ಮಹಾರಾಷ್ಟ್ರ ಪರಿಷತ್ ಚುನಾವಣೆ: BJPಗೆ ಭಾರೀ ಮುಖಭಂಗ; ಗೆಲುವು ಸಾಧಿಸಿದ ಮಹಾ ವಿಕಾಸ್ ಅಘಾಡಿ!

ಮಹಾರಾಷ್ಟ್ರ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಭಾರೀ ಮುಖಭಂಗ ಅನುಭವಿಸಿದ್ದು, 06 ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ಮಾತ್ರ ಗೆದ್ದುಕೊಂಡಿದೆ. ಆಡಳಿತಾರೂಢ  ಮಹಾ ವಿಕಾಸ್ ಅಘಾಡಿ (ಮಹಾಮೈತ್ರಿಕೂಟ) ನಾಲ್ಕು ಸ್ಥಾನಗಳನ್ನು ಗೆದ್ದು ಗೆಲುವಿನ ನಗೆ ಬೀರಿದೆ. ಒಂದು ಸ್ಥಾನವನ್ನು ಸ್ವತಂತ್ರ್ಯ ಅಭ್ಯರ್ಥಿ ಜಯಗಳಿಸಿದ್ದಾರೆ.

ಮಹಾರಾಷ್ಟ್ರದ ಧುಲೇ-ನಂದುರ್ಬಾರ್ ಪದವೀಧರ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಜಯ ಸಾಧಿಸಿದೆ. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಅಮರೀಶ್ ರಷಿಕಲಾಲ್ ಪಟೇಲ್ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಬಿಜೆಪಿಯಿಂದ ಸ್ಪರ್ಧಿಸಿ ಜಯ ಸಾಧಿಸಿದ್ದಾರೆ.

ಮಹಾರಾಷ್ಟ್ರ ಅಧಿಕಾರದ ಚುಕ್ಕಾಣಿ ಹಿಡಿದಿರುವ ಶಿವಸೇನಾ, ಕಾಂಗ್ರೆಸ್‌ ಮತ್ತು ಎನ್‌ಸಿಪಿ ಪಕ್ಷಗಳ ಪೈಕಿ ಶಿವಸೇನಾ ಅಭ್ಯರ್ಥಿ ಶೂನ್ಯ ಸಾಧನೆ ಮಾಡಿದ್ದು, ಕಾಂಗ್ರೆಸ್‌ ಮತ್ತು ಎನ್‌ಸಿಪಿ ಪಕ್ಷಗಳು ತಲಾ 2 ಸ್ಥಾನಗಳನ್ನು ಗೆದ್ದುಕೊಂಡಿವೆ.

“ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶಗಳು ನಮ್ಮ ನಿರೀಕ್ಷೆಯಂತೆ ಬಂದಿಲ್ಲ. ನಾವು ಹೆಚ್ಚಿನ ಸ್ಥಾನಗಳನ್ನು ನಿರೀಕ್ಷಿಸುತ್ತಿದ್ದೇವು. ಆದರೆ ಒಂದನ್ನು ಮಾತ್ರ ಗೆದ್ದಿದ್ದೇವೆ. ಮೂರು ಪಕ್ಷಗಳ (ಮಹಾ ವಿಕಾಸ್ ಅಘಾಡಿ) ಒಟ್ಟು ಶಕ್ತಿಯನ್ನು ನಾವು ತಪ್ಪಾಗಿ ಲೆಕ್ಕ ಹಾಕಿದ್ದೇವೆ” ಎಂದು ಬಿಜೆಪಿ ನಾಯಕ ಫಡ್ನವೀಸ್ ಹೇಳಿದ್ದಾರೆ.

ಸೈದ್ಧಾಂತಿಕವಾಗಿ ವಿರುದ್ಧವಾಗಿರುವ ಪಕ್ಷಗಳ ಮಹಾ ವಿಕಾಸ್ ಅಘಾಡಿಯನ್ನು ಬಿಜೆಪಿ ಅಸ್ಥಿರ ಘಟಕವೆಂದು ಪದೇ ಪದೇ ಅಪಹಾಸ್ಯ ಮಾಡಿತ್ತು. ಈ ಒಕ್ಕೂಟಕ್ಕೆ ಇದು ಮೊದಲ ಚುನಾವಣಾ ಪರೀಕ್ಷೆಯಾಗಿದ್ದು, ಇದರಲ್ಲಿ ಮಹಾ ವಿಕಾಸ್ ಅಘಾಡಿ ಗೆಲುವು ಸಾಧಿಸಿದೆ.


ಇದನ್ನೂ ಓದಿ: ಹೈದರಾಬಾದ್ ಪಾಲಿಕೆ ಚುನಾವಣೆ: BJP ವಿರುದ್ಧ 57 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೂ TRSಗೆ ನಿರಾಸೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights