‘ನಾನೇನು ತಪ್ಪು ಮಾಡಿಲ್ಲ, ನಾನ್ಯಾಕೆ ಕ್ಷಮೆ ಕೇಳಲಿ?’ – ದಳಪತಿಗಳಿಗೆ ರಾಕ್ ಲೈನ್ ತಿರುಗೇಟು!
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಜೆಡಿಎಸ್ ಬಣದ ಮಧ್ಯೆ ಮತ್ತೊಂದು ಜಟಾಪಟಿ ಜೋರಾಗಿದೆ. ನಿನ್ನೆ ಜೆಡಿಎಸ್ ದಳಪತಿಗಳ ವಿರುದ್ಧ ಮಾತನಾಡಿದ್ದಕ್ಕೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆಯ ಮುಂದೆ ಜೆಡಿಎಸ್ ಕಾರ್ಯಕರ್ತರು ಕ್ಷಮೆಗೆ ಆಗ್ರಹಿಸಿ ಪ್ರತಿಭಟನೆ ಮಾಡಿದರು. ಹೀಗಾಗಿ ‘ನಾನೇನು ತಪ್ಪು ಮಾಡಿಲ್ಲ, ನಾನ್ಯಾಕೆ ಕ್ಷಮೆ ಕೇಳಲಿ?’ ಎಂದು ಮುತ್ತಿಗೆ ಹಾಕಲು ಪ್ರಯತ್ನ ಪಟ್ಟವರಿಗೆ ರಾಕ್ ಲೈನ್ ತಿರುಗೇಟು ಕೊಟ್ಟಿದ್ದಾರೆ.
ಕೆಲ ದಿನಗಳಿಂದ ದಳಪತಿಗಳ ವಿರುದ್ಧ ಸುಮಲತಾ, ರಾಕ್ ಲೈನ್ ಮಾತಿನ ಸಮರ ನಡೆಯುತ್ತಿದೆ. ಹೀಗಾಗಿ ರಾಕ್ ಲೈನ್ ಮನೆಗೆ ಮುತ್ತಿಗೆ ಹಾಕಲು ಜೆಡಿಎಸ್ ಕಾರ್ಯಕರ್ತರು ಪ್ರಯತ್ನಿಸಿದ್ದರು. ಹೀಗಾಗಿ ಜೆಡಿಎಸ್ ಬಣದ ವಿರುದ್ಧ ಕೆಂಡ ಕಾರಿದ ರಾಕ್ ಲೈನ್, ‘ನಾನು ಯಾಕೆ ಕ್ಷಮೆ ಹೇಳಲಿ..? ನಾನೇನ್ ತಪ್ಪು ಮಾಡಿದ್ದೇನೆಂದು ಕ್ಷಮೆ ಕೇಳಲಿ? ರಾಜಕಾರಣ ವಿಚಾರವಾಗಿ ತಪ್ಪು ಮಾತನಾಡಿದ್ನಾ? ನಾನೇನು ತಪ್ಪು ಮಾಡಿದ್ದೇನೆಂದು ತೋರಿಸಲಿ ಆಮೇಲೆ ಕ್ಷಮೆ ಕೇಳುತ್ತೇನೆ’ ಎಂದು ಪ್ರತಿಭಟನೆ ಮಾಡಿದವರಿಗೆ ತಿರುಗೇಟು ಕೊಟ್ಟಿದ್ದಾರೆ.
ತಪ್ಪು ಮಾಡದೇ ಇರುವ ಮನುಷ್ಯ ಯಾರೂ ಇಲ್ಲ. ಆವೇಶದಲ್ಲಿ ತಪ್ಪು ಮಾತನಾಡಿದ್ದರೆ ಕಂಡಿತಾ ಕ್ಷಮೆ ಕೇಳುತ್ತೇನೆ. ಹೆಚ್ ಡಿಕೆ ವಿಚಾರವಾಗಿ ಬಹುತೇಕ ಜನ ತಪ್ಪಾಗಿ ಮಾತನಾಡಿದ್ದಾರೆ. ಅವರ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡಿಲ್ಲ. ಇವತ್ತು ನಮ್ಮ ಮನೆ ಬಳಿ ಬಂದು ಪ್ರತಿಭಟನೆ ಮಾಡಿ ಹೆದರಿಸ್ತೀರಾ? ಎಂದು ವೆಂಕಟೇಶ್ ಟಕ್ಕರ್ ಕೊಟ್ಟಿದ್ದಾರೆ.
ಅಂಬರೀಶ್ ಬಗ್ಗೆ ಮಾತನಾಡಿದಾಗ ನಾನು ಮಾತನಾಡಿದ್ದೇನೆ. ಕುಮಾರಸ್ವಾಮಿ ಅವರಿಗೆ ನಾನು ಬೈದಿಲ್ಲ. ಕೆಟ್ಟ ಪದ ಬಳಸಿಲ್ಲ. ಯಾಕೆ ಕ್ಷಮೆ ಕೇಳಬೇಕು ಎಂದು ಪ್ರಶ್ನಿಸಿದ್ದಾರೆ. ನಾನು ಮನಸ್ಸು ಮಾಡಿದರೆ ಶಾಸಕನೂ ಆಗುತ್ತೇನೆ, ಸಂಸದನೂ ಆಗುತ್ತೇನೆ. ರಾಜಕೀಯ ಬೇಡ ಎನ್ನುವ ಕಾರಣಕ್ಕೆ ನಾನು ದೂರ ಉಳಿದಿರುವೆ ಎಂದಿದ್ದಾರೆ.
ಅಂಬರೀಶ್ ಬಗ್ಗೆ, ಚಿತ್ರರಂಗದ ಬಗ್ಗೆ ಮಾತನಾಡಿದರೆ ನಾನು ಎಂದೂ ಸುಮ್ಮನಿರುವುದಿಲ್ಲ ಎಂದಿದ್ದಾರೆ.