ಕುಲಪತಿ ಹುದ್ದೆಗಾಗಿ ಹಣಕೊಟ್ಟು ಆತ್ಮಹತ್ಯೆ ಮಾಡಿಕೊಂಡ್ರಾ ಪ್ರೋ. ಅಶೋಕ್ ಕುಮಾರ್: ತನಿಖೆಗೆ ಡಿಕೆಶಿ ಆಗ್ರಹ!
ಪ್ರೊಫೆಸರ್ ಅಶೋಕ್ ಕುಮಾರ್ ಆತ್ಮಹತ್ಯೆಯ ಹಿಂದೆ ಕುಲಪತಿ ಹುದ್ದೆಗಾಗಿ ಹಣ ಕೊಟ್ಟು ಕೈ ಸುಟ್ಟಿಕೊಂಡಿರುವ ಶಂಕೆ ಇದೆ. ಹಾಗಾಗಿ ಈ ಪ್ರಕರಣವನ್ನು ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರೊಫೆಸರ್ ಅಶೋಕ್ ಕುಮಾರ್ ಆತ್ಮಹತ್ಯೆ ಬಗ್ಗೆ ನಿಗೂಢತೆ ಇದೆ. ನಾಲ್ಕು ಜನ ಕುಲಪತಿಗಳ ನೇಮಕದಲ್ಲಿ ಹಣಕಾಸಿನ ವ್ಯಾಪಾರ ವಹಿವಾಟು ನಡೆಸಲಾಗಿದೆ. ಹಣ ಕೊಟ್ಟರೂ ಕುಲಪತಿಯಾಗಿ ನೇಮಕವಾಗಿಲ್ಲ, ತಾವು ಕೊಟ್ಟ ಹಣ ವಾಪಸ್ ಬರಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಡಿಕೆಶಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಆತ್ಮಹತ್ಯೆಯಲ್ಲಿ ಯಾರ ಕೈವಾಡ ಇದೆಯೋ ಗೊತ್ತಿಲ್ಲ. ಹಣವನ್ನು ಯಾವ ಮಂತ್ರಿ ತೆಗೆದುಕೊಂಡಿದ್ದರೋ ಗೊತ್ತಿಲ್ಲ. 2.5 ಕೋಟಿ ಹಣ ಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ. ಅವರಿಗೆ ಸ್ವಲ್ಪ ದಿನ ಕಾಯುವಂತೆ ಹಣ ಪಡೆದವರು ಹೇಳಿದ್ದರು ಎಂಬ ಮಾತು ಕೇಳಿ ಬರುತ್ತಿದೆ. ಕುಲಪತಿ ಪದವಿಯನ್ನು ಈ ಸರ್ಕಾರದಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದರು.
ಇದೇ ವೇಳೆ ವಿದ್ಯುತ್ ಬೆಲೆ ಏರಿಕೆ ಬಗ್ಗೆ ಮಾತನಾಡಿದ ಅವರು, ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಆದರೆ ರಾಜ್ಯ ಸರ್ಕಾರ ಪ್ರತಿ ಯೂನಿಟ್ ಗೆ 40 ಪೈಸೆ ವಿದ್ಯುತ್ ದರ ಹೆಚ್ಚಳ ಮಾಡಿದೆ. ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಖಂಡಿಸುತ್ತದೆ. ಇದು ಎಲ್ಲ ವರ್ಗಗಳ ವಿರೋಧಿ ಧೋರಣೆಯಾಗಿದೆ. ರೈತರು, ಉದ್ಯಮಿಗಳು ಮಧ್ಯಮ ವರ್ಗದ ಜನರ ವಿರೋಧಿಯಾಗಿದೆ. ಸರ್ಕಾರ ದರ ಏರಿಕೆಯನ್ನು ಕೈ ಬಿಡಬೇಕು ಇನ್ನು ಒಂದೂವರೆ ವರ್ಷ ಯಾವುದೇ ದರ ಏರಿಕೆ ಮಾಡಬಾರದು.ಈಗಿರುವ ದರವನ್ನೆ ಕಡಿಮೆ ಮಾಡಬೇಕು. ಇಲ್ಲವಾದರೆ ಹೋರಾಟ ನಡೆಸುತ್ತೇವೆ ಎಂದು ಡಿಕೆಶಿ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಒಂದು ವಾರದಲ್ಲಿ ವಿದ್ಯುತ್ ದರ ಏರಿಕೆಯನ್ನು ಸರ್ಕಾರ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ನವೆಂಬರ್ 17 ರಿಂದ 20 ರವೆಗೆ ಜಿಲ್ಲಾ ಮಟ್ಟದಲ್ಲಿ ಎಸ್ಕಾಂ ಕಚೇರಿಗಳ ಎದುರು ಪ್ರತಿಭಟನೆ ನಡೆಸಲಾಗುವುದು. ನವೆಂಬರ್ 23 ರಿಂದ 28 ರನವರೆಗೆ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬಿಎಸ್ವೈ ಸುಳಿವು : ಸದ್ದಿಲ್ಲದೇ ದಿಲ್ಲಿ ಯಾತ್ರೆ ಕೈಗೊಂಡ ಸಚಿವಾಕಾಂಕ್ಷಿಗಳು!