ಬಂಗಾಳದಲ್ಲಿ ಮಮತಾಗೆ ಮತ್ತಷ್ಟು ಬಲ; TMCಗೆ ಬೆಂಬಲ ಘೋಷಿಸಿದ RJD ನಾಯಕ ತೇಜಸ್ವಿ ಯಾದವ್!
ಪಶ್ಚಿಮ ಬಂಗಾಳ ಚುನಾವಣಾ ಕಣ ರಂಗೇರಿದ್ದು, ಬಂಗಾಳದಲ್ಲಿ ಆರ್ಜೆಡಿ ಪಕ್ಷವೂ ಸ್ಪರ್ಧಿಸುವುದಾಗಿ ತೇಜಸ್ವಿ ಯಾದವ್ ಘೋಷಿಸಿದ್ದಾರೆ. ಅಲ್ಲದೆ, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಿಲಿದ್ದು, ಮೈತ್ರಿ ಜೊತೆಗೆ ಮೂರು ಅಥವಾ ನಾಲ್ಕು ಸ್ಥಾನಗಳಲ್ಲಿ ಮಾತ್ರ ಆರ್ಜೆಡಿ ಅಭ್ಯರ್ಥಿಗಳು ಸ್ಪರ್ಧಿಸುವುದಾಗಿ ತೇಜಸ್ವಿ ತಿಳಿಸಿದ್ದಾರೆ.
ತೇಜಸ್ವಿ ಯಾದವ್ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, “ಬಿಹಾರ ಚುನಾವಣೆಯಲ್ಲಿ ಆರ್ಜೆಡಿ ಜಯಗಳಿಸುವುದನ್ನು ತಡೆಯಲು ಬಿಜೆಪಿ ಎಲ್ಲಾ ರೀತಿಯ ತಂತ್ರಗಳನ್ನು ಬಳಸಿತ್ತು” ಎಂದು ವಾಗ್ದಾಳಿ ನಡೆಸಿದ್ದಾರೆ.
“ಬಿಹಾರದ ಅನೇಕ ಜನರು ಪಶ್ಚಿಮ ಬಂಗಾಳದಲ್ಲಿ ವಾಸಿಸುತ್ತಿದ್ದಾರೆ. ಹಾಗಾಗಿ ಅವರೆಲ್ಲರೂ ಮಮತಾ ಜಿ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡುತ್ತೇನೆ” ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಾಸಿಸುವ ಬಂಗಾಳಿಗಳಲ್ಲದ ಜನರು ರಾಜ್ಯದ ಒಟ್ಟು ಮತದಾರರಲ್ಲಿ ಶೇಕಡಾ 6 ರಷ್ಟು ಇದ್ದಾರೆ. ಅನೇಕ ಸ್ಥಳಗಳಲ್ಲಿ ಬಿಹಾರದಿಂದ ವಲಸೆ ಬಂದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ಒಟ್ಟು ಮತದಾರರಲ್ಲಿ ಶೇಕಡಾ 12 ರಿಂದ 14 ರಷ್ಟಿದೆ. ರಾಜ್ಯದಲ್ಲಿನ ಚುನಾವಣಾ ಕಣವು ಸೆನ್ಷೇಷನ್ ಆಗಿರುವ ಈ ಸಂದರ್ಭದಲ್ಲಿ ಆರ್ಜೆಡಿ ಪಕ್ಷದ ಈ ನಿರ್ಧಾರವು ಮಹತ್ವದ್ದಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಟಿಎಂಸಿ ಮುಖಂಡರೊಬ್ಬರು, “ಶೇಕಡಾ 6 ರಷ್ಟು ಬಂಗಾಳಿಗಳಲ್ಲದ ಮತದಾರರು ಬಿಹಾರ ಮೂಲದವರು. 2019 ರ ಚುನಾವಣೆಯಲ್ಲಿ ಬಿಜೆಪಿಯ ಮತಗಳಿಕೆಯನ್ನು ಗಮನಿಸಿದರೆ, ನಾವು ಕೇವಲ ಶೇಕಡಾ 3ರಷ್ಟು ಮತಗಳಿಂದ ಮುಂದಿದ್ದೇವೆ. ಬಂಗಾಳಿಗಳಲ್ಲದ ಮತದಾರರು ಕೆಲವು ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರವಹಿಸಬಹುದು. ಹಾಗಾಗಿ ಈ ಕ್ರಮವು ಖಂಡಿತವಾಗಿಯೂ ನಮಗೆ ಚುನಾವಣಾ ರೀತಿಯಲ್ಲಿ ಮಹತ್ವದ್ದಾಗಿದೆ” ಎಂದು ಹೇಳಿದರು.
Read Also: ಬಂಗಾಳ ಚುನಾವಣಾ ಸಮೀಕ್ಷೆ: BJP-TMC-ಎಡರಂಗ ತ್ರಿಕೋನ ಸ್ಪರ್ಧೆಯಲ್ಲಿ BJPಗಿಲ್ಲ ಅಧಿಕಾರ!