ಮೋದಿಯದ್ದು ಮಾತಿನ ಆತ್ಮ ನಿರ್ಭರತೆ; ರಷ್ಯಾ ನೋಡಿ ಮೋದಿ ಪಾಠ ಕಲಿಯಬೇಕು: ಸಂಜಯ್ ರಾವತ್
ಭಾರತದ ಕೇಂದ್ರ ಸರ್ಕಾರ ಆತ್ಮ ನಿರ್ಭರತೆಯ ಬಗ್ಗೆ ಕೇವಲ ಮಾತನಾಡುತ್ತಿದೆ. ಆದರೆ, ರಷ್ಯಾ ಕೊರೊನಾ ಲಸಿಕೆ ಸಂಶೋಧನೆಯ ಮೂಲಕ ಜಗತ್ತಿಗೆ ಆತ್ಮ ನಿರ್ಭರ ಕಲ್ಪನೆಯ ಪಾಠ ಕಲಿಸಿದೆ. ಬಿಜೆಪಿ ಸರ್ಕಾರ ರಷ್ಯಾದಿಂದ ಪಾಠ ಕಲಿಯಬೇಕಾಗಿದೆ ಎಂದು ಶಿವಸೇನೆಯ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಕೊರೊನಾ ಲಸಿಕೆಯನ್ನು ಅಭಿವೃದ್ಧಿ ಪಡಿಸುವಲ್ಲಿ ರಷ್ಯಾ ಮುಂದಡಿ ಇಟ್ಟಿದೆ. ಇದು ಸೂಪರ್ ಪವರ್ ರಾಷ್ಟ್ರದ ಲಕ್ಷಣವಾಗಿದೆ. ಆದರೆ, ಭಾರತದ ರಾಜಕಾರಣಿಗಳು ಅಮೆರಿಕದ ಜೊತೆ ಪ್ರೇಮದಲ್ಲಿರುವಾಗ ರಷ್ಯಾ ಮಾದರಿಯನ್ನು ಅನುಸರಿಸಲು ಮುಂದಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಕೊರೊನಾ ಸೋಂಕಿಗೆ ಲಸಿಕೆಯನ್ನು ಅಭಿವೃದ್ಧಿ ಪಡಿಸುವಲ್ಲಿ ರಷ್ಯಾವು ವಿಶ್ವದಲ್ಲಿಯೇ ಮೊದಲ ರಾಷ್ಟ್ರವಾಗಿದೆ. ರಷ್ಯಾದ ಲಸಿಕೆಯು ಪರಿಣಾಮಕಾರಿಯಾಗಿದ್ದು, ಕೊರೊನಾ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದಾರೆ. ಸದ್ಯ ಇದು ವಿಶ್ವಾಸಾರ್ಹ ಲಸಿಕೆಯೆಂದು ಸಾಬೀತು ಮಾಡಲು ಸ್ವತಃ ಪುಟಿನ್ ಅವರ ಮಗಳ ಮೇಲೆಯೇ ಲಸಿಕೆಯನ್ನು ಪ್ರಯೋಗಿಸಲಾಗಿದೆ. ರಷ್ಯಾ ಜಗತ್ತಿಗೆ ಲಸಿಕೆಯ ಮಾದರಿಯನ್ನು ದೊರಕುವಂತೆ ಮಾಡುವಲ್ಲಿ ಮುಂದಾಗಿದೆ ಎಂದು ರಾವತ್ ಹೇಳಿದ್ದಾರೆ.
“ರಷ್ಯಾ ಘೋಷಿಸಿದ ಲಸಿಕೆ ಕಾನೂನುಬಾಹಿರವೆಂದು ಜಾಗತಿಕ ಸಮುದಾಯ ಹೇಳುತ್ತಿದೆ. ಆದರೆ, ವ್ಲಾಡಿಮರ್ ಪುಟಿನ್ ಆ ಲಸಿಕೆಯನ್ನು ತಮ್ಮ ಪುತ್ರಿಯ ಮೇಲೆ ಪ್ರಯೋಗಿಸಿ, ರಷ್ಯಾದಲ್ಲಿ ಲಸಿಕೆಯ ಮೇಲೆ ವಿಶ್ವಾಸ ಹೆಚ್ಚುವಂತೆ ಮಾಡಿದ್ದಾರೆ. ಆತ್ಮನಿರ್ಭರತೆಯ ಪಾಠವನ್ನು ರಷ್ಯಾ ಜಗತ್ತಿಗೆ ನೀಡಿದೆ. ನಾವು ಕೇವಲ ಆತ್ಮನಿರ್ಭರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ರಾವತ್ ಹೇಳಿದ್ದಾರೆ.
ಇದನ್ನೂ ಓದಿ: ಸೋಮವಾರದೊಳಗೆ ಕೋವಿಡ್ ಲಸಿಕೆ ಪ್ರಯೋಗದ ಡೇಟಾ ಬಿಡುಗಡೆ ಮಾಡಲಿರುವ – ರಷ್ಯಾ
ಇದನ್ನೂ ಓದಿ: ಕೊರೊನಾ ಲಸಿಕೆ ಸಿದ್ದ, ಸೆಪ್ಟೆಂಬರ್ನಿಂದ ಉತ್ಪಾದನೆಯಾಗಲಿದೆ ಔಷಧಿ ಎಂದ ರಷ್ಯಾ