ಮಗಳನ್ನು ಪ್ರೀತಿಸಿದ್ದಕ್ಕಾಗಿ ಯುವಕನ ಕೈ-ಕಾಲು ಕತ್ತರಿಸಿ ಬರ್ಬರ ಹತ್ಯೆ: ಯುವತಿ ತಂದೆ ಮತ್ತು ಐವರ ಬಂಧನ!
ಯುವತಿಯೊಬ್ಬಳನ್ನು ಪ್ರೀತಿಸಿದ್ದಕ್ಕಾಗಿ ಆಕೆಯ ತಂದೆ ಮತ್ತು ಇತರ ಐವರು ಸೇರಿ ಯುವಕನ ಕೈಗಳು ಹಾಗೂ ಕಾಲುಗಳನ್ನು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ಹತ್ಯೆಯಾದ ಯುವಕ ವೆಂಕಟೇಶ್ ಎಂದು ಹೇಳಲಾಗಿದೆ. ಗುಂಟೂರು ಜಿಲ್ಲೆಯ ಪೆಡಕಕಣಿ ಮಂಡಲದ ಕೊಪ್ಪುರಾವೂರ್ ಗ್ರಾಮದ ಯುವತಿ ಮತ್ತು ಆದೇ ಊರಿನ ಯುವಕನಾಗಿದ್ದ ವೆಂಕಟೇಶ್ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಇವರಿಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಪರಿಚಯವು ಪ್ರೀತಿಯಾಗಿ ಮಾರ್ಪಟ್ಟಿದ್ದು, ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದ ಹುಡುಗಿಯ ಕುಟುಂಬದವರು ವೆಂಕಟೇಶನನ್ನು ಕರೆದು ಗ್ರಾಮದಲ್ಲಿ ಪಂಚಾಯಿತಿ ಮಾಡಿದ್ದರು. ಅಂದಿನಿಂದ ವೆಂಕಟೇಶ್ ಗ್ರಾಮದಿಂದ ದೂರ ಉಳಿದಿದ್ದ. ಆದರೆ, ಆತ ಯುವತಿಯೊಂದಿಗೆ ಆಗಾಗ್ಗೆ ಫೋನ್ ಸಂಭಾಷಣೆ ನಡೆಸುತ್ತಿದ್ದ. ಇದನ್ನು ಗಮನಿಸಿದ ಯುವತಿಯ ತಂದೆ ಭಾಸ್ಕರ್ ರಾವ್ ನಿನ್ನೆ ರಾತ್ರಿ ಯುವಕನನ್ನು ಹಳ್ಳಿಗೆ ಕರೆಸಿದ್ದಾನೆ.
ಗ್ರಾಮಕ್ಕೆ ಬಂದ ಯುವಕನನ್ನು ಭಾಸ್ಕರ್ ರಾವ್ ಮತ್ತು ಇತರ ಐದು ಮಂದಿ ಹಳ್ಳಿಯ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾರಾಣಾಂತಿಕವಾಗಿ ಹಲ್ಲೆ ಮಾಡಿ ಕಾಲು ಮತ್ತು ತೋಳುಗಳನ್ನು ಕತ್ತರಿಸಿದ್ದಾರೆ.
ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕರನ್ನು ಗುಂಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಯುವಕ ಸಾವನ್ನಪ್ಪಿದ್ದಾನೆ.
ಏತನ್ಮಧ್ಯೆ, ದಾಳಿಕೋರರಲ್ಲಿ ಆರು ಮಂದಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. “ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ತನಿಖೆ ನಡೆಸಲಾಗುತ್ತಿದೆ” ಎಂದು ಸಿಐ ಶೋಭನ್ ಬಾಬು ಹೇಳಿದರು.