ಪಾಟ್ನಾದ ಗುಲಾಬಿ ಘಾಟ್ ಬಳಿಯ ಗಂಗಾ ನದಿಯಲ್ಲಿ ಪಿಪಿಇ ಕಿಟ್ಗಳಲ್ಲಿರುವ ಮೃತ ದೇಹಗಳು ಪತ್ತೆ!
ಗಂಗಾ ನದಿಯಲ್ಲಿ ತೇಲುವ ನೂರಾರು ದೇಹಗಳು ಕೊರೊನಾ ಸೋಂಕಿತರ ಮೃತ ದೇಹಗಳು ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ. ಹೌದು.. ಇಂದು ಪಿಪಿಇ ಕಿಟ್ಗಳಲ್ಲಿನ ದೇಹಗಳು ಪಾಟ್ನಾದ ಗುಲಾಬಿ ಘಾಟ್ ಬಳಿಯ ಗಂಗಾದಲ್ಲಿ ತೇಲುತ್ತಿರುವುದು ಸ್ಥಳೀಯರ ಕಣ್ಣಿಗೆ ಬಿದ್ದಿವೆ.
ಬಿಹಾರ ಸರ್ಕಾರ ಬಕ್ಸಾರ್ ಜಿಲ್ಲೆಯ ನದಿಯಿಂದ 71 ಶವಗಳನ್ನು ಹೊರತೆಗೆದ ಎರಡು ದಿನಗಳ ನಂತರ, ಇಂದು ಸ್ಥಳೀಯರು ಪಾಟ್ನಾದ ಗುಲಾಬಿ ಘಾಟ್ ಬಳಿ ತೇಲುತ್ತಿರುವ ಹಲವಾರು ಶವಗಳನ್ನು ಗುರುತಿಸಿದ್ದಾರೆ.
“ಗಂಗಾ ನದಿಯಲ್ಲಿ ತೇಲುತ್ತಿರುವ ಮಗುವಿನ ಶವ ಸೇರಿದಂತೆ ಹಲವಾರು ಶವಗಳು ಪತ್ತೆಯಾಗಿವೆ. ನಮ್ಮ ಜಿಲ್ಲೆಯ ಶವಗಳನ್ನು ನದಿಗೆ ಎಸೆಯದಂತೆ ನಾವು ಮನವಿ ಮಾಡುತ್ತೇವೆ ”ಎಂದು ಪಾಟ್ನಾ ಜಿಲ್ಲಾಧಿಕಾರಿ ಚಂದ್ರಶೇಖರ್ ಸಿಂಗ್ ಹೇಳಿದ್ದಾರೆ.
ಗಂಗಾ ನದಿಯ ಪಾಟ್ನಾದ ಗುಲಾಬಿ ಘಾಟ್ ಅನ್ನು ಅಂತ್ಯಕ್ರಿಯೆಗೆ ಬಳಸಲಾಗುತ್ತದೆ. ಮೃತದೇಹಗಳನ್ನು ಪಾಟ್ನಾದಲ್ಲಿ ಅಥವಾ ಇನ್ನಾವುದೋ ಸ್ಥಳದಲ್ಲಿ ನದಿಗೆ ಎಸೆಯಲಾಗಿದೆಯೇ ಎಂದು ಪರಿಶೀಲಿಸಲಾಗುತ್ತಿದೆ. ಸಿಕ್ಕ ಮೃತದೇಹಗಳನ್ನು ಹೊರತೆಗೆದು ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಚಂದ್ರಶೇಖರ್ ಸಿಂಗ್ ಅವರು ದೇಹಗಳನ್ನು ನದಿಯಲ್ಲಿ ಬಿಡದಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಮಂಗಳವಾರ, ಬಿಹಾರ ಸರ್ಕಾರವು ಬಕ್ಸಾರ್ ಜಿಲ್ಲೆಯ ಗಂಗೆಯಿಂದ 71 ಶವಗಳನ್ನು ಹೊರತೆಗೆದಿದ್ದು, ಈ ಶವಗಳು ಕೋವಿಡ್ -19 ರೋಗಿಗಳದ್ದಾಗಿರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿದೆ.
ಉತ್ತರ ಪ್ರದೇಶದ ಬಲಿಯಾ ನಿವಾಸಿಗಳ ಪ್ರಕಾರ, ನಾರಾಹಿ ಪ್ರದೇಶದ ಉಜಿಯಾರ್, ಕುಲ್ಹಾಡಿಯಾ ಮತ್ತು ಭರೌಲಿ ಘಾಟ್ಗಳಲ್ಲಿ ಕನಿಷ್ಠ 52 ಶವಗಳು ತೇಲುತ್ತಿರುವಂತೆ ಕಂಡುಬಂದಿದೆ. ಆದರೆ, ಅಲ್ಲಿ ಪತ್ತೆಯಾದ ಶವಗಳ ಸಂಖ್ಯೆಯನ್ನು ಜಿಲ್ಲಾ ಅಧಿಕಾರಿಗಳು ತಿಳಿಸಿಲ್ಲ.
ಸೋಮವಾರ, ಹಮೀರ್ಪುರ ಜಿಲ್ಲೆಯ ನಿವಾಸಿಗಳು ಯಮುನಾದಲ್ಲಿ ತೇಲುತ್ತಿರುವ ಐದು ಶವಗಳನ್ನು ಗುರುತಿಸಿದ್ದು ಹೊರತೆಗೆದು ಅಂತ್ಯಕ್ರಿಯೆ ಮಾಡಲಾಗಿದೆ.