ಆಫ್ರಿಕನ್ ಪ್ರಜೆಗಳ ದಾಂಧಲೆ ಪ್ರಕರಣ : ಪುಂಡರ ವಿರುದ್ಧ ಮೂರು ಕೇಸ್ ದಾಖಲು!
ಬೆಂಗಳೂರಿನ ಜೆಪಿ ನಗರ ಪೊಲೀಸ್ ಠಾಣೆಯ ಮುಂದೆ ಆಫ್ರಿಕನ್ ಪ್ರಜೆಗಳ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೂರು ಕೇಸ್ ದಾಖಲಾಗಿದ್ದು ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ದೆಹಲಿಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, “ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಾವನ್ನಪ್ಪಿದ ಬಂಧಿತ ವ್ಯಕ್ತಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾನೆ. ಮಾತ್ರವಲ್ಲದೇ ನಿನ್ನೆ ಆಫ್ರಿಕನ್ ಪ್ರಜೆಗಳು ಠಾಣೆಯ ಮುಂದೆ ಗಲಾಟೆ ಮಾಡಿದಾಗ ನಮ್ಮ ಪೊಲೀಸರು ಶಾಂತವಾಗಿದ್ದರು. ಆದರೆ ಇವರ ಪುಂಡಾಟ ವಿಪರೀತವಾಗಿ ಅಮಾನವೀಯವಾಗಿ ವರ್ತಿಸಿದಾಗ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ” ಎಂದರು.
ಮೊನ್ನೆ ರಾತ್ರಿ 5 ಗ್ರಾಂ ಡ್ರಗ್ಸ್ ನೊಂದಿಗೆ ಆಫ್ರಿಕ್ ಪ್ರಜೆಯನ್ನು ಜೆಪಿ ನಗರ ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ಮಾಲು ಎಂಬ ಬಂಧಿತನಿಗೆ ಎದೆ ನೋವು ಕಾಣಿಸಿಕೊಮಡಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದರಿಂದ ಕೋಪಗೊಂಡ ಆಫ್ರಿಕನ್ ಪ್ರಜೆಗಳು ನಿನ್ನೆ ಠಾಣೆಯ ಮುಂದೆ ಧರಣಿ ಕುಳಿತಿದ್ದರು. ಆಕ್ರೋಶದಲ್ಲಿ ಪೊಲೀಸರನ್ನು ನಿಂದಿಸಿದ್ದಾರೆ. ಮಾತ್ರವಲ್ಲದೇ ಪೊಲೀಸರ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಇದೆಲ್ಲಾ ಸಂದರ್ಭದಲ್ಲಿಯೂ ಪೊಲೀಸರು ತಾಳ್ಮೆಯಿಂದ ವರ್ತಿಸಿದ್ದಾರೆ. ಆದರೆ ಆಫ್ರಿಕನ್ ಪ್ರಜೆಗಳ ಪುಂಡಾಟ ತಾರಕ್ಕೇರಿ ಮಹಿಳಾ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡುವ ಮೂಲಕ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.
ಘಟನೆಯಲ್ಲಿ ಕೆಲ ಆಫ್ರಿಕನ್ ಪ್ರಜೆಗಳಿಗೆ ಹಾಗೂ ಪೊಲೀಸರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಜೊತೆಗೆ 7 ಕ್ಕೂ ಹೆಚ್ಚು ಜನರನ್ನು ಅರೆಸ್ಟ್ ಮಾಡಲಾಗಿದ್ದು, ಮೂರು ಕೇಸ್ ಗಳನ್ನು ದಾಖಲಿಸಲಾಗಿದೆ.
ಐವರನ್ನು ಮೆಡಿಕಲ್ ಟೆಸ್ಟ್ ಗೆ ಒಳಪಡಿಸಲಾಗಿದ್ದು ಓರ್ವ ಡ್ರಗ್ಸ್ ಸೇವನೆ ಮಾಡಿರುವುದು ತಿಳಿದು ಬಂದಿದೆ. ಇನ್ನುಳಿದವರ ವರದಿ ಬರಬೇಕಿದೆ.