ಮೂಗಿಗೆ ನಿಂಬೆರಸ ಹಾಕಿಕೊಂಡ ಶಿಕ್ಷಕ ದಾರುಣ ಸಾವು!
ಮೂಗಿಗೆ ನಿಂಬೆ ಹಣ್ಣಿನ ರಸ ಹಾಕಿಕೊಂಡ ಶಿಕ್ಷಕರೊಬ್ಬರು ಒದ್ದಾಡಿ-ಒದ್ದಾಡಿ ಪ್ರಾಣ ಬಿಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆದಿದೆ.
ಸಿಂಧನೂರಿನ ಶರಣಬಸವೇಶ್ವರ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ಬಸವರಾಜ ಅವರು ಇಂದು ಮೂಗಿಗೆ ನಿಂಬೆ ರಸ ಹಾಕಿಕೊಂಡಿದ್ದಾರೆ. ಬಳಿಕ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಅವರು ಒದ್ದಾಡಿ ಸಾವನ್ನಪ್ಪಿದ್ದಾರೆ ಎಂದು ಬಸವರಾಜ್ ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ವಿಆರ್ಎಲ್ ಸಂಸ್ಥೆಯ ಮಾಲೀಕ, ಬಿಜೆಪಿ ಮುಖಂಡ ವಿಜಯ ಸಂಕೇಶ್ವರ ಅವರು ಮೂಗಿಗೆ ನಿಂಬೆಹಣ್ಣಿನ ರಸ ಹಾಕಿಕೊಂಡರೆ ಆಕ್ಸಿಜನ್ ಸಮಸ್ಯೆಯನ್ನು ನಿವಾರಿಸುತ್ತದೆ. ಕೊರೊನಾ ವಿರುದ್ದ ಹೋರಾಟಬಹುದು. ಇದರಿಂದ ಕೊರೊನಾ ಬರುವುದಿಲ್ಲ ಎಂದು ಹೇಳಿದ್ದರು. ಅವರ ಹೇಳಿಕೆ ಭಾರೀ ವೈರಲ್ ಆಗಿತ್ತು. ಅಲ್ಲದೆ, ಕೊಲಾರದ ಬಿಜೆಪಿ ಸಂಸದ ಕೂಡ ಅವರ ಹೇಳಿಕೆಯ ಸುದ್ದಿವರದಿಯಲ್ಲಿ ಹಂಚಿಕೊಂಡು ಮೂಗಿಗೆ ನಿಂಬೆರಸ ಹಾಕಿಕೊಳ್ಳುವಂತೆ ಸೂಚಿಸಿದ್ದರು. ಇದು ಭಾರೀ ಟೀಕೆಗೆ ಗ್ರಾಸವಾಗಿತ್ತು.
ಈ ಬೆನ್ನಲ್ಲೇ ಮದುವೆ ಮನೆಯೊಂದಲ್ಲಿ ಹಲವಾರು ಮಂದಿ ಮೂಗಿಗೆ ನಿಂಬೆಹಣ್ಣಿನ ರಸ ಹಾಕಿಕೊಂಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು. ಇದೀಗ ಶಿಕ್ಷಕರಾದ ಬಸವರಾಜ್ ಅವರು ಮೂಗಿಗೆ ನಿಂಬೆಹಣ್ಣಿನ ರಸವನ್ನು ಹಾಕಿಕೊಂಡಿದ್ದು, ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ತಟ್ಟೆ-ಗಂಜಲದ ಸಾಲಿಗೆ ನಿಂಬೆಹಣ್ಣು ಸೇರ್ಪಡೆ; ಕೊರೊನಾ ಓಡಿಸಲು ಮೂಗಿಗೆ ನಿಂಬೆರಸ ಹಾಕೊಳಿ ಎಂದ ಸಂಕೇಶ್ವರ ಮತ್ತು BJP ಸಂಸದ!