‘ಕೈ’ ಕಹಳೆ : ಕೃಷಿ ಕಾಯ್ದೆ ವಿರೋಧಿಸಿ ರಾಜಧಾನಿಯಲ್ಲಿ ರೈತರ ಪ್ರತಿಭಟನೆ..!
ರಾಜ್ಯ ರಾಜಧಾನಿಯಲ್ಲಿ ‘ಕೈ’ ಕಹಳೆ ಮೊಳಗಿದ್ದು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆಯ ಕಿಚ್ಚು ಹೆಚ್ಚಾಗಿದೆ. ರಾಜ್ಯದ ಮೂಲೆ ಮೂಲೆಯಿಂದ ರಾಜಧಾನಿಗೆ ರೈತರ ದಂಡೆ ಹರಿದು ಬರುತ್ತಿದೆ.
ಬೆಂಗಳೂರಿನಲ್ಲಿ ಕೈ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು ಭೂಸುರಧಾರಣ ತಿದ್ದುಪಡಿ, ಕಾರ್ಮಿಕ ವಿರೋಧ ನೀತಿ, ಬೆಂಬಲ ಬೆಲೆ ಹೀಗೆ ಕೃಷಿ ವಿರೋಧಿ ಕಾನೂನುಗಳ ವಿರುದ್ಧ ಅನ್ನದಾತರು ರಣಕಹಳೆ ಮೊಳಗಿಸಿದ್ದಾರೆ.
ಇಂದು ರಾಜ್ಯದ ಮೂಲೆ ಮೂಲೆಯಿಂದ ಬೆಂಗಳೂರಿಗೆ ಬಂದು ತಲುಪುತ್ತಿರುವ ರೈತರು ಫ್ರೀಡಂ ಪಾರ್ಕ್ ನಲ್ಲಿ ಒಗ್ಗೂಡಿ ರಾಜಭವನ ಚಲೋ ಹೋರಾಟ ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಕೆಪಿಪಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ” ರೈತರ ಪರ ಸರ್ಕಾರ ಬರಬೇಕು ಎಂದು ಹೋರಾಟಗಾರರು ತಿಳಿಸಿದ್ದಾರೆ. ದೇಶದಲ್ಲಿ ರೈತರನ್ನು ಉಳಿಸಿ ಬೆಳಸಿ ಕಾಪಾಡಬೇಕಾಗಿದೆ.ನಾವು ರಾಜಭವನಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ.ಈ ದೆಶಕ್ಕೆ ರೈತರ ವಿಚಾರ ಒಂದು ದೊಡ್ಡ ಶಕ್ತಿ . ನಾವು ಪಕ್ಷದವರೊಂದಿಗೆ ಮಾತನಾಡಿ ಪ್ರತಿಭಟನೆಗೆ ಮುಂದಾಗಿದ್ದೇವೆ. ರಾಷ್ಟ್ರದ ರೈತರ ಪರವಾಗಿ ಕಾಂಗ್ರೆಸ್ ನಿಲ್ಲಿತ್ತದೆ. ಪೊಲೀಸರು ಅಡ್ಡಹಾಕಿದರೆ ಅಲ್ಲೆ ಮಲಗಿ ಹೋರಾಟ ಮಾಡುತ್ತೇವೆ. ಇದು ಕಾಂಗ್ರೆಸ್ ಪಕ್ಷದ ಹೋರಾಟ ಅಲ್ಲ. ರೈತರ ಪರವಾಗಿ ಹೋರಾಟ” ಎಂದು ಡಿಕೆಶಿ ರೈತರ ಪರ ಧ್ವನಿ ಎತ್ತಿದ್ದಾರೆ.
ಇನ್ನೂ ಮೌರ್ಯ ಸರ್ಕಲ್ ನಲ್ಲಿ ಈ ಬಗ್ಗೆ ಮಾತನಾಡಿದ ಪ್ರತಿಭಟನಾ ನಿರತ ರೈತರು ” ದೆಹಲಿಯ ಗಡಿ ಭಾಗದಲ್ಲಿ 50-60 ಜನ ರೈತರು ಸತ್ತಿದ್ದಾರೆ. ಆದರೂ ಕೇಂದ್ರಕ್ಕೆ ರೈತರ ಧ್ವನಿ ಕೇಳುತ್ತಿಲ್ಲ. ನಾವು ಹೋರಾಟದ ಮೂಲಕ ಕೇಂದ್ರ ಮತ್ತು ರಾಜ್ಯಕ್ಕೆ ಬಿಸಿ ಮುಟ್ಟಿಸಲಿದ್ದೇವೆ.ಬಿಜೆಪಿ ಸರ್ಕಾರ ಬಂದಾಗಿನಿಂದ ರೈತರಿಗೆ ಅನುಕೂಲ ಆಗಿಲ್ಲ. ರೈತ ವಿರೋಧಿ ಕಾನೂನುಗಳನ್ನು ಮಾಡುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ.