಚಾಮರಾಜನಗರ, ಮೈಸೂರು, ರಾಮನಗರ ಜಿಲ್ಲೆಗಳು ಮಾತ್ರ. ಆದರೆ, ಇದೀಗ ಈ ಭಾಗದಲ್ಲಿ ಬಿಜೆಪಿ ನಿಧಾನವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ.

ಈಗಾಗಲೇ ಚಾಮರಾಜನಗರ, ಮೈಸೂರು-ಕೊಡಲು ಲೋಕಸಭಾ ಸ್ಥಾನಗಳನ್ನು ಬಿಜೆಪಿ ಆಕ್ರಮಿಸಿಕೊಂಡಿದ್ದು, ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ತನ್ನ ಪತಾಕೆ ಹಾರಿಸಿದೆ. ಇದೀಗ, ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಮತ್ತು ಹಿರಿಯ ದಲಿತ ಮುಖಂಡ ವಿ.ಶ್ರೀನಿವಾಸ ಪ್ರಸಾದ್ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಕೊಳ್ಳೇಗಾಲ, ಚಾಮರಾಜನಗರ ಮತ್ತು ಹುಣಸೂರು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಮಲವನ್ನು ಅರಳಿಸಿದ್ದಾರೆ.

ಜೆಡಿಎಸ್‌ನ ಹೊರೆಯನ್ನು ಮೊಟಕುಗೊಳಿಸುವ ಉದ್ದೇಶದಿಂದ ಕಾಂಗ್ರೆಸ್ ಮತ್ತು ಬಿಜೆಪಿಗಳು ಹನೂರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು, ಇದೂ ನಿಜಕ್ಕೂ ದಿಗ್ಭ್ರಮೆಯ ವಿಚಾರವಾಗಿದೆ.  ಗ್ರಾಮ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಬಿಜೆಪಿಗೆ ವರದಾನವೂ ಆಗಿರಲಿದೆ.

ಇಡೀ ದೇಶದಲ್ಲಿಯೇ ಪರಸ್ಪರ ಎದುರಾಳಿಗಳಾಗಿರುವ ಬಿಜೆಪಿ-ಕಾಂಗ್ರೆಸ್‌ ಎಲ್ಲಿಯೂ ಹೊಂದಾಣಿಕೆ ಮಾಡಿಕೊಂಡಿದ್ದಿಲ್ಲ. ಆದರೆ ಹನೂರು ಪಟ್ಟಣ ಪಂಚಾಯತಿಯಲ್ಲಿ ಶ್ರೀನಿವಾಸ ಪ್ರಸಾದ್ ಅವರು ಕಾಂಗ್ರೆಸ್ ಶಾಸಕ ನರೇಂದ್ರ ಅವರಿಗೆ ಸಾಥ್‌ ನೀಡಿದ್ದು, ಜೆಡಿಎಸ್‌ಅನ್ನು ಪಂಚಾಯತಿ ಅಧಿಕಾರದಿಂದ ಹೊರಗಿಟ್ಟಿದ್ದಾರೆ. ಈ ಮೂಲಕ 8 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಉಪಾಧ್ಯಕ್ಷ ಪಟ್ಟ ಅಲಂಕರಿಸಿದೆ.

ಕೊಳ್ಳೇಗಾಲದಲ್ಲಿ ಪಕ್ಷೇತರರು ಮತ್ತು ಬಿಎಸ್‌ಪಿ ಅಭ್ಯರ್ಥಿಗಳೊಂದಿಗೆ ಸೇರಿ ಬಿಜೆಪಿ ಅಧಿಕಾರ ಹಿಡಿದಿದೆ.  ನಂಜನಗೂಡು ಮತ್ತು ಗುಂಡ್ಲುಪೇಟೆ ನಗರ ಮುನಿಸಿಪಲ್ ಕೌನ್ಸಿಲ್ ನಲ್ಲಿ ಬಿಜೆಪಿ ತನ್ನ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದಿದೆ.  ಸದ್ಯ ಬಿಜೆಪಿ ಆರು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹೊಂದಿದೆ. ಕಾಂಗ್ರೆಸ್ ಯಳಂದೂರು, ಟಿ ನರಸಿಪುರ ಮತ್ತು ಎಚ್.ಡಿ ಕೋಟೆಗೆ ಸೀಮಿತವಾಗಿದೆ.


ಇದನ್ನೂ ಓದಿ: ‘ಕೈ’ಗೆ  ಹೊನ್ನಾದೇವಿ ಗೆಲುವಿನ ಪ್ರಸಾದ..? : ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೆಚ್ಚಾದ ಉತ್ಸಾಹ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights